ಲಖನೌ: ಲೋಕಸಭಾ ಚುನಾವಣೆ ವೇಳೆ ‘ಲವ್ ಜಿಹಾದ್’ ಎಂಬ ಸುಂಟರಗಾಳಿಗೆ ಸಿಲುಕಿ ತತ್ತರಿಸಿದ್ದ ಉತ್ತರ ಪ್ರದೇಶದಲ್ಲಿ ಏಕಾಏಕಿ ಮತಾಂತರ ವಿವಾದ ಭುಗಿಲೆದ್ದಿದೆ.
ಕಳೆದ ಹಲವು ದಿನಗಳಿಂದ ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿನಿತ್ಯ ಪ್ರತಿಧ್ವನಿಸುತ್ತಿರುವ ಈ ವಿವಾದ ದೇಶದಲ್ಲಿ ಹೊಸ ಚರ್ಚೆ ಹುಟ್ಟು ಹಾಕಿದೆ. ಸಂಘ ಪರಿವಾರ ‘ಘರ್ ವಾಪಸಿ’ ಹೆಸರಿನಲ್ಲಿ ಹುಟ್ಟು ಹಾಕಿದ ಮರು ಮತಾಂತರ ಎಂಬ ಸಣ್ಣ ಕಿಡಿಯೊಂದು ಬೆಂಕಿಯಾಗಿ ಹೊತ್ತಿಕೊಂಡು ಉರಿಯುತ್ತಿದೆ.
ಮರು ಮತಾಂತರ ಮೊದಲ ಕಿಡಿ ಹೊತ್ತಿಕೊಂಡಿದ್ದು ಪ್ರೀತಿ, ಪ್ರೇಮದ ಅಜರಾಮರ ಸಂಕೇತವಾಗಿ ನಿಂತಿರುವ ಪ್ರೇಮಸೌಧ ‘ತಾಜ್ಮಹಲ್’ ನೆಲದಲ್ಲಿ. ಆಗ್ರಾದಲ್ಲಿ ಕೆಲವು ದಿನಗಳ ಹಿಂದೆ ಸಂಘ ಪರಿವಾರ 50 ಕುಟುಂಬಗಳ 250 ಮುಸ್ಲಿಮರನ್ನು ಸಾಮೂಹಿಕವಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಳಿಸಿತು.
ಬಾಂಗ್ಲಾದೇಶದಿಂದ ವಲಸೆ ಬಂದು ಹಲವು ವರ್ಷಗಳಿಂದ ಇಲ್ಲಿಯ ಕೊಳೆಗೇರಿಯಲ್ಲಿ ನೆಲೆಸಿರುವ ಚಿಂದಿ ಆಯುವ ಬಡ ಮುಸ್ಲಿಮರ ಮತಾಂತರ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಯಿತು.
‘ಹಣ, ನಿವೇಶನ ಹಾಗೂ ಬಿಪಿಎಲ್ ಪಡಿತರ ಚೀಟಿ ನೀಡುವ ಆಮಿಷ ಒಡ್ಡಿ ನಮ್ಮನ್ನು ಮತಾಂತರ ಮಾಡಲಾಗಿದೆ’ ಎಂದು ಮುಸ್ಲಿಮರು ಮರುದಿನ ಆರೋಪಿಸಿದಾಗ ಉರಿಯುತ್ತಿದ್ದ ಬೆಂಕಿಗೆ ತುಪ್ಪ ಸುರಿವಿದಂತಾಯಿತು.
ತಿಲಕವಿಟ್ಟುಕೊಂಡ ಹಣೆಯಿಂದ ನಮಾಜ್: ಸಾಮೂಹಿಕ ಮತಾಂತರ ಕಾರ್ಯಕ್ರಮದಲ್ಲಿ ಹಣೆಯ ಮೇಲೆ ತಿಲಕವಿಟ್ಟುಕೊಂಡು ಹೋಮ, ಹವನದಲ್ಲಿ ಭಾಗಿಯಾಗಿದ್ದ ಅದೇ ಜನ ಮರುದಿನ ಯಥಾರೀತಿ ನಮಾಜ್ನಲ್ಲೂ ಪಾಲ್ಗೊಂಡಿದ್ದರು.
ಕಾರ್ಯಕ್ರಮ ಆಯೋಜಿಸಿದ ಆರ್ಎಸ್ಎಸ್ ಧರ್ಮ ಜಾಗರಣ ಮಂಚ್ ರಾಜ್ಯ ಅಧ್ಯಕ್ಷ ನಂದಕಿಶೋರ್ ವಾಲ್ಮೀಕಿ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದರೂ ಗಂಭೀರವಾಗಿ ತೆಗೆದುಕೊಳ್ಳದ ಸಂಘ ಪರಿವಾರದವರು ಮರು ಮತಾಂತರ ಕಾರ್ಯಕ್ರಮ ಕೈಬಿಡುವುದಿಲ್ಲ ಎಂದು ಘೋಷಿಸಿದ್ದಾರೆ.
ಮತೀಯವಾಗಿ ಅತ್ಯಂತ ಸೂಕ್ಷ್ಮ ಪ್ರದೇಶದವಾದ ಅಲೀಗಡದಲ್ಲೂ ಮುಂದಿನ ಸಾಮೂಹಿಕ ಮತಾಂತರ ಕಾರ್ಯಕ್ರಮ ನಡೆಸಲು ಸಂಘ ಪರಿವಾರದವರು ಭರದ ಸಿದ್ಧತೆ ನಡೆಸಿದ್ದಾರೆ.
ದೇಶದಾದ್ಯಂತ ದೊಡ್ಡ ವಿವಾದ ಹುಟ್ಟು ಹಾಕಿದ ಮತಾಂತರ ಮತ್ತೊಮ್ಮೆ ಕೇಸರಿ ಪಡೆ ಹಾಗೂ ಮುಸ್ಲಿಮರನ್ನು ಮುಖಾಮುಖಿಗೊಳಿಸಿದೆ.
ಮುಸ್ಲಿಮರಿಗೆ ಆಮಿಷ ಒಡ್ಡಿ ಮತಾಂತರಗೊಳಿಸಲಾಗುತ್ತಿದೆ ಎಂದು ಆರೋಪಿಸಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್ಬಿ) ಧಾರ್ಮಿಕ ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿ ಸುವಂತೆ ಒತ್ತಾಯಿಸಿದೆ.
ಸಾಮೂಹಿಕ ಮತಾಂತರಕ್ಕೆ ಕಡಿವಾಣ ಹಾಕುವಂತೆ ಮುಸ್ಲಿಮರ ಧರ್ಮ ಗುರುಗಳು ಹಾಗೂ ಮುಖಂಡರು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಒತ್ತಾಯಿಸಿದ್ದಾರೆ.
‘ಮತಾಂತರ ಅಲ್ಲ, ಮರಳಿ ಮನೆಗೆ...’: ‘ಇದು ಮತಾಂತರ ಅಲ್ಲ, ‘ಘರ್ ವಾಪಸಿ’ ಹಿಂದೂ ಧರ್ಮದಿಂದ ಮತಾಂತರಗೊಂಡವರನ್ನು ಮರಳಿ ಹಿಂದೂ ಧರ್ಮದ ತೆಕ್ಕೆಗೆ ತೆಗೆದುಕೊಳ್ಳುತ್ತಿ-ದ್ದೇವೆ’ ಎಂದು ಸಂಘ ಪರಿವಾರದ ಮುಖಂಡರು, ಬಿಜೆಪಿ ಸಂಸದರು ಹಾಗೂ ಕೇಂದ್ರ ಸಚಿವರು ವಾದ ಮುಂದಿಟ್ಟಿದ್ದಾರೆ.
ದೇಶದ ಬಹುತೇಕ ಮುಸ್ಲಿಮರು ಹಿಂದೂ ಧರ್ಮದಿಂದ ಮತಾಂತರಗೊಂಡವರು ಎನ್ನುವ ಮೂಲಕ ವಿಶ್ವ ಹಿಂದೂ ಪರಿಷತ್ ಮತಾಂತರವನ್ನು ಸಮರ್ಥಿಸಿಕೊಂಡಿದೆ.
ಕಳೆದ 50 ವರ್ಷಗಳಿಂದಲೂ ದೇಶದಲ್ಲಿ ಮತಾಂತರ ನಡೆಯುತ್ತಿದೆ. 1966ರಲ್ಲಿ ಅಲಹಾಬಾದ್ನಲ್ಲಿ ನಡೆದ ಕುಂಭಮೇಳದಲ್ಲಿ ‘ಘರ್ ವಾಪಸಿ’ ನಿರ್ಣಯವನ್ನು ತೆಗೆದುಕೊಳ್ಳಲಾಗಿತ್ತು ಎನ್ನುತ್ತಾರೆ ವಿಎಚ್ಪಿ ಮುಖಂಡರು.
‘ಇಲ್ಲಿಯ ಮುಸ್ಲಿಮರು ಮೂಲತಃ ಹಿಂದೂಗಳು. ಅವರ ಪೂರ್ವಿಕರು ಕಾರಣಾಂತರಗಳಿಂದ ಮುಸ್ಲಿಮ್ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಹೀಗಾಗಿ ಮರಳಿ ಹಿಂದೂ ಧರ್ಮಕ್ಕೆ ಬನ್ನಿ ಎಂದು ಅವರನ್ನು ಆಹ್ವಾನಿಸುತ್ತೇವೆ’ ಎನ್ನುತ್ತಾರೆ ಸಂಘ ಪರಿವಾರದ ಮುಖಂಡರು.
ಸಂಸದ ಮಹಾಂತ ಆದಿತ್ಯನಾಥ್ ಅವರ ಹಿಂದೂ ಯುವ ವಾಹಿನಿ ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿ ಸಕ್ರಿಯವಾಗಿದ್ದು ಸಾಮೂಹಿಕ ಮತಾಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಗೋರಖ್ಪುರ ಹಾಗೂ ಗಾಜಿಪುರದಲ್ಲಿ ಸಾಮೂಹಿಕ ಮತಾಂತರ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಪ್ರಕಟಿಸಿದೆ.
ಮತದಾರರ ಧ್ರುವೀಕರಣ: 2017ರಲ್ಲಿ ನಡೆಯುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮತಾಂತರ ವಿವಾದವೇ ಬಿಜೆಪಿಯ ಪ್ರಮುಖ ವಿಷಯವಾಗಲಿದೆ. ಧರ್ಮದ ಆಧಾರದಲ್ಲಿ ಜನರನ್ನು ಒಡೆದು ಮತದಾರರನ್ನು ಧ್ರವೀಕರಣ ಮಾಡುವ ತಂತ್ರಗಾರಿಕೆ ಇದರ ಹಿಂದಿದೆ ಎನ್ನುತ್ತಾರೆ ಲಖನೌ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ದಿನೇಶ್ ಕುಮಾರ್ .
ಈಗಾಗಲೇ ಈ ವಾಸನೆ ಹಿಡಿದಿರುವ ಮುಸ್ಲಿಮರ ಧಾರ್ಮಿಕ ಸಂಘಟನೆಗಳು, ಸಂಘ ಪರಿವಾರದ ಯತ್ನಗಳನ್ನು ಹತ್ತಿಕ್ಕುವಂತೆ ಒತ್ತಾಯಿಸಿವೆ. ಸಮಾಜದ ಸ್ವಾಸ್ಥ್ಯ ಹಾಗೂ ಕೋಮು ಸಾಮರಸ್ಯ ಕದಡುವ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿವೆ.
‘ಬಿಜೆಪಿ ತನ್ನ ರಾಜಕೀಯ ಲಾಭಕ್ಕಾಗಿ ರಾಜ್ಯದ ಕೋಮು ಸೌಹಾರ್ದವನ್ನು ಕದಡಲು ಹೊರಟಿದೆ. ಧರ್ಮದ ಆಧಾರದ ಮೇಲೆ ಸಮಾಜವನ್ನು ಒಡೆಯುಲು ಮುಂದಾಗಿದೆ’ ಎಂದು ಸಮಾಜವಾದಿ ಪಕ್ಷದ ಮುಖಂಡರು ಆಪಾದಿಸಿದ್ದಾರೆ.
ಬಿಜೆಪಿ ಕೈಗೆ ಮತಾಂತರ ಅಸ್ತ್ರ: ಮತಾಂತರ ಎಂಬ ವಿವಾದಿತ ಅಸ್ತ್ರ ಬಿಜೆಪಿ ಕೈಗೆ ದೊರೆತಿದೆ. ಹೀಗಾಗಿ ಈ ವಿವಾದ ಇಲ್ಲಿಗೆ ನಿಲ್ಲುವಂತೆ ಕಾಣುತ್ತಿಲ್ಲ. ಬಿಜೆಪಿ ಸಾಧ್ಯವಾದಷ್ಟು ವಿವಾದವನ್ನು ಜೀವಂತವಾಗಿಡಲು ಬಯಸುತ್ತದೆ. ಅದು ಜೀವಂತವಾಗಿದ್ದಷ್ಟು ಬಿಜೆಪಿಗೆ ಲಾಭ. ಇದರಿಂದಾಗಿಯೇ ಬಿಜೆಪಿ ತನ್ನ ಶಾಸಕರು ಮತ್ತು ಸಂಸದರಿಗೆ ಮತಾಂತರ ಕಾರ್ಯಕ್ರಮಗಳಲ್ಲಿ ಭಾಗವಹಿಸದಂತೆ ತಡೆಯುತ್ತಿಲ್ಲ.
‘ಈ ಕಾರ್ಯಕ್ರಮಗಳಿಂದ ನಮಗೆ ಆಗುವಂತದು ಏನೂ ಇಲ್ಲ. ಸಂಸದರು ಅಥವಾ ಇತರ ನಾಯಕರು ತಮ್ಮ ಸ್ವಂತ ಬಲದ ಮೇಲೆ ಈ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ’ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಲಕ್ಷ್ಮೀಕಾಂತ ವಾಜಪೇಯಿ ಹೇಳಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ಮತಾಂತರ ವಿವಾದವನ್ನೇ ಚುನಾವಣೆಯ ಪ್ರಮುಖ ವಿಷಯವನ್ನಾಗಿ ಮಾಡುವ ತಂತ್ರವನ್ನು ಬಿಜೆಪಿ ರೂಪಿಸಿದ್ದು, ಇದುವೇ ರಾಜ್ಯ ರಾಜಕೀಯ ಭವಿಷ್ಯವನ್ನು ನಿರ್ಧರಿಸುವ ಸಾಧ್ಯತೆ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.