ದಪ್ಪ ಹರಳಿನ ಕನ್ನಡಕ, ಅದರ ಎಡೆಯಿಂದ ಇಣುಕಿ ನೋಡುವ ಹೊಳಪು ಕಣ್ಣುಗಳು– ಇದು ಸೋಡಾಬುಡ್ಡಿ ಎಂದಾಕ್ಷಣ ಸಾಮಾನ್ಯವಾಗಿ ಎಲ್ಲರ ತಲೆಯಲ್ಲೂ ಮೂಡುವ ಒಂದು ಚಿತ್ರಣ. ಇದೇ ಚಿತ್ರಣವನ್ನು ‘ಸೋಡಾಬುಡ್ಡಿ’ ಎಂಬ ಸಿನಿಮಾ ಮೂಲಕ ಕಟ್ಟಿಕೊಡಲು ಮುಂದಾಗಿದ್ದಾರೆ ನಿರ್ದೇಶಕ ಜ್ಯೋತಿರಾವ್ ಮೋಹನ್. ಆದರೆ ಅಂಥ ವ್ಯಕ್ತಿಗಳನ್ನು ಹೀಗಳೆಯಲು ಮಾಡುತ್ತಿರುವ ಚಿತ್ರ ಇದಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಾರೆ.
ಕಿರುಚಿತ್ರವೊಂದನ್ನು ನಿರ್ದೇಶಿಸಿ ಅದಕ್ಕೆ ಪ್ರಶಸ್ತಿಯನ್ನೂ ಗಳಿಸಿರುವ ಮೋಹನ್ ಹಲವು ನಿರ್ದೇಶಕರ ಬಳಿ ಸಹಾಯಕರಾಗಿ ಕೆಲಸ ಮಾಡಿರುವ ಅನುಭವ ಪಡೆದಿದ್ದಾರೆ. ಇದು ಅವರಿಗೆ ನಿರ್ದೇಶನದ ಮೊದಲ ಪ್ರಯತ್ನ. ‘ಗ್ರೇಟ್ ಸ್ಟೋರಿ’ ಎಂದು ಅಡಿಟಿಪ್ಪಣಿ ಇರುವ ‘ಸೋಡಾಬುಡ್ಡಿ’ಯಲ್ಲಿ ನಾಯಕ ಕೇವಲ ಹದಿನೈದು ನಿಮಿಷ ಮಾತ್ರ ಸೋಡಾಬುಡ್ಡಿಯಾಗಿ ಕಾಣಿಸಿಕೊಳ್ಳುತ್ತಾನಂತೆ. ಚಿತ್ರದ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಳಿಸಿದ ತಂಡ ಹಾಡಿನ ಚಿತ್ರೀಕರಣಕ್ಕೆ ತೆರಳುವ ಮುನ್ನ ಮಾಧ್ಯಮದವರನ್ನು ಭೇಟಿ ಮಾಡಿ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿತು.
ನಾಯಕನಾಗಿ ಹೊಸ ನಟ ಉತ್ಪಲ್ ಇದ್ದಾರೆ. ‘ಕಥೆಯ ಬಗ್ಗೆ ಹೆಚ್ಚು ಗೊತ್ತಿಲ್ಲ. ಆದರೆ ನನ್ನ ಪಾತ್ರವೇ ಎಲ್ಲವನ್ನೂ ವಿವರಿಸುವಂತಿದೆ’ ಎಂಬುದು ಅವರ ನುಡಿ. ಧಾರಾವಾಹಿಯಲ್ಲಿ ನಟಿಸಿ ಅನುಭವ ಪಡೆದಿರುವ ಅನುಷಾ ನಾಯಕಿ. ಮತ್ತೊಂದು ಮುಖ್ಯ ಪಾತ್ರದಲ್ಲಿ ‘ಹಿಂಗ್ಯಾಕೆ’ ಚಿತ್ರದಲ್ಲಿದ್ದ ಖುಷಿ ನಟಿಸಿದ್ದಾರೆ. ಉದಯ್ ಎಂಬುವವರು ಚಿತ್ರಕ್ಕೆ ಹಣ ಸುರಿದಿದ್ದಾರೆ. ನಾಯಕ ಉತ್ಪಲ್ ಅವರ ಮಗ.
ಈ ಚಿತ್ರದ ಮೂಲಕ ಮಗನಿಗೆ ಒಂದೊಳ್ಳೆ ಓಪನಿಂಗ್ ಕೊಡುವ ಉದ್ದೇಶ ಅವರದ್ದು. ವೆಂಕಟ್ರಾಜ್ ಎಂಬುವವರು ‘ಸೋಡಾಬುಡ್ಡಿ’ಯ ಮತ್ತೊಬ್ಬ ನಿರ್ಮಾಪಕರು. ‘ಇದು ಯುವಜನತೆಯ ಮನಮುಟ್ಟುವ ಚಿತ್ರವಾಗಲಿದೆ’ ಎಂಬುದು ಅವರ ವಿಶ್ವಾಸ. ಅಚ್ಯುತ್ಕುಮಾರ್, ರಂಗಾಯಣ ರಘು ತಾರಾಗಣದಲ್ಲಿ ಇದ್ದಾರೆ. ಚಿತ್ರಕ್ಕೆ ಹರೀಶ್ ನಾಯಕ್ ಛಾಯಾಗ್ರಹಣ, ಮಿಥುನ್ ಸಂಗೀತವಿದೆ.