ನವದೆಹಲಿ (ಪಿಟಿಐ): ಜವಾಹರಲಾಲ್ ನೆಹರೂ ಅವರ ಬಗ್ಗೆ ಅಂತರರಾಷ್ಟ್ರೀಯ ಸಮಾವೇಶ ಸಂಘಟಿಸುವ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಹೆಜ್ಜೆ ಹೆಜ್ಜೆಗೂ ತೊಡಕು ಉಂಟು ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ನೆಹರೂ ಅವರ 125ನೇ ಜನ್ಮ ದಿನ ಅಂಗವಾಗಿ ನಡೆಸಲಾಗಿದ್ದ ಅಂತರರಾಷ್ಟ್ರೀಯ ಸಮಾವೇಶ ಮಂಗಳವಾರ ಸಮಾರೋಪಗೊಂಡಿತು. ‘ಸರ್ಕಾರಕ್ಕೆ ಈ ಸಮಾವೇಶ ನಡೆಯುವುದೇ ಬೇಕಿರಲಿಲ್ಲ. ನವೆಂಬರ್ 14ರಂದು (ನೆಹರೂ ಜನ್ಮದಿನ) ಖಾಲಿ ಇದ್ದರೂ ವಿಜ್ಞಾನ ಭವನವನ್ನು ಕಾರ್ಯಕ್ರಮಕ್ಕೆ ನೀಡಲಿಲ್ಲ’ ಎಂದು ಕಾರ್ಯಕ್ರಮ ಆಯೋಜನಾ ಸಮಿತಿ ಪ್ರಧಾನ ಕಾರ್ಯದರ್ಶಿ ಆನಂದ್ ಶರ್ಮಾ ಹೇಳಿದ್ದಾರೆ.
‘ನಮಗೆ ಯಾವುದೇ ಸಹಕಾರ ದೊರೆಯಲಿಲ್ಲ. ವಿಶ್ವ ನಾಯಕರು ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿದರೆ, ನೇರವಾಗಿ ಕಾಂಗ್ರೆಸ್ ಕಚೇರಿಯನ್ನು ಸಂಪರ್ಕಿಸಲು ಸೂಚಿಸುವಂತೆ ಸುತ್ತೋಲೆ ಕಳುಹಿಸಲಾಗಿತ್ತು. ವಿದೇಶದ ನಾಯಕರು ಕಾರ್ಯಕ್ರಮಕ್ಕೆ ಬಾರದಂತೆ ತಡೆಯುವುದು ಇದರ ಉದ್ದೇಶವಾಗಿತ್ತು. ಇದಲ್ಲದೆ ಇತರ ತೊಂದರೆಗಳನ್ನೂ ನೀಡಲಾಗಿದೆ’ ಎಂದು ಆರೋಪಿಸಿದ್ದಾರೆ.
ಪ್ರತಿ ಹಂತದಲ್ಲಿಯೂ ಸಮಸ್ಯೆ ಮತ್ತು ತೊಡಕು ಸೃಷ್ಟಿಸಲಾಗಿತ್ತು. ಇದು ದುರದೃಷ್ಟಕರ ಮತ್ತು ಖಂಡನಾರ್ಹ. ರಾಜಕೀಯ ಪಕ್ಷವೊಂದು ವಿಶ್ವ ನಾಯಕರನ್ನು ಸಮಾವೇಶಕ್ಕೆ ಆಹ್ವಾನಿಸಿದಾಗ ಸಹಕಾರ ಮತ್ತು ಶ್ಲಾಘನೆ ವ್ಯಕ್ತವಾಗಬೇಕು ಎಂದು ಅವರು ಹೇಳಿದರು.
ಪರಂಪರೆ ಅಳಿಸುವವರ ವಿರುದ್ಧ ಕಿಡಿ
ನವದೆಹಲಿ: ಜವಾಹರಲಾಲ್ ನೆಹರೂ ಅವರ ಪರಂಪರೆಗೆ ಸಂಬಂಧಿಸಿದ ಸಂಘರ್ಷ ತೀವ್ರಗೊಂಡಿದ್ದು, ಅವರನ್ನು ಇತಿಹಾಸದಿಂದ ಅಳಿಸಿ ಹಾಕುವವರ ವಿರುದ್ಧ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದ್ದಾರೆ. ನೆಹರೂ ಅವರ 125ನೇ ಜನ್ಮದಿನ ಪ್ರಯುಕ್ತ ಕಾಂಗ್ರೆಸ್ ಆಯೋಜಿಸಿದ್ದ ಎರಡು ದಿನಗಳ ಅಂತರರಾಷ್ಟ್ರೀಯ ಸಮಾವೇಶದ ಸಮಾರೋಪದಲ್ಲಿ ಮಾತನಾಡಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ನೆಹರೂ ಅವರ ಚಿಂತನೆ ಮತ್ತು ರಾಜಕಾರಣ ಇಂದಿಗೂ ಪ್ರಸ್ತುತ ಎಂದರು.
ನೆಹರೂ ಅವರು ಅಗಾಧವಾಗಿ ದೇಶವನ್ನು ಪ್ರೀತಿಸಿದ್ದರು ಮತ್ತು ದೇಶ ಕಟ್ಟಲು ನೆರವಾಗಿದ್ದರು ಎಂದು ರಾಹುಲ್ ಗಾಂಧಿ ಹೇಳಿದರು.
ನೆಹರೂ ಪರಿಕಲ್ಪನೆಗೆ ಈಗ ಸವಾಲು ಎದುರಾಗಿದೆ. ನೆಹರೂ ಪರಂಪರೆಗೆ ನಾವು ಬದ್ಧರಾಗುವುದು ಮಾತ್ರವಲ್ಲದೆ, ಪ್ರಜಾತಂತ್ರ, ಎಲ್ಲರ ಒಳಗೊಳ್ಳುವಿಕೆ ಮತ್ತು ಜಾತ್ಯತೀತ ತತ್ವಗಳನ್ನು ಬಲಪಡಿಸಲು ಹೋರಾಡಬೇಕಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದರು.
ಸಮಾವೇಶದಲ್ಲಿ 20 ದೇಶಗಳು ಮತ್ತು 29 ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಸಮಾವೇಶದಲ್ಲಿ ನೆಹರೂ ಪರಿಕಲ್ಪನೆಗೆ ಸಂಬಂಧಿಸಿದ ಘೋಷಣೆಯನ್ನು ಘಾನಾ ಅಧ್ಯಕ್ಷ ಜಾನ್ ಕುಫೋರ್ ಓದಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.