ಉಡುಪಿ: ‘ಯೋಗ ಒಂದು ಕಲೆ ಮತ್ತು ಆಧ್ಯಾತ್ಮಿಕತೆಯಿಂದ ಕೂಡಿರುವ ಶುದ್ಧ ವಿಜ್ಞಾನ. ಇದನ್ನು ಭಾರತೀಯರು ವಿಶ್ವ ಮನುಕುಲದ ಕಲ್ಯಾಣಕ್ಕಾಗಿ ನೀಡಿದ್ದಾರೆ’ ಎಂದು ಯೋಗ ಶಿಕ್ಷಕ ಸುರೇಶ್ ಭಕ್ತ ಮಣಿಪಾಲ ಹೇಳಿದರು.
ಕುಂಜಿಬೆಟ್ಟು ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಮಂಗಳವಾರ ನಡೆದ ಅಂತರರಾಷ್ಟ್ರೀಯ ಯೋಗ ದಿನಾ ಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇದು ಶತ ಶತಮಾನಗಳಿಂದ ಭಾರತೀಯರಲ್ಲಿ ಪ್ರಚಲಿತದಲ್ಲಿದ್ದು, ಪಾಶ್ಚಾತ್ಯ ದೇಶಗಳಲ್ಲಿಯೂ ಪ್ರಾಧಾನ್ಯತೆ ಪಡೆದುಕೊಳ್ಳುತ್ತಿದೆ ಎಂದರು.
ಪ್ರಾಣಯಾಮಗಳಾದ ಕಪಾಲಬಾತಿ ಮತ್ತು ಅನುಲೋಮ ವಿಲೋಮಗಳನ್ನು ಕ್ರಮವಾಗಿ ಇಪ್ಪತ್ತು ನಿಮಿಷಗಳಿಗೆ ಮೀರಿ ಮಾಡುವುದರಿಂದ ರಕ್ತದೊತ್ತಡ, ಸಕ್ಕರೆ ಕಾಯಿಲೆ, ನಿರಂತರ ಶೀತ, ಕೆಮ್ಮು ಮತ್ತು ಕೊಬ್ಬಿನಾಂಶಗಳನ್ನು ಔಷಧಿಗಳ ಸಹಾ ಯವಿಲ್ಲದೆ ಹತೋಟಿಗೆ ತರಬಹುದು ಎಂದು ಅಭಿಪ್ರಾಯಪಟ್ಟರು.
ಎಚ್.ಎನ್. ಕಾಮತ್ ಮಣಿಪಾಲ ಮಾತನಾಡಿ, ವಿದ್ಯಾರ್ಥಿಗಳಿಗೆ ಯೋಗ ಮತ್ತು ಪ್ರಾಣಯಾಮಗಳನ್ನು ಮಾಡುವ ವಿಧಾನವನ್ನು ತಿಳಿಸಿಕೊಟ್ಟರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಪ್ರಕಾಶ್ ಕಣಿವೆ ಸ್ವಾಗತಿಸಿದರು, ವಿದ್ಯಾರ್ಥಿನಿ ಮಿಂಟುಮೋಲ್ ಆಂಟನಿ ವಂದಿಸಿದರು.