ಬ್ರಹ್ಮಾವರ: ಕಲೆ ಮತ್ತು ಸಾಹಿತ್ಯ ನಮ್ಮ ಜೀವನದ ಅವಿಭಾಜ್ಯ ಅಂಗ. ಉತ್ತಮ ಸಾಹಿತ್ಯದ ಪುಸ್ತಕಗಳನ್ನು ಓದುವುದರಿಂದ ನಮ್ಮ ಮನಸ್ಸಿಗೆ ನೆಮ್ಮದಿ ಶಾಂತಿ ಸಿಗುತ್ತದೆ ಎಂದು ರೋಟರಿ ಮಾಜಿ ಗವರ್ನರ್ ಹಾಗೂ ಕುಂದಾಪುರದ ವಕೀಲ ಎ.ಎಸ್.ಎನ್ ಹೆಬ್ಬಾರ್ ಹೇಳಿದರು.
ಬಾರ್ಕೂರು ಕೂಡ್ಲಿ ಜನಾರ್ಧನ ನಿಲಯದಲ್ಲಿ ಇತ್ತೀಚೆಗೆ ಬಾರ್ಕೂರು ರೋಟರಿ ಕ್ಲಬ್ ಮತ್ತು ನಡುಮನೆ ಸಾಹಿತ್ಯ ಸಂವಾದ ವೇದಿಕೆ ಆಶ್ರಯದಲ್ಲಿ ನಡೆದ ಸಾಹಿತ್ಯ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಟಿ.ವಿ ಇನ್ನಿತರ ಮಾಧ್ಯಮಗಳ ಕಾರಣ ಪುಸ್ತಕ ಓದುವ ಅಭ್ಯಾಸ ಕಡಿಮೆಯಾಗುತ್ತಿದ್ದು, ನಮ್ಮ ಮಕ್ಕಳಿಗೆ ಹಿರಿಯರು ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಲು ಪ್ರೋತ್ಸಾಹಿಸಬೇಕು ಎಂದರು.
ಬಾರ್ಕೂರು ರೋಟರಿ ಕ್ಲಬ್ ಅಧ್ಯಕ್ಷ ಸತೀಶ್ ಎಸ್.ಅಮೀನ್ ಅಧ್ಯಕ್ಷತೆ ವಹಿಸಿದ್ದರು. ರೋಟರಿಯ ಸಹಾಯಕ ಗವರ್ನರ್ ದಿನೇಶ್ ಹೆಗ್ಡೆ ಆತ್ರಾಡಿ, ಖಜಾನೆ ನಿವೃತ್ತ ನಿರ್ದೇಶಕ ಕೆ.ಕೆ.ನಾಯಕ್, ನಿವೃತ್ತ ಪ್ರಾಂಶುಪಾಲ ಬಿ.ಸೀತಾರಾಮ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅನೇಕ ಸಾಧಕರನ್ನು ಗೌರವಿಸಲಾಯಿತು.
ಸಂವಾದದಲ್ಲಿ ಎಚ್.ಗೋಪಾಲ ಭಟ್, ಸಂಧ್ಯಾ ಶೆಣೈ, ಚಂದ್ರಶೇಖರ ಕೆದ್ಲಾಯ, ಶರಾವತಿ, ಶ್ರೀನಿವಾಸ ಉಪಾಧ್ಯ, ಸ್ವರ್ಗ ರಾಮಚಂದ್ರ ಭಟ್, ಪ್ರಕಾಶ್ ಪಡಿಯಾರ್ ಮರವಂತೆ, ಚೇರ್ಕಾಡಿ ಮಂಜುನಾಥ ರಾವ್ ಮತ್ತಿತರರು ಪಾಲ್ಗೊಂಡರು. ರೋಟರಿಯ ಕಾರ್ಯದರ್ಶಿ ಪ್ರಕಾಶ್ ಆಚಾರ್ಯ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಕೆ.ಸತ್ಯನಾರಾಯಣ ಉಡುಪ ವಂದಿಸಿದರು. ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿದರು.