ಬೆಂಗಳೂರು: ‘ಶಾಸ್ತ್ರೀಯ ಸಂಗೀತಕ್ಕೆ ರಾಜರ ಮತ್ತು ಜಮೀನ್ದಾರರ ಆಶ್ರಯ ತಪ್ಪಿದ ತರುವಾಯ ಅದನ್ನು ನಿರಂತರವಾಗಿ ಪೋಷಿಸುತ್ತ, ಅಸ್ಮಿತೆಯ ಜತೆಗೆ ಪ್ರಮುಖ ಸ್ಥಾನ ಕೊಟ್ಟ ಕೀರ್ತಿ ಆಕಾಶವಾಣಿಗೆ ಸಲ್ಲುತ್ತದೆ’ ಎಂದು ಆಕಾಶವಾಣಿ ಬೆಂಗಳೂರು ನಿಲಯದ ನಿವೃತ್ತ ನಿರ್ದೇಶಕ ಎನ್.ಎಸ್. ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ನಗರದಲ್ಲಿ ಬುಧವಾರ ಆಕಾಶವಾಣಿಯ ಬೆಂಗಳೂರು ನಿಲಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಕಾಶವಾಣಿಯ ಧ್ವನಿಭಂಡಾರದಿಂದ ಆಯ್ದ ವಿದ್ವಾನ್ ಡಾ.ಆರ್.ಕೆ. ಶ್ರೀಕಂಠನ್ ಅವರ ಗಾಯನದ ಸಿ.ಡಿ ‘ರಾಗಸುಧಾರಸ’ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಬಹುಕಾಲ ಆಕಾಶವಾಣಿಯೊಂದಿಗೆ ನಿಕಟ ಸಂಬಂಧ ಹೊಂದಿದ್ದ ಶ್ರೀಕಂಠನ್ ಅವರು ವೈವಿಧ್ಯಮಯ ಸಂಗೀತ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಹೊಸ ಹೊಸ ರಚನೆಗಳನ್ನು ಪರಿಚಯಿಸಿದರು’ ಎಂದು ಕೃಷ್ಣಮೂರ್ತಿ ಅವರು ಹೇಳಿದರು.
‘ಕಚೇರಿಗಳಲ್ಲಿ ತ್ರಿಮೂರ್ತಿಗಳ ರಚನೆಗೆ ಸರಿಸಮನಾಗಿ ದಾಸರ ಪದಗಳನ್ನು ಹಾಡಬೇಕೆ? ಎಂಬ ಜಿಜ್ಞಾಸೆಯ ನಡುವೆ, ದಾಸರ ಪ್ರತಿ ರಚನೆಯ ಔಚಿತ್ಯ ಅರಿತು, ಸಾಹಿತ್ಯಕ್ಕೆ ಅಪಚಾರವಾಗದಂತೆ ಸಂಗೀತ ಗೌಣ ವಾಗಿಸಿ, ಸಂಪ್ರದಾಯಬದ್ದವಾಗಿ ಹಾಡುವ ಕಷ್ಟದ ಸಾಧನೆ ಮಾಡಿದ ಮೇರು ಕಲಾವಿದ ಶ್ರೀಕಂಠನ್’ ಎಂದು ಬಣ್ಣಿಸಿದರು.
ಶ್ರೀಕಂಠನ್ ಪುತ್ರ ವಿದ್ವಾನ್ ರುದ್ರಪಟ್ಣಂ ಎಸ್.ರಮಾಕಾಂತ್ ಅವರು ಮಾತನಾಡಿ, ‘ಹೊಣೆಗಾರಿಕೆ ಮತ್ತು ದಕ್ಷತೆಯಿಂದ ವೈವಿಧ್ಯಪೂರ್ಣ ಕಾರ್ಯಕ್ರಮಗಳನ್ನು ರೂಪಿಸಿ, ಎಲ್ಲ ವರ್ಗದವರಿಗೆ ತಲುಪುವಂತೆ ಮಾಡಿದ ಪ್ರಬಲ ಸಮೂಹ ಸಂವಹನ ಮಾಧ್ಯಮ ಆಕಾಶವಾಣಿ’ ಎಂದು ಶ್ಲಾಘಿಸಿದರು.
ಬೆಂಗಳೂರಿನ ನಿಲಯ ನಿರ್ದೇಶಕ ಬಸವರಾಜ ಸಾದರ, ಉಪ ನಿರ್ದೇಶಕ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.