ನಿಪ್ಪಾಣಿ: ‘ಸಮಾಜದಲ್ಲಿ ನಡೆಯುತ್ತಿರುವ ಬದಲಾವಣೆಯಿಂದ ಪರಸ್ಪರ ಸಂಬಂಧಗಳು ಬೇರ್ಪಡೆಯಾಗುತ್ತಿವೆ. ಶುದ್ಧ ಅಂತಃಕರಣ, ಸಾಧನೆ, ಕರ್ತವ್ಯ, ವಿವೇಕತೆಗಳಿಂದ ಮಾತ್ರ ಸಂಬಂಧಗಳು ಗಟ್ಟಿಗೊಳ್ಳುತ್ತವೆ’ ಎಂದು ಮಹಾರಾಷ್ಟ್ರದ ಹಿರಿಯ ಪತ್ರಕರ್ತ ಅನಂತ್ ದೀಕ್ಷಿತ ಅಭಿಪ್ರಾಯಪಟ್ಟರು.
ಸ್ಥಳೀಯ ಹಿರಿಯ ಪತ್ರಕರ್ತ ಮತ್ತು ಇಲ್ಲಿಗೆ ಸಮೀಪದ ಮಹಾರಾಷ್ಟ್ರದ ಹದ್ದಿನಲ್ಲಿರುವ ದೇವಚಂದ ಮಹಾವಿದ್ಯಾಲಯದ ಪ್ರೊ.ಅಶೋಕ ಪರೀಟ್ ಸೇವಾ ನಿವೃತ್ತಿ ಹೊಂದಿದ ಪ್ರಯುಕ್ತ ಇಲ್ಲಿನ ಮರಾಠಾ ಮಂಡಳ ಸಾಂಸ್ಕೃತಿಕ ಭವನದಲ್ಲಿ ಈಚೆಗೆ ಹಮ್ಮಿಕೊಂಡ ಸತ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ಆಧುನಿಕ ಶಿಕ್ಷಣದಿಂದ ಮೊದಲು ಇದ್ದ ಗುರು– ಶಿಷ್ಯರ ಸಂಬಂಧ, ಪೂಜ್ಯ ಭಾವನೆ ಕಡಿಮೆ ಆಗುತ್ತಿರುವುದು ವಿಷಾದನೀಯ ಎಂದರು. ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ ಮಾತನಾಡಿ, ಪರೀಟ ಅವರು ಉತ್ತಮ ಶಿಕ್ಷಕರಾಗಿದ್ದು, ಅವರ ಮಾರ್ಗದರ್ಶನದಲ್ಲಿ ಹಲವಾರು ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ ಎಂದು ಸ್ಮರಿಸಿಕೊಂಡರು. ಸುಭಾಷ್ ಜೋಶಿ, ಸಾಹಿತಿ ಡಾ. ರಾಜನ್ ಗವಸ್ ಮಾತನಾಡಿದರು.
ಸ್ಥಳೀಯ ಮತ್ತೊಬ್ಬ ಹಿರಿಯ ಪತ್ರಕರ್ತ ಮನೋಹರ ಬನ್ನೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಖಾದಿ ಮತ್ತು ಗ್ರಾಮೋ ದ್ಯೋಗ ನಿಗಮ ಮಂಡಳಿಯ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಡಾ.ಅಚ್ಯುತ್ ಮಾನೆ, ಸ್ಥಳೀಯ ಹಿರಿಯ ಸಾಹಿತಿ ಮಹಾದೇವ ಮೋರೆ, ಸ್ಥಳೀಯ ನಗರ ಸಭೆ ಅಧ್ಯಕ್ಷೆ ನಮ್ರತಾ ಕಮತೆ, ಉಪಾಧ್ಯಕ್ಷ ಬಾಳಾಸಾಹೇಬ ದೇಸಾಯಿ ಸರಕಾರ, ಸ್ಥಾಯಿ ಸಮಿತಿ ಅಧ್ಯಕ್ಷ ಜುಬೇರ್ ಬಾಗವಾನ್ ಇದ್ದರು. ಎಂ.ಎ.ನಾಯಿಕ್ ಸ್ವಾಗತಿಸಿದರು. ರಮೇಶ್ ದೇಸಾಯಿ ಪ್ರಾಸ್ತಾವಿಸಿದರು. ಪ್ರೊ.ಸುರೇಶ್ ಕಾಂಬಳೆ ಪರಿಚಯಿಸಿದರು. ಪ್ರಮೋದ ಕಾಂಬಳೆ ನಿರೂಪಿಸಿದರು.