ಬೆಂಗಳೂರು: ‘ಜನಪದ ಮಹಾಕಾವ್ಯದೊಳಗಿನ ರೋಚಕ ಕಥೆಗಳನ್ನು ನಮ್ಮ ಮಕ್ಕಳಿಗೆ ಪರಿಚಯಿಸುವುದು ಇಂದಿನ ಅಗತ್ಯ’ ಎಂದು ಕವಿ ಎಚ್.ಎಸ್ವೆಂಕಟೇಶಮೂರ್ತಿ ಅವರು ಅಭಿಪ್ರಾಯಪಟ್ಟರು.
ನಗರದಲ್ಲಿ ಭಾನುವಾರ ಅಂಕಿತ ಪುಸ್ತಕ ಪ್ರಕಾಶನ ಆಯೋಜಿಸಿದ್ದ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಮಕ್ಕಳಿಗೆ ಒಳ್ಳೆಯ ಕಥೆಗಳನ್ನು ಬರೆಯುವವರು ಬಹಳ ಕಡಿಮೆಯಾಗಿದ್ದಾರೆ. ಗದ್ಯದ ಬಗ್ಗೆ ನಮ್ಮ ಲೇಖಕರು ಯಾಕೆ ಈ ರೀತಿಯ ಪಕ್ಷಪಾತ ವಹಿಸುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ. ಒಳ್ಳೆಯ ಗದ್ಯ ಬರೆಯುವುದು ಒಂದು ಸವಾಲು ಎನ್ನುವುದೇ ಇದಕ್ಕೆ ಕಾರಣವಿರಬಹುದು’ ಎಂದು ಹೇಳಿದರು.
‘ಮಕ್ಕಳಿಗೆ ಒಳ್ಳೆಯ ಗದ್ಯ ಬರೆಯುವುದು ಬಹಳ ಅಗತ್ಯ. ನಮ್ಮಲ್ಲಿ ಅದಕ್ಕೆ ಒಂದು ದೊಡ್ಡ ಪರಂಪರೆಯೇ ಇದೆ. ಮಕ್ಕಳಿಗೆ ಗದ್ಯ ಬರೆಯುವುದು ಬಹಳ ಕಷ್ಟ. ಅದು ಚಿಕ್ಕ, ಚೊಕ್ಕ ಮತ್ತು ಸುಂದರವಾಗಿರಬೇಕು. ಈ ರೀತಿಯಲ್ಲಿ ಪ.ರಾಮಕೃಷ್ಣಶಾಸ್ತ್ರಿ ಅವರು ಉತ್ತಮ ಕಥೆಗಳನ್ನು ಬರೆಯುತ್ತಿದ್ದಾರೆ’ ಎಂದು ಶ್ಲಾಘಿಸಿದರು.
‘ತೇಜಸ್ವಿ ಅವರ ಬರವಣಿಗೆಯಿಂದ ಸಾಕಷ್ಟು ಪ್ರಭಾವಿತರಾದ ಕೆ.ಎನ್.ಗಣೇಶಯ್ಯ ಅವರು ವೈಜ್ಞಾನಿಕ, ಪೌರಾಣಿಕ, ಐತಿಹಾಸಿಕ...
ಈ ಎಲ್ಲ ಸಂಗತಿಗಳಲ್ಲಿ ಇರುವ ರೋಚಕತೆಯ ಅಂಶವನ್ನು ಗುರುತಿಸಿ, ಅದು ಸತ್ಯ ಎಂದು ಭಾಸವಾಗುವಂತೆ ಸಂಶೋಧನೆಯ ನೆಲೆಯಲ್ಲಿ ಕೃತಿಗಳನ್ನು ಕಟ್ಟುತ್ತಾರೆ’ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ವಿಮರ್ಶಕ ಬೈರಮಂಗಲ ರಾಮೇಗೌಡ, ಸಾಹಿತಿ ಸಂಪಟೂರು ವಿಶ್ವನಾಥ್ ಮತ್ತು ಲೇಖಕರಾದ ಕೆ.ಎನ್.ಗಣೇಶಯ್ಯ ಮತ್ತು ಪ.ರಾಮಕೃಷ್ಣಶಾಸ್ತ್ರಿ ಉಪಸ್ಥಿತರಿದ್ದರು.
ಬಿಡುಗಡೆಗೊಂಡ ಪುಸ್ತಕಗಳು
* ಡಾ.ಕೆ.ಎನ್.ಗಣೇಶಯ್ಯ ಅವರ ಮಿಹಿರಾಕುಲ (ಕಥೆಗಳು) – ₨95 ಭಿನ್ನ–ಬಿಂಬ (ಲೇಖನಗಳು)– ₨80