ರಾಮನಗರ: ‘ಯಾವುದೇ ಆಸೆ, ಆಮಿಷ, ಒತ್ತಡಗಳಿಗೆ ಒಳಗಾಗುವುದಿಲ್ಲ. ಯೋಗ್ಯ ಅಭ್ಯರ್ಥಿ ಅನ್ನಿಸುವವರಿಗೆ ಮಾತ್ರ ಮತ ಚಲಾಯಿಸುತ್ತೇವೆ’
–ಇದು 18 ವರ್ಷ ತುಂಬಿ ಇದೇ ಪ್ರಥಮ ಬಾರಿಗೆ ಮತದಾನದ ಹಕ್ಕು ಪಡೆದಿರುವ ಯುವ ಮತದಾರರ ಮನದಾಳದ ಮಾತು.
ಜಿಲ್ಲಾ ಸ್ವೀಪ್ ಸಮಿತಿಯು ಬಿಡದಿ ಬಳಿಯ ಇನ್ನೋವೆಟಿವ್ ಫಿಲಂ ಸಿಟಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಯುವ ಮತದಾರರ ಹಾಗೂ ವಿದ್ಯಾರ್ಥಿಗಳು ಮತದಾನ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಮಂಡ್ಯದ ಶೃತಿ, 2ನೇ ಪಿ.ಯು ವಿದ್ಯಾರ್ಥಿನಿ ನಂದಿನಿ, ಮೈಸೂರಿನ ಅರ್ಪಿತಾ, ರಾಮನಗರದ ಸರ್ಕಾರಿ ಕಾನೂನು ಕಾಲೇಜಿನ ವಿದ್ಯಾರ್ಥಿನಿ ಆಶಾ ಸೇರಿದಂತೆ ಹಲವಾರು ಯುವ ಮತದಾ–ರರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಮತ ಚಲಾಯಿಸುತ್ತೇವೆ. ನಮಗೆ ದೇಶದ ಭವಿಷ್ಯ ಮುಖ್ಯ. ಇತರೆ ಎಲ್ಲವೂ ನಗಣ್ಯ ಎಂದು ಹೇಳಿದರು.
ವಿದ್ಯಾರ್ಥಿನಿ ಶೃತಿ ಮಾತನಾಡಿ, ಉತ್ತಮ ಅಭ್ಯರ್ಥಿಗೆ ಈ ಬಾರಿಯ ನನ್ನ ಮತ ಎಂದರು.
ನಂದಿನಿ ಅವರು ಪ್ರತಿ ಸರ್ಕಾರಗಳ ಸಾಧನೆ, ಅಭಿವೃದ್ಧಿ, ದೇಶಕ್ಕೆ ಕೊಡುಗೆಗಳನ್ನು ಅವಲೋಕಿಸಿದ್ದು, ಯಾರಿಗೆ ಮತ ನೀಡಿದರೆ ದೇಶಕ್ಕೆ ಹಿತ ಎಂಬುದನ್ನು ಚಿಂತಿಸಿ ಮತ ನೀಡುವೆ ಎಂದು ಪ್ರತಿಕ್ರಿಯಿಸಿದರು. ವಿದ್ಯಾರ್ಥಿನಿ ಅರ್ಪಿತಾ ಮಾತನಾಡಿ, ಹಣ ಕೊಡುವ ಅಭ್ಯರ್ಥಿಗಳಿಗೆ ಮತ ಚಲಾಯಿಸುವುದಿಲ್ಲ. ಅವರು ಕೊಡುವ ಹಣ ಅಥವಾ ವಸ್ತುಗಳು ಒಂದು ದಿನಕ್ಕೆ ತೃಪ್ತಿ ನೀಡುತ್ತವೆ. ಆದರೆ, ಇದರಿಂದ ನಾವು ಜೀವಮಾನವಿಡೀ ನೋವು ಅನುಭವಿಸಬೇಕಾಗುತ್ತದೆ. ಪ್ರಾಮಾಣಿಕ ಹಾಗೂ ಜನೋಪಯೋಗಿ ಅಭ್ಯರ್ಥಿಗೇ ನನ್ನ ಮತ ಎಂದು ಹೇಳಿದರು.
ವಿದ್ಯಾರ್ಥಿನಿ ಆಶಾ ಮಾತನಾಡಿ, ಶೇ 100ರಷ್ಟು ಮತದಾನ ಆಗಲೇ ಬೇಕು. ಇದಕ್ಕಾಗಿ ನಾನು ಮತ ಚಲಾಯಿಸುವುದಲ್ಲದೇ, ಅನಕ್ಷರಸ್ಥರು ಹಾಗೂ ಮತದಾನದ ಮಹತ್ವ ಅರಿಯದರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಿ ಮತದಾನ ಮಾಡಿಸುವಂತೆ ಪ್ರೇರೇಪಿಸುತ್ತೇನೆ ಎಂದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ, ವಿದ್ಯಾರ್ಥಿಗಳು ಹಾಗೂ ಯುವ ಮತದಾರರ ಅನಿಸಿಕೆ–ಗಳನ್ನು ಆಲಿಸಿದ ಜಿ.ಪಂ ಸಿಇಒ ಡಾ. ಎಂ.ವಿ.ವೆಂಕಟೇಶ್ ಮಾತನಾಡಿ, ‘ಇದೇ 17 ರಂದು ಜರುಗಲಿರುವ ಮತದಾನಕ್ಕೆ ಕೇವಲ ಮೂರು ನಿಮಿಷ ವ್ಯಯಿಸಿ ದೇಶಕ್ಕೆ ಕೊಡುಗೆ ನೀಡಿ ಎಂದು ಮನವಿ ಮಾಡಿದರು.
ಜಿ.ಪಂ ಸಿಪಿಒ ಎಸ್.ಧನುಷ್ ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಶೇ 80 ಕ್ಕೂ ಹೆಚ್ಚು ಮತದಾನವಾಗುತ್ತಿದೆ. ಆದರೆ, ಸುಶಿಕ್ಷಿತರೇ ಹೆಚ್ಚಿರುವ ನಗರ ಪ್ರದೇಶದಲ್ಲಿ ಇದರ ಪ್ರಮಾಣ ಶೇ 40 ರಷ್ಟು ಮತದಾನವಿದೆ. ಜಿಲ್ಲೆಯಲ್ಲಿನ 33 ಮತಗಟ್ಟೆಗಳಲ್ಲಿ ಶೇ 50 ಕ್ಕಿಂತ ಕಡಿಮೆ ಮತದಾನವಾಗಿರುವುದು ವಿಷಾದನೀಯ ಎಂದರು.
ಬಿ.ಸಿ.ಎಂ ಜಿಲ್ಲಾ ಅಧಿಕಾರಿ ಸುಮಯ್ಯ ರೂಹಿ, ಸ್ವೀಪ್ ಸಮಿತಿ ನೋಡೆಲ್ ಅಧಿಕಾರಿ ಹಮೀದ್ ಖಾನ್, ವಾರ್ತಾ ಸಹಾಯಕ ಎಂ.ವಿ.ರಾಘವೇಂದ್ರ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಗುರುದತ್, ಸಮಾಜ ಕಲ್ಯಾಣ ಇಲಾಖೆಯ ಕೆ.ಸತೀಶ್ ಗೌಡ, ಮಂಚನಾಯಕನಹಳ್ಳಿ ಪಿ.ಡಿ.ಓ ರಾಮಕೃಷ್ಣ, ಇಟ್ಟಮಡು ಪಿಡಿಒ ಎಂ. ಕಾರ್ಯದರ್ಶಿ ಲೋಕೇಶ್, ಶಿವಕುಮಾರ್, ಸೀನಪ್ಪ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.