ಬೆಂಗಳೂರು: ‘ಬದುಕು ಮತ್ತು ಬರಹಗಳಲ್ಲಿ ತಾದಾತ್ಮ್ಯ ಸಾಧಿಸಿರುವ ಹೊ.ಶ್ರೀನಿವಾಸಯ್ಯ ಅವರು ಜೀವನದುದ್ದಕ್ಕೂ ಗಾಂಧೀಜಿಯವರ ಆದರ್ಶವನ್ನು ಮೈಗೂಡಿಸಿಕೊಂಡು ಬದುಕುತ್ತಿರುವ ಬೆರಳೆಣಿಕೆ ಜನರಲ್ಲಿ ಒಬ್ಬರು’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಹಿ.ಚಿ. ಬೋರಲಿಂಗಯ್ಯ ಅಭಿಪ್ರಾಯಪಟ್ಟರು.
ನಗರದಲ್ಲಿ ಬುಧವಾರ ಸಿವಿಜಿ ಇಂಡಿಯಾ ಪುಸ್ತಕ ಪ್ರಕಾಶನದ ಆಶ್ರಯದಲ್ಲಿ ನಡೆದ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಡಾ.ಹೊ. ಶ್ರೀನಿವಾಸಯ್ಯ ಅವರ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಬೆಂಗಳೂರಿನಂತಹ ನಗರದಲ್ಲಿ ಜನಿಸಿ, ಗ್ರಾಮೀಣ ಭಾರತ ಕುರಿತು ಅಪಾರ ಒಲವು ಹೊಂದಿರುವ ಶ್ರೀನಿವಾಸಯ್ಯ ಅವರು ನಗರ ಮತ್ತು ಗ್ರಾಮೀಣ ಭಾರತದ ಕೊಂಡಿ. ತಮ್ಮ ಸುದೀರ್ಘ ಜೀವನದಲ್ಲಿ ಕಂಡಿರುವ 20 ಮತ್ತು 21ನೇ ಶತಮಾನಗಳ ವಿದ್ಯಮಾನ ತುಲನೆ ಮಾಡುವಂತೆ ಅವರ ಬರಹಗಳಿವೆ’ ಎಂದರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಮಾತನಾಡಿ, ‘ತಮ್ಮನ್ನು ತಾವು ಪ್ರಯೋಗಕ್ಕೆ ಒಡ್ಡಿಕೊಂಡು ಜೀವನ ಶಕ್ತಿಯನ್ನು ವೃದ್ಧಿಸಿಕೊಂಡ ಕ್ರಮ ಶ್ರೀನಿವಾಸಯ್ಯ ಅವರು ರಚಿಸಿರುವ ಕೃತಿಗಳಲ್ಲಿ ಕಾಣುತ್ತದೆ’ ಎಂದು ಹೇಳಿದರು.
‘ಮೌನ ತಪಸ್ವಿಯಾಗಿದ್ದುಕೊಂಡು ಶ್ರೀನಿವಾಸಯ್ಯ ಅವರ ಇಡೀ ಬರವಣಿಗೆ ಮತ್ತು ಬದುಕನ್ನು ಅರಳಿಸುವಲ್ಲಿ ಅವರ ಧರ್ಮಪತ್ನಿ ಜಯಲಕ್ಷಮ್ಮ ಅವರ ಪಾತ್ರ ಹಿರಿದು’ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶ್ರೀನಿವಾಸಯ್ಯ ಅವರ ಕೃತಿಗಳನ್ನು ಕುರಿತು ‘ಪ್ರಜಾವಾಣಿ’ಯ ಮುಖ್ಯ ಉಪಸಂಪಾದಕ ಡಾ.ಜಿ.ಬಿ.ಹರೀಶ್, ವಿಮರ್ಶಕ ಡಾ.ಬೈರಮಂಗಲ ರಾಮೇಗೌಡ, ಗ್ರಂಥಾಲಯ ಇಲಾಖೆಯ ನಿವೃತ್ತ ನಿರ್ದೇಶಕ ಕೆ.ಜಿ.ವೆಂಕಟೇಶ್ ಅವರು ಮಾತನಾಡಿದರು.
ಆದಿಚುಂಚನಗಿರಿಯ ವಿಜಯನಗರ ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ, ಡಾ.ಹೊ.ಶ್ರೀನಿವಾಸಯ್ಯ, ಪುಸ್ತಕ ಪ್ರಕಾಶನದ ಸಿವಿಜಿ ಚಂದ್ರು ಮತ್ತು ಗಿರಿಜಾ ಚಂದ್ರು ಉಪಸ್ಥಿತರಿದ್ದರು.
ಬಿಡುಗಡೆಯಾದ ಕೃತಿಗಳು
ಬಾಳ ಹಾದಿ (ಆತ್ಮಕಥೆ), ತಂತ್ರಜ್ಞಾನ ಜನಕರು, ಕೈಗಾರಿಕೆ ಜನಕರು (ವ್ಯಕ್ತಿಚಿತ್ರಗಳು), ಆರೋಗ್ಯವೇ ಭಾಗ್ಯ (ಆರೋಗ್ಯ ಚಿಂತನೆ), ನೀರೇ ಔಷಧಿ (ಪ್ರಕೃತಿ ಚಿಕಿತ್ಸೆ), ರಾಮಯ್ಯ ಕಂಡ ಜರ್ಮನಿ ಮತ್ತು ಸಿಂಹಳದಲ್ಲಿ ಶಶಿ (ಮಕ್ಕಳಿಗಾಗಿ ಪ್ರವಾಸ ಕಥನಗಳು)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.