ಬೆಂಗಳೂರು: ನಗರ ಜಿಲ್ಲಾಡಳಿತ ಆನೇ ಕಲ್ ತಾಲ್ಲೂಕಿನ ವಿವಿಧ ಕಡೆಗಳಲ್ಲಿ ದಾಳಿ ನಡೆಸಿ 26 ಅಕ್ರಮ ಮರಳು ಅಡ್ಡೆ ನಾಶಪಡಿಸಿದೆ. ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದ 127 ಲಾರಿಗಳನ್ನು ವಶಪಡಿಸಿಕೊಂಡಿದೆ.
ಸಾರಿಗೆ ಇಲಾಖೆಯ ಆಯುಕ್ತ ಡಾ.ರಾಮೇಗೌಡ, ನಗರ ಜಿಲ್ಲಾಧಿಕಾರಿ ವಿ.ಶಂಕರ್, ಬೆಂಗಳೂರು ಗ್ರಾಮಾಂತರ ಎಸ್ಪಿ ರಮೇಶ್ ಬಾನೋಟ್, ತಹಶೀಲ್ದಾರ್ ಅನಿಲ್ ಕುಮಾರ್ ಅವರ ನೇತೃತ್ವದಲ್ಲಿ ಕಂದಾಯ, ಪೊಲೀಸ್, ಗಣಿ, ಸಾರಿಗೆ ಇಲಾಖೆಯ ಅಧಿಕಾರಿಗಳು ಏಕಕಾಲದಲ್ಲಿ ಅತ್ತಿಬೆಲೆ, ಸರ್ಜಾಪುರ, ಬನ್ನೇರುಘಟ್ಟ ಹಾಗೂ ಆನೇಕಲ್ನಲ್ಲಿ ದಾಳಿ ನಡೆಸಿ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದ 127 ಲಾರಿಗಳನ್ನು ಮತ್ತು ದಂಧೆಗೆ ಬಳಸುತ್ತಿದ್ದ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಫಿಲ್ಟರ್ ಮರಳು ತಯಾರಿಸುತ್ತಿದ್ದ ಮೂವರನ್ನು ಬಂಧಿಸಿದ್ದಾರೆ. ಇಂಡ್ಲವಾಡಿ, ರಾಗಿಹಳ್ಳಿ ಮತ್ತಿತರ ಅಕ್ರಮ ಮರಳು ಫಿಲ್ಟರ್ ಅಡ್ಡೆಗಳ ಮೇಲೆ ದಾಳಿ ನಡೆಸಿ 26 ಅಡ್ಡೆ ನೆಲಸಮಗೊಳಿಸಿದ್ದಾರೆ.