ಬೆಂಗಳೂರು: ‘ಭಾರತದೊಂದಿಗೆ ವ್ಯಾಪಾರ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಸಹಭಾಗಿತ್ವ ವಹಿಸಲು ಅಮೆರಿಕ ಉತ್ಸುಕವಾಗಿದೆ’ ಎಂದು ಅಮೆರಿಕದ ಸೆನೆಟ್ ಸದಸ್ಯೆ ತುಳಸಿ ಗಬ್ಬಾರ್ಡ್ ಹೇಳಿದರು.
ಸಾಫ್ಟ್ವೇರ್ ಮತ್ತು ಸೇವಾ ಸಂಸ್ಥೆಗಳ ರಾಷ್ಟ್ರೀಯ ಒಕ್ಕೂಟ (ನಾಸ್ಕಾಂ) ಭಾನುವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎರಡೂ ದೇಶಗಳ ಆರ್ಥಿಕ ಅಭಿವೃದ್ಧಿಯ ದೃಷ್ಟಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಹಭಾಗಿತ್ವ ವಹಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಸೇನಾ ಸಹಭಾಗಿತ್ವ, ಸೈಬರ್ ಭದ್ರತೆಯ ಕ್ಷೇತ್ರದಲ್ಲೂ ಜೊತೆಯಾಗಿ ದುಡಿಯುವ ಬಗ್ಗೆ ಅಮೆರಿಕ ಆಸಕ್ತಿ ಹೊಂದಿದೆ ಎಂದರು.
ಅಮೆರಿಕದಲ್ಲಿ ಶೇಕಡ 30ರಷ್ಟು ಉದ್ಯಮಿಗಳು ಭಾರತೀಯ ಮೂಲದವರು. ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಸಂಬಂಧಿ ವೀಸಾ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಹೇಳಿದರು. ಸಹಭಾಗಿತ್ವ ಕುರಿತು ಸಣ್ಣ ಉದ್ದಿಮೆದಾರರು, ಕೈಗಾರಿಕೋದ್ಯಮಿಗಳು, ಸ್ವಯಂಸೇವಾ ಸಂಸ್ಥೆಗಳು, ಸರ್ಕಾರಗಳ ಜೊತೆ ಚರ್ಚೆ ನಡೆಸಲು ಭಾರತ ಪ್ರವಾಸ ಕೈಗೊಂಡಿರುವುದಾಗಿ ತಿಳಿಸಿದರು.
‘ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಚರ್ಚಿಸಲಾಗಿದೆ. ಗೋವಾ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದೇನೆ. ಮುಂಬೈ, ಗುಜರಾತ್ಗೂ ಭೇಟಿ ನೀಡಲಿದ್ದೇನೆ’ ಎಂದರು.
ಯೋಗ ದಿನಕ್ಕೆ ಬೆಂಬಲ: ನರೇಂದ್ರ ಮೋದಿಯವರು ಅಮೆರಿಕ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ವಿಶ್ವ ಯೋಗ ದಿನದ ಬಗ್ಗೆ ಪ್ರಸ್ತಾಪಿಸಿದ್ದರು. ಈ ಒತ್ತಾಯಕ್ಕೆ 70 ದೇಶಗಳು ಸಹಿ ಹಾಕಿವೆ. ಯೋಗದಿಂದ ಮಾನಸಿಕ ದೃಢತೆ ಹೆಚ್ಚುತ್ತದೆ. ಇದು ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಿದೆ. ದೇಶದ ಅಭಿವೃದ್ಧಿಗೆ ವ್ಯಕ್ತಿಯ ದೈಹಿಕ, ಮಾನಸಿಕ ಆರೋಗ್ಯ ಕೂಡಾ ಮುಖ್ಯ ಎಂದು ಅವರು ಹೇಳಿದರು.
ನರೇಂದ್ರ ಮೋದಿ ಅವರು ಭಾರತದ ಪ್ರಧಾನಿಯಾದ ನಂತರ ಉದ್ಯಮಕ್ಷೇತ್ರದಲ್ಲಿ ಹೊಸ ಸಂಚಲನ ಉಂಟಾಗಿದೆ. ಭಾರತವನ್ನು ಅವಕಾಶಗಳ ಕಡೆಗೆ ಮೋದಿ ಕೊಂಡೊಯ್ಯುತ್ತಿದ್ದಾರೆ. ಮೋದಿ ಅಮೆರಿಕ ಭೇಟಿ ಅಲ್ಲಿ ನೆಲೆಸಿರುವ ಭಾರತೀಯರಿಗೆ ಹೊಸ ಭರವಸೆ ಮೂಡಿಸಿದೆ ಎಂದರು. ನಾಸ್ಕಾಂ ಮುಖ್ಯಸ್ಥ ಆರ್. ಚಂದ್ರಶೇಖರನ್ ಉಪಸ್ಥಿತರಿದ್ದರು.
ಶ್ರೀಕೃಷ್ಣನ ಭಗವದ್ಗೀತೆ ಇಷ್ಟ
‘ನಾನು ಶ್ರೀಕೃಷ್ಣನ ಭಗವದ್ಗೀತೆಯಿಂದ ಪ್ರೇರಣೆ ಪಡೆದಿದ್ದೇನೆ. ಗೀತೆಯಲ್ಲಿ ಮನುಷ್ಯನ ಎಲ್ಲ ಸಮಸ್ಯೆಗಳಿಗೆ ಉತ್ತರವಿದೆ. ನಮ್ಮ ಒಳಗನ್ನು ನೋಡುವುದಕ್ಕೆ ಗೀತೆಯಿಂದ ಸಾಧ್ಯ. ಸೈನ್ಯದಲ್ಲಿ ದುಡಿಯಲು ಗೀತೆಯೇ ನನಗೆ ಸ್ಪೂರ್ತಿ. ಶ್ರೀಕೃಷ್ಣನ ಬಗ್ಗೆ ಇನ್ನಷ್ಟು ತಿಳಿಯಲು ಮಥುರಾ, ವೃಂದಾವನಕ್ಕೂ ಭೇಟಿ ನೀಡಲಿದ್ದೇನೆ’
–ತುಳಸಿ ಗಬ್ಬಾರ್ಡ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.