ನರಗುಂದ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಎಲ್ಲ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡುತ್ತಿದ್ದು ವಿಶ್ವವೇ ಭಾರತದತ್ತ ನೋಡುವಂತೆ ಮಾಡಿದೆ ಎಂದು ಮಾಜಿ ಸಚಿವ ಸಿ.ಸಿ.ಪಾಟೀಲ ಹೇಳಿದರು.
ಭಾನುವಾರ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಮಹಾ ಸಂಪರ್ಕ ಅಭಿಯಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿಯವರು ಕೇವಲ ಒಂದು ವರ್ಷದಲ್ಲಿ ಹಲವಾರು ಜನಪರ ಯೋಜನೆ ಜಾರಿ ಮಾಡುವ ಮೂಲಕ ಜನಮಾನಸದಲ್ಲಿ ನೆಲೆಸಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ನೇತೃತ್ವದಲ್ಲಿ ಬಿಜೆಪಿ ವಿಶ್ವದ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿ ತನ್ನ ಸಿದ್ಧಾಂತಗಳ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ದೇಶದಲ್ಲಿ ಕಡಿಮೆ ಅವಧಿಯಲ್ಲಿ 10 ಕೋಟಿ ಸದಸ್ಯರನ್ನು ಬಿಜೆಪಿ ಹೊಂದಿದ್ದು, ನರಗುಂದ ಮತಕ್ಷೇತ್ರದಲ್ಲಿ 45 ಸಾವಿರ ಬಿಜೆಪಿ ಸದಸ್ಯರಿದ್ದಾರೆ. ಇದರ ಸಂಖ್ಯೆ ದಿನ ದಿನಕ್ಕೆ ಹೆಚ್ಚಾಗುತ್ತಿರುವುದಕ್ಕೆ ಬಿಜೆಪಿ ಮೇಲೆ ಜನರು ತೋರುತ್ತಿರುವ ವಿಶ್ವಾಸಕ್ಕೆ ಸಾಕ್ಷಿಯಾಗಿದೆ.
ಕೇಂದ್ರ ಸರ್ಕಾರ ಉತ್ತಮ ಆಡಳಿತ, ಅಭಿವೃದ್ಧಿ ಹಾಗೂ ಎಲ್ಲರಿಗೂ ಸುರಕ್ಷೆ ನೀಡುವ ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸಿದೆ. ಇದರಿಂದಾಗಿ ದೇಶದ 20 ರಾಜ್ಯಗಳಲ್ಲಿ ಜನಾದೇಶ ಪಡೆಯುವಲ್ಲಿ ಯಶಸ್ವಿಯಾಗಿದೆ. ಜನ ಪರ ರಾಜ ನೀತಿಯನ್ನು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಮುಟ್ಟಿಸುವಲ್ಲಿ ಎಲ್ಲ ಕಾರ್ಯಕರ್ತರು ಶ್ರಮಿಸಿ ಶ್ರೇಷ್ಠ ಭಾರತ ನಿರ್ಮಿಸಲು ಮುಂದಾಗುವಂತೆ ಪಾಟೀಲ ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಬಿಜೆಪಿ ಜಿಲ್ಲಾ ಮುಖಂಡ ಎಂ.ಎಸ್.ಕರಿಗೌಡ್ರ ಮಾತನಾಡಿದರು. ಕಾರ್ಯಕ್ರಮದಲ್ಲಿ ಮೋಹನ ಮಾಳಶೆಟ್ಟಿ, ಬಸವಣ್ಣೆಪ್ಪ ತಳವಾರ, ಜಿಪಂ ಸದಸ್ಯ ಎಂ.ಎಸ್.ಪಾಟೀಲ, ಎ.ಎಂ.ಹುಡೇದ, ಪುರಸಭೆ ಉಪಾಧ್ಯಕ್ಷ ಕಿರಣ ಮುಧೋಳೆ, ಪ್ರಕಾಶ ಪಟ್ಟಣಶೆಟ್ಟಿ ಇತರರು ಇದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಒಂದು ವರ್ಷದಲ್ಲಿ ಜನಪ್ರಿಯ ಆಡಳಿತ ನೀಡಿದ್ದಾರೆ. ಇಡಿ ವಿಶ್ವವೇ ಭಾರತದತ್ತ ತಿರುಗಿದೆ
ಸಿ.ಸಿ. ಪಾಟೀಲ, ಬಿಜೆಪಿ ಮುಖಂಡ