ಬೆಂಗಳೂರು: ‘ಬಡವರಿಗಾಗಿ ಅನ್ನ ಭಾಗ್ಯ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆಗೊಳಿಸಿದ್ದರೂ ಬಹುತೇಕ ಬಡವರಿಗೆ ಯೋಜನೆಯ ಲಾಭ ಸಿಕ್ಕಿಲ್ಲ. ಬರ ಎದುರಾಗಿದೆ ನಾವು ಹೇಗೆ ಬದುಕಬೇಕು?’
ಮಂಗಳವಾರ ನಡೆದ ತರಳು ಗ್ರಾಮ ಪಂಚಾಯಿತಿ ಸಭೆಯಲ್ಲಿ ಆಹಾರ ನಿರೀಕ್ಷಕ ಹನುಮಂತೇಗೌಡರನ್ನು ಗ್ರಾಮದ ನಾಗರಿಕರು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದು ಹೀಗೆ.
‘ಬಿಪಿಎಲ್ ಕಾರ್ಡ್ ಶ್ರೀಮಂತರ ಪಾಲಾಗಿವೆ. ಬಡವರಿಗೆ ದೊರಕಬೇಕಾದ ಅಕ್ಕಿ, ಸೀಮೆ ಎಣ್ಣೆ ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದರೂ ಅದನ್ನು ಕೇಳುವವರಿಲ್ಲ’ ಎಂದು ಗ್ರಾಮಸ್ಥರು ದೂರಿದರು. ಈ ವೇಳೆ ಮಧ್ಯ ಪ್ರವೇಶಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಬಿ.ಟಿ. ದಯಾನಂದ ರೆಡ್ಡಿ, ‘ಬಡವರಿಗೆ ಬಿಪಿಎಲ್ ಕಾರ್ಡ್ ನೀಡಲು ಕ್ರಮ ಕೈಗೊಳ್ಳಬೇಕು. ನಿತ್ಯ ಪಡಿತರ ಅಂಗಡಿ ತೆರೆದು ಆಹಾರ ಧಾನ್ಯ ಸರಿಯಾದ ರೀತಿಯಲ್ಲಿ ವಿತರಣೆ ಮಾಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.