ಬೆಂಗಳೂರು: ‘ಪರಿಸರದಲ್ಲಿನ ಸೂಕ್ಷ್ಮತೆಯನ್ನು ಅವಲೋಕಿಸಿ ಅದನ್ನು ಗ್ರಹಿಸಿದಾಗ ಮಾತ್ರ ಕವಿತೆ ಹುಟ್ಟಲು ಸಾಧ್ಯ’ ಎಂದು ಕವಯತ್ರಿ ಮಮತಾ ಜಿ ಸಾಗರ ಹೇಳಿದರು.
ಪಂಚಮುಖಿ ನಟರ ಸಮೂಹವು ಸೋಮವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ‘ಆಮೋದ ರಂಗೋತ್ಸವ’ದಲ್ಲಿ ಬಹುಭಾಷಾ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಕವಿತೆಗಳಿಗೆ ಆರಂಭ ಇರುತ್ತದೆಯೇ ವಿನಾ ಅಂತ್ಯ ಇರುವುದಿಲ್ಲ. ಕವಿತೆಗಳನ್ನು ರಚಿಸುವಾಗ ಅದನ್ನು ನಿರೂಪಿಸುವ ಶೈಲಿ ಉತ್ತಮವಾಗಿದ್ದರೆ ಮಾತ್ರ ಕಾವ್ಯಪ್ರಿಯರಿಗೆ ಸುಲಭವಾಗಿ ಗ್ರಹಿಸಲು ಸಾಧ್ಯವಾಗುತ್ತದೆ’ ಎಂದರು. ಕವಿಗೋಷ್ಠಿಯಲ್ಲಿ 11 ಯುವಕವಿಗಳು ವಿವಿಧ ಭಾಷೆಯ ಕವಿತೆ ವಾಚಿಸಿದರು.