ಬೆಂಗಳೂರು: ‘ಎಲ್ಲರೂ ತಿಳಿದಂತೆ ಬುದ್ಧ ಮಧ್ಯರಾತ್ರಿಯಲ್ಲಿ ಅರಮನೆ ಬಿಟ್ಟು ಓಡಲಿಲ್ಲ. ನದಿ ನೀರಿನ ಹಂಚಿಕೆ ವಿವಾದದಲ್ಲಿ ಪಕ್ಕದ ರಾಜ್ಯದ ಮೇಲೆ ದಂಡೆತ್ತಿ ಹೋಗಿ ಹಿಂಸಾಚಾರ ನಡೆಸಲು ಒಪ್ಪದೆ ರಾಜವೈಭವದಿಂದ ಪರಿತ್ಯಕ್ತನಾದ’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ಡಾ.ಎಂ. ಶಶಿಧರ ವಿಶ್ಲೇಷಿಸಿದರು.
ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿಗಳ ಒಕ್ಕೂಟ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ಸಮಕಾಲೀನ ಸಂದರ್ಭದ ಬುದ್ಧ ಮಾರ್ಗದ ಒಲವು–ನಿಲುವು’ ವಿಷಯವಾಗಿ ಮಾತನಾಡಿದರು.
‘ಶಾಕ್ಯರ ಆಳ್ವಿಕೆಯಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗದಂತೆ ತಡೆಯುವ ಸಲುವಾಗಿ ಆತ ಮಧ್ಯರಾತ್ರಿ ಓಡಿಹೋದ ಎಂಬ ಕತೆ ಕಟ್ಟಲಾಯಿತು’ ಎಂದು ಪ್ರತಿಪಾದಿಸಿದರು.
ವಿಧಾನ ಪರಿಷತ್ ಸದಸ್ಯೆ ಮೋಟಮ್ಮ, ‘ತತ್ಕ್ಷಣ ಎಲ್ಲರೂ ಬೌದ್ಧಧರ್ಮ ಸ್ವೀಕರಿಸಬೇಕು ಎನ್ನುವ ಕರೆಯನ್ನೇನೂ ನಾನು ಕೊಡಲಾರೆ. ಆದರೆ, ನಮ್ಮ ಸಮಾಜವನ್ನು ಸಮಾನತೆಯತ್ತ ಕೊಂಡೊಯ್ಯಬೇಕು ಎನ್ನುವುದು ನನ್ನ ಒತ್ತಾಯ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರೊ. ಸಿದ್ದಲಿಂಗಯ್ಯ, ‘ಸಮಾಜವನ್ನು ಸರಿದಾರಿಯಲ್ಲಿ ಒಯ್ಯಲು ಬೌದ್ಧ ಮತದ ತತ್ವ ಸಹಕಾರಿ’ ಎಂದು ತಿಳಿಸಿದರು.
ರಾಜ್ಯ ಹುಜೂರ್ ಖಜಾನೆಯ ಜಂಟಿ ನಿರ್ದೇಶಕಿ ವಿ.ಭಾಗ್ಯಲಕ್ಷ್ಮಿ, ಜಾತಿ ವ್ಯವಸ್ಥೆಯಿಂದ ದಾವಣಗೆರೆಯಲ್ಲಿ ತಾವು ಮನೆ ಪಡೆಯಲು ಅನುಭವಿಸಿದ ಸಂಕಷ್ಟವನ್ನು ವಿವರಿಸಿದರು.
‘ಮೇಲ್ವರ್ಗದ ಜನ ದಲಿತರನ್ನೂ ಅಪ್ಪಿಕೊಳ್ಳುವ ಹೃದಯವಂತಿಕೆ ಮೆರೆಯಬೇಕು ಮತ್ತು ಕೆಳವರ್ಗದ ಜನ ಕೀಳರಿಮೆ ಬಿಡಬೇಕು. ಅಲ್ಲಿಯವರೆಗೆ ಜಾತಿ ವ್ಯವಸ್ಥೆ ಅಳಿಯದು’ ಎಂದು ಅವರು ಪ್ರತಿಪಾದಿಸಿದರು.
ಒಕ್ಕೂಟದ ಅಧ್ಯಕ್ಷ ಬಿ.ಕುಮಾರ ವೇದಿಕೆ ಮೇಲಿದ್ದರು.