ಹೊಸಪೇಟೆ (ಬಳ್ಳಾರಿ ಜಿಲ್ಲೆ): ‘ಮತೀಯವಾದಿಗಳಿಂದ ಭಾರತದ ಸಂವಿಧಾನಕ್ಕೆ ಗಂಡಾಂತರ ಕಾದಿದ್ದು, ಈ ಬಗ್ಗೆ ಪ್ರತಿಯೊಬ್ಬರೂ ಎಚ್ಚೆತ್ತುಕೊಳ್ಳಬೇಕು’ ಎಂದು ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಎಚ್ಚರಿಸಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಭುವನ ವಿಜಯದಲ್ಲಿ ಭಾನುವಾರ ಕೊಟ್ಟೂರಿನ ಬಯಲು ಸಾಹಿತ್ಯ ವೇದಿಕೆಯಿಂದ ಆಯೋಜಿಸಿದ್ದ ‘ನಾವು ನಮ್ಮಲ್ಲಿ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಸಂವಿಧಾನ ಪರಾಮರ್ಶೆಯಾಗಬೇಕು, ಮೀಸಲಾತಿಗೆ ತಿದ್ದುಪಡಿ ತರಬೇಕು ಎಂದು ಈಚೆಗೆ ಹೇಳಿಕೆ ನೀಡಿರುವ ಮೋಹನ್ ಭಾಗವತ್, ಅಸ್ಪೃಶ್ಯತೆಯನ್ನು ಜೀವಂತವಾಗಿರಿಸಲು ಹೊರಟಿದ್ದಾರೆ. ಸ್ವಾತಂತ್ರ್ಯ ಬಂದು 68 ವರ್ಷವಾದರೂ ಸಂವಿಧಾನದ ಆಶಯ
ಗಳು ಈಡೇರಿಲ್ಲ. ವಿಶ್ವವಿದ್ಯಾಲಯಗಳು, ಕಚೇರಿಗಳು ಮತ್ತು ಸಮಾಜದಲ್ಲಿ ಜಾತಿ ತಾರತಮ್ಯ ಬೇರೂರಿದೆ. ಈ ಸಂದರ್ಭದಲ್ಲಿ ಮೀಸಲಾತಿ ಸೌಲಭ್ಯವನ್ನು ಮುಂದಿಟ್ಟುಕೊಂಡು ಈ ದೇಶದ ಕೋಮುವಾದಿ ಶಕ್ತಿಗಳು ಸಂವಿಧಾನಕ್ಕೆ ದೊಡ್ಡ ಗಂಡಾಂತರ ತರಲಿದ್ದು ಸಂವಿಧಾನದ ಮೂಲ ಆಶಯಗಳ ರಕ್ಷಣೆಗೆ ಹೋರಾಟ ನಡೆಸಬೇಕಿದೆ’ ಎಂದರು.