ಬೆಂಗಳೂರು: ಪ್ರಸಕ್ತ ಸಾಲಿನ ‘ಭಾರತಿ ತ್ಯಾಗರಾಜ ಸಮ್ಮಾನ’ ಪ್ರಶಸ್ತಿಗೆ ಹಿರಿಯ ಗಾಯಕರಾದ ಎಂ. ಬಾಲಮುರಳಿಕೃಷ್ಣ ಮತ್ತು ಕೆ.ಜೆ.ಯೇಸುದಾಸ್ ಸೇರಿದಂತೆ ವಿವಿಧ ಕ್ಷೇತ್ರಗಳ 13 ದಿಗ್ಗಜರನ್ನು ಆಯ್ಕೆ ಮಾಡಲಾಗಿದೆ.
ತ್ಯಾಗಬ್ರಹ್ಮ ಆರಾಧನಾ ಕೈಂಕರ್ಯ ಟ್ರಸ್ಟ್, ಶೃಂಗೇರಿ ಶಾರದಾ ಪೀಠದ ಸಹಯೋಗದಲ್ಲಿ ನೀಡುವ ಈ ಪ್ರಶಸ್ತಿ ಒಂದು ಲಕ್ಷ ನಗದು ಪುರಸ್ಕಾರ ಮತ್ತು ಚಿನ್ನದ ಪದಕವನ್ನು ಹೊಂದಿದೆ.
ಗಾಯಕಿಯರಾದ ಅರುಣಾ ಸಾಯಿರಾಮ್ ಹಾಗೂ ಸುಧಾ ರಘುನಾಥನ್, ಸಂತೂರ್ ವಾದಕ ಪಂಡಿತ್ ಶಿವಕುಮಾರ್ ಶರ್ಮಾ, ಪಿಟೀಲು ವಾದಕ ಪ್ರೊ.ಟಿ.ಎನ್.ಕೃಷ್ಣನ್, ವೀಣಾ ವಾದಕ ಪ್ರೊ.ಆರ್.ವಿಶ್ವೇಶ್ವರನ್, ಕೊಳಲು ವಾದಕ ಎನ್.ರಮಣಿ, ಸ್ಯಾಕ್ಸೊಫೋನ್ ವಾದಕ ಕದ್ರಿ ಗೋಪಾಲನಾಥ್, ಮೃದಂಗ ವಾದಕರಾದ ಟಿ.ಕೆ.ಮೂರ್ತಿ, ಉಮಯಲ್ಪುರಂ ಕೆ. ಶಿವರಾಮನ್ ಮತ್ತು ಹರಿಕಥಾ ವಾಚಕಿ ಟಿ.ಆರ್. ಕಮಲಾಮೂರ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸಂಸ್ಥೆಗಳ ವಿಭಾಗದಲ್ಲಿ ಬೆಂಗಳೂರು ಗಾಯನ ಸಮಾಜವನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಚಾಮರಾಜಪೇಟೆಯ ಶೃಂಗೇರಿ ಶಾರದಾ ಮಠದ ಆವರಣದಲ್ಲಿ ಜುಲೈ 12ರಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಸಮಾರಂಭದಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಭಾಗವಹಿಸುವರು.