ಬೆಂಗಳೂರು: ‘ನೆನಪಿದೆ ತಾನೆ ಏಪ್ರಿಲ್ 17, ಅಂದು ಮತದಾನ ಮಾಡದಿದ್ದರೆ ಐದು ವರ್ಷ ಪಶ್ಚಾತ್ತಾಪ ಪಡಬೇಕಾಗುತ್ತದೆ... ನಾನು ಓಟ್ ಮಾಡ್ತೀನಿ, ಅದು ನನ್ನ ಜವಾಬ್ದಾರಿ’
ಬಿಬಿಎಂಪಿ ಮುಂದಿನ ಎನ್.ಆರ್. ಚೌಕದಲ್ಲೀಗ ಇಂತಹ ಬರಹ ಹೊಂದಿದ ಹಳದಿಬಣ್ಣದ ಬಟ್ಟೆಗಳು ಎಲ್ಲರ ಗಮನ ಸೆಳೆಯುತ್ತಿವೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಲ್ಲಿ ಜಾಗೃತಿ ಉಂಟುಮಾಡಲು ಬಿಬಿಎಂಪಿ ಹಾಗೂ ಸೃಷ್ಟಿ ವೆಂಚರ್ಸ್ ಸಂಸ್ಥೆ ಜತೆಯಾಗಿ ಈ ‘ಓಟ್ ಸ್ಪಾಟ್, ನಾನೂ ಓಟ್ ಮಾಡ್ತೀನಿ’ ಜಾಗೃತಿ ಅಭಿಯಾನ ಹಮ್ಮಿಕೊಂಡಿವೆ.
ಸಂದೇಶಗಳ ಈ ವಿಶಿಷ್ಟ ಅಭಿಯಾನಕ್ಕೆ ಬಿಬಿಎಂಪಿ ಆಯುಕ್ತ ಎಂ. ಲಕ್ಷ್ಮಿನಾರಾಯಣ ‘ನಾನೂ ಓಟ್ ಮಾಡ್ತೀನಿ’ ಎಂಬ ಪ್ರತಿಜ್ಞಾ ಪತ್ರವನ್ನು ಮತಪೆಟ್ಟಿಗೆಗೆ ಹಾಕುವ ಮೂಲಕ ಚಾಲನೆ ನೀಡಿದರು.
ಸಾರ್ವಜನಿಕರಿಂದ ಮತ ಹಾಕಲು ಪ್ರತಿಜ್ಞೆ ಸ್ವೀಕರಿಸಿ, ಅದರ ಪತ್ರವನ್ನು ಮತ ಪೆಟ್ಟಿಗೆಗೆ ಹಾಕಿಸಲಾಗುತ್ತಿದೆ. ಎನ್.ಆರ್. ಚೌಕದ ಸುತ್ತ ಒಟ್ಟು 150 ಬಟ್ಟೆ ಬರಹಗಳನ್ನು ತೂಗು ಬಿಡಲಾಗಿದೆ. ಪ್ರತಿಯೊಂದು ಬಟ್ಟೆಯಲ್ಲೂ ಮತದಾನ ಜಾಗೃತಿಗೆ ಒಂದೊಂದು ಸಂದೇಶವಿದೆ.
ಆಕರ್ಷಕ ಅಕ್ಷರಗಳಲ್ಲಿ ಬರೆಯಲಾದ ಈ ಸಂದೇಶಗಳು ರಸ್ತೆಯಲ್ಲಿ ಸಂಚರಿಸುವವರನ್ನು ತಟ್ಟನೆ ತಮ್ಮತ್ತ ಸೆಳೆಯುವಂತೆ ಮಾಡುತ್ತವೆ. ‘ಎನ್.ಆರ್. ಚೌಕ 7,200 ಚದರ ಅಡಿ ವಿಸ್ತೀರ್ಣ ಹೊಂದಿದ್ದು, ಪ್ರಮುಖ ರಸ್ತೆಗಳೆಲ್ಲ ಇಲ್ಲಿ ಸಂಧಿಸುತ್ತವೆ.
ನಿತ್ಯ ಐದು ಲಕ್ಷದಷ್ಟು ವಾಹನಗಳು ಈ ಚೌಕದ ಮೂಲಕ ಸಂಚರಿಸುತ್ತವೆ. ವಾಹನ ದಟ್ಟಣೆ ಹೆಚ್ಚಾಗಿರುವ ಕಾರಣ ಸಂಚಾರದ ವೇಗವೂ ಕಡಿಮೆ ಆಗಿರುತ್ತದೆ. ವಾಹನ ಸವಾರರನ್ನು ಈ ಸಂದೇಶಗಳು ತಲುಪಲಿವೆ’ ಎಂದು ಸೃಷ್ಟಿ ವೆಂಚರ್ಸ್ನ ನಾಗರಾಜ ನಾವುಂದ ಹೇಳುತ್ತಾರೆ.
‘ಪರಿಸರ ಸ್ನೇಹಿಯಾದ ಜಾಹೀರಾತು ವಿಧಾನವನ್ನು ನಾವು ಕಂಡುಕೊಂಡಿದ್ದೇವೆ. ಬಟ್ಟೆ ಹಾಗೂ ನೈಸರ್ಗಿಕ ಬಣ್ಣವನ್ನು ಮಾತ್ರ ಬಳಕೆ ಮಾಡಿದ್ದೇವೆ. 30 ಜನ ಕಲಾವಿದರ ಸಹಕಾರದಿಂದ ಈ ಬಟ್ಟೆ ಬರಹಗಳನ್ನು ಸಿದ್ಧಪಡಿಸಿದ್ದೇವೆ’ ಎಂದರು.
‘ಆಟೊ ಚಾಲಕರು, ವಕೀಲರು, ಶಾಲಾ ಮಕ್ಕಳು ಹಾಗೂ ವಿವಿಧ ವೃತ್ತಿಗಳ ಜನರನ್ನು ಕರೆತಂದು ಜಾಗೃತಿ ಅಭಿಯಾನ ನಡೆಸಲಾಗುತ್ತದೆ. ಯೂತ್ ಫಾರ್ ಸೇವಾ ಸಂಘಟನೆ ಕಾರ್ಯಕರ್ತರು ಮತದಾನ ಜಾಗೃತಿ ನಾಟಕವನ್ನೂ ಪ್ರದರ್ಶನ ಮಾಡಲಿದ್ದಾರೆ’ ಎಂದು ಅವರು ಮಾಹಿತಿ ನೀಡುತ್ತಾರೆ.
‘ಬೆಂಗಳೂರು ನಗರ ಜಿಲ್ಲೆಯಲ್ಲಿ ಶೇ 75ರಷ್ಟು ಮತದಾನದ ಗುರಿ ಹೊಂದಲಾಗಿದೆ’ ಆಯುಕ್ತ ಎಂದು ಲಕ್ಷ್ಮಿನಾರಾಯಣ ತಿಳಿಸುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.