ಬೆಂಗಳೂರು: ವಾರಾಂತ್ಯದಲ್ಲಿ ನಗರದ ಬಾರ್ ಮತ್ತು ಹೋಟೆಲ್ಗಳಿಗೆ ಮಧ್ಯರಾತ್ರಿ ಒಂದು ಗಂಟೆವರೆಗೆ ವಹಿವಾಟು ನಡೆಸಲು ಅನುಮತಿ ನೀಡಿರುವುದನ್ನು ಪುನರ್ಪರಿಶೀಲಿಸುವಂತೆ ಬಿಜೆಪಿಯ ವಿಮಲಾಗೌಡ, ತಾರಾ ಅನೂರಾಧ ಅವರು ಸೋಮವಾರ ವಿಧಾನ ಪರಿಷತ್ನಲ್ಲಿ ಸರ್ಕಾರವನ್ನು ಒತ್ತಾಯಿಸಿದರು.
ಪರಿಷತ್ತಿನಲ್ಲಿ ಸೋಮವಾರ ನಡೆದ ಅತ್ಯಾಚಾರ ವಿಷಯದ ಕುರಿತ ಚರ್ಚೆಯಲ್ಲಿ ಮಾತನಾಡಿದ ಇಬ್ಬರೂ ಸದಸ್ಯರು, ಇಂತಹ ಅಮಾನವೀಯ ಕೃತ್ಯಗಳಲ್ಲಿ ಯಾರೂ ರಾಜಕೀಯ ಮಾಡಬಾರದು. ಪಕ್ಷಾತೀತವಾಗಿ ಒಟ್ಟುಗೂಡಿ ಮಹಿಳೆಯರ ರಕ್ಷಣೆಗೆ ಮುಂದಾಗಬೇಕು ಎಂದು ಅಭಿಪ್ರಾಯಪಟ್ಟರು.
ಭೋಜನ ವಿರಾಮದ ನಂತರ ಕಲಾಪ ಆರಂಭವಾದಾಗ ವಿಷಯ ಪ್ರಸ್ತಾಪಿಸಿದ ತಾರಾ ಅನೂರಾಧ, ‘ಸದನದಲ್ಲಿ ನಾವು ಮಕ್ಕಳ ಹಕ್ಕುಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದೇವೆ. ಆದರೆ ಹಕ್ಕುಗಳು ಅವರಿಗೆ ಸಿಗುವಂತೆ ಮಾಡಿದ್ದೇವೆಯೇ? ಮಾಡಿದ್ದರೆ, ಕಂದಮ್ಮಗಳ ಮೇಲೆ ಪೈಶಾಚಿಕ ಕೃತ್ಯ ನಡೆಯುತ್ತಿರಲಿಲ್ಲ’ ಎಂದರು.
‘ಅತ್ಯಾಚಾರಕ್ಕೆ ಸಂಬಂಧಿಸಿದ ಕಾನೂನಿಗೆ ತಿದ್ದುಪಡಿ ತಂದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಅವರು ಒತ್ತಾಯಿಸಿದರು.
ವಿಮಲಾಗೌಡ ಮಾತನಾಡಿ, ‘ಬೆಂಗಳೂರಿನಲ್ಲಿ ವಿವಿಧ ಕಡೆಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರು ಎಷ್ಟು ಆಕ್ರೋಶಗೊಂಡಿದ್ದಾರೆ ಎಂದರೆ, ಕಾನೂನನ್ನು ಕೈಗೆತ್ತಿಕೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ. ಒಂದು ವೇಳೆ ಮನೆಗಳಲ್ಲಿರುವ ಹೆಣ್ಣುಮಕ್ಕಳು ಬೀದಿಗಿಳಿದರೆ, ರಾಜ್ಯದ ಕಾನೂನು ಸುವ್ಯವಸ್ಥೆ ಏನಾಗಬಹುದು? ಸರ್ಕಾರ ಇದಕ್ಕೆ ಅವಕಾಶ ಕೊಡಬಾರದು’ ಎಂದರು.
‘ಗೃಹ ಸಚಿವರು ಹಾರಿಕೆಯ ಉತ್ತರ ನೀಡಬಾರದು. ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆಯಲಿಲ್ಲವೇ ಎಂದೂ ಕೇಳಬಾರದು. ಅತ್ಯಾಚಾರ ತಡೆಗೆ ಸಾಂಘಿಕ ಹೋರಾಟ ಬೇಕು. ಪಕ್ಷಭೇದ ಮರೆತು ಎಲ್ಲರೂ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.
‘ಒಂದು ವೇಳೆ ಸರ್ಕಾರ ಏನೂ ಕ್ರಮ ಕೈಗೊಳ್ಳದೆ ಹೋದರೆ, ಮಹಿಳೆಯರು ನಡೆಸುತ್ತಿರುವ ಹೋರಾಟದಲ್ಲಿ ನಾವೂ ಸೇರಬೇಕಾಗುತ್ತದೆ’ ಎಂದೂ ಅವರು ಹೇಳಿದರು.
ಬಿಜೆಪಿಯ ರಾಮಕೃಷ್ಣ ಮತ್ತು ಅಶ್ವತ್ಥನಾರಾಯಣ ಮಾತನಾಡಿ, ಪೊಲೀಸ್ ತನಿಖೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು. ತನಿಖಾಧಿಕಾರಿಗಳಿಗೆ ಪೂರ್ಣ ಸ್ವಾತಂತ್ರ್ಯ ನೀಡಬೇಕು ಎಂದು ಒತ್ತಾಯಿಸಿದರು. ಬಿಜೆಪಿಯ ಗೋ. ಮಧುಸೂದನ್, ‘ನಮ್ಮ ದೇಶದಲ್ಲಿ ಸಮಾಜ, ಸಂಸ್ಕೃತಿ ಮೇಲಿನ ಭಕ್ತಿ ಕಡಿಮೆಯಾಗುತ್ತಿದೆ. ಕಾನೂನು ಮೇಲಿನ ಭಯವೂ ಕುಗ್ಗುತ್ತಿದ್ದು, ಅದು ಆಟಿಕೆಯ ವಸ್ತುವಾಗಿದೆ’ ಎಂದರು.
‘ಸರ್ಕಾರದ ವ್ಯವಸ್ಥೆಯಲ್ಲಿ ಜಾತೀಯತೆ ಮೇಳೈಸಿದೆ. ನೌಕರರು ಕೂಡ ಜಾತಿ ಸಂಘಟನೆಗಳನ್ನು ರಚಿಸಿಕೊಂಡಿದ್ದಾರೆ. ಇದರಿಂದಾಗಿ ಅವರಿಗೆ ರಕ್ಷಣೆ ಸಿಗುತ್ತಿದೆ. ಅಪರಾಧಿಗಳೂ ಪ್ರಭಾವ ಬಳಸಿ ರಾಜಕೀಯ ರಕ್ಷಣೆ ಪಡೆದುಕೊಳ್ಳುತ್ತಾರೆ. ಅಪರಾಧಿಗಳ ಪರವಾಗಿ ಶಾಸಕರು, ಸಚಿವರು ಮಾತನಾಡುವುದನ್ನು ಬಿಡಬೇಕು’ ಎಂದು ಹೇಳಿದರು.
ಬಿಜೆಪಿಯ ಭಾನುಪ್ರಕಾಶ್, ಕಾಂಗ್ರೆಸ್ನ ಮೋಟಮ್ಮ, ಜಯಮಾಲಾ, ಅಲ್ಲಮಪ್ರಭುಪಾಟೀಲ್, ಜೆಡಿಎಸ್ನ ಎಂ.ಆರ್. ಹುಲಿನಾಯ್ಕರ್ ಸೇರಿದಂತೆ ಹಲವು ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದರು.
‘ಹೋಟೆಲ್ ಮತ್ತು ಬಾರ್ಗಳನ್ನು ಒಂದು ಗಂಟೆವರೆಗೆ ತೆರೆಯಲು ಅವಕಾಶ ನೀಡಿರುವುದರಿಂದ ಅಪರಾಧ ಪ್ರಕರಣಗಳು ಹೆಚ್ಚಾದ ವರದಿ ಇಲ್ಲ’ ಎಂದು ಗೃಹಸಚಿವ ಕೆ.ಜೆ.ಜಾರ್ಜ್ ಉತ್ತರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.