ಬೆಂಗಳೂರು: ‘ಆಧುನಿಕತೆ ಬೆಳೆದಂತೆಲ್ಲಾ ಮನುಷ್ಯರಲ್ಲಿ ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿವೆ. ಪರಿಣಾಮ, ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚಾಗುತ್ತಿದೆ’ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ನ್ಯಾ. ಸಿ.ಜಿ. ಹುನಗುಂದ್ ಅಭಿಪ್ರಾಯಪಟ್ಟರು.
ನೆಹರೂ ಯುವಕೇಂದ್ರ, ಸರ್ದಾರ್ ವಲ್ಲಭಭಾಯಿ ಪಟೇಲ್ ಯುವ ಒಕ್ಕೂಟ, ಹಾಗೂ ಉನ್ನತಿ ಮಾನವಹಕ್ಕುಗಳ ರಕ್ಷಣಾ ಸಂಘ ಜಂಟಿಯಾಗಿ ನಗರದಲ್ಲಿ ಬುಧವಾರ ಆಯೋಜಿಸಿದ್ದ ‘ಯುವ ನಾಯಕತ್ವ ಸಮುದಾಯ ಅಭಿವೃದ್ದಿ ತರಬೇತಿ ಶಿಬಿರ ಹಾಗೂ ಮಾನವಹಕ್ಕುಗಳ ಜಾಗೃತಿ ಕಾಯಕ್ರಮ’ ಉದ್ಘಾಟಿಸಿ ಅವರು ಮಾತನಾಡಿದರು.
‘ಸಂವಿಧಾನದ ರಾಜ್ಯ ನೀತಿ ನಿರ್ದೇಶಕ ತತ್ವಗಳಲ್ಲಿ ಮಾನವಹಕ್ಕುಗಳನ್ನು ಉಲ್ಲೇಖಿಸಲಾಗಿದೆ. ಈ ಹಕ್ಕುಗಳನ್ನು ಯಾರು ಕೂಡ ಉಲ್ಲಂಘಿಸಲಾಗದು. ಒಂದೊಮ್ಮೆ ವ್ಯಕ್ತಿಯ ಹಕ್ಕುಗಳು ಉಲ್ಲಂಘನೆಯಾದರೆ ಲಿಖಿತವಾಗಿ, ಇ–ಮೇಲ್, ಫ್ಯಾಕ್ಸ್ ಅಥವಾ ಎಸ್ಎಂಎಸ್ ಮುಖಾಂತರ ಆಯೋಗಕ್ಕೆ ದೂರು ನೀಡಿದರೆ ಕ್ರಮಕೈಗೊಳ್ಳಲಾಗುತ್ತದೆ’ ಎಂದು ಹೇಳಿದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಬಿ.ಆರ್.ಮುಕ್ತಾ ಅವರು ಮಾತನಾಡಿ, ‘ಇತ್ತೀಚೆಗೆ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ಹೆಚ್ಚುತ್ತಿರುವುದು ಆತಂಕದ ವಿಚಾರವಾಗಿದೆ. ಆಯೋಗವು ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಮಕ್ಕಳು, ಷೋಷಕರು ಮತ್ತು ಶಿಕ್ಷಕರಲ್ಲಿ ಅರಿವು ಮೂಡಿಸುವ ಕಾರ್ಯ ನಡೆಸುತ್ತಿದೆ’ ಎಂದು ತಿಳಿಸಿದರು.