ಬೆಂಗಳೂರು: ‘ಪುಸ್ತಕ ಓದುವುದರಿಂದ ಮನುಷ್ಯನ ಜೀವನ ಪರಿವರ್ತನೆಯಾಗುತ್ತದೆ. ಸರಳ ಜೀವನ, ಉನ್ನತ ಯೋಚನೆಗಳಿಗೆ ಪ್ರೇರಣೆಯಾಗುತ್ತವೆ’ ಎಂದು ರಾಜ್ಯಪಾಲ ವಜುಭಾಯಿ ವಾಲಾ ಹೇಳಿದರು.
ಬೆಂಗಳೂರು ಪುಸ್ತಕ ಮಾರಾಟಗಾರರ ಮತ್ತು ಪ್ರಕಾಶಕರ ಸಂಘವು ನಗರದ ಜೆ.ಪಿ ನಗರದ ಎಲಾನ್ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘11 ನೇ ಬೆಂಗಳೂರು ಪುಸ್ತಕೋತ್ಸವ’ವನ್ನು ಉದ್ಘಾಟಿಸಿ ಮಾತನಾಡಿದರು.
‘ಬೇರೆಯವರಿಗೆ ಯಾವುದೇ ಉಡುಗೊರೆಗಳನ್ನು ನೀಡದೆ, ಅವರಿಗೆ ಪುಸ್ತಕಗಳನ್ನು ನೀಡಿ, ಪುಸ್ತಕಗಳಿಂದ ಅವರಲ್ಲಿಯೂ ಜ್ಞಾನ ಬೆಳೆಯುತ್ತದೆ ಹಾಗೂ ನಿಮಗೆ ಒಂದು ಒಳ್ಳೆಯ ಕೆಲಸ ಮಾಡಿದ ಅನುಭವವಾಗುತ್ತದೆ’ ಎಂದರು.
ಕವಿ ಕೆ.ಎಸ್.ನಿಸಾರ್ ಅಹಮದ್ ಮಾತನಾಡಿ, ‘ಪುಸ್ತಕೋತ್ಸವವು ಅರಮನೆ ಮೈದಾನದಿಂದ ಬಡಾವಣೆಗೆ ಬಂದಿರುವುದು ಸಂತಸ ತಂದಿದೆ. ಪುಸ್ತಕಗಳು ಶ್ರೀಮಂತರಿಗೆ ಮತ್ತು ವಿದ್ಯಾವಂತರಿಗೆ ಮಾತ್ರ ದೊರೆಯುವಂತಾಗದೆ, ಎಲ್ಲರಿಗೂ ದೊರೆಯುವಂತಾಗಬೇಕು’ ಎಂದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್, ‘ಎಲ್ಲಾ ಪ್ರಕಾರದ, ಎಲ್ಲಾ ಭಾಷೆಯ ಪುಸ್ತಕಗಳು ದೊರೆಯುವಂತೆ ಮಾಡುವ ಪುಸ್ತಕೋದ್ಯಾನ ಸ್ಥಾಪನೆಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರೂ ಸರ್ಕಾರ ಇದುವರೆಗೂ ಹಸಿರು ನಿಶಾನೆ ತೋರಿಸಿಲ್ಲ’ ಎಂದು ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಲ್.ಹನುಮಂತಯ್ಯ, ‘ಕಳೆದ ಎರಡು ವರ್ಷಗಳಲ್ಲಿ ಸರ್ಕಾರ ಪುಸ್ತಕಗಳ ಸಗಟು ಖರೀದಿ ಮಾಡಿಲ್ಲ. ಹೀಗಾಗಿ, ಇದನ್ನು ಆದ್ಯತೆ ಮೇಲೆ ಮಾಡುವಂತೆ ಸರ್ಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಲಾಗಿದೆ’ ಎಂದರು.
ಡಿ.28 ರ ವರೆಗೆ ಪುಸ್ತಕೋತ್ಸವ ನಡೆಯಲಿದೆ.