ಬೆಂಗಳೂರು: ನಗರದಲ್ಲಿ ಎರಡು ಕಡೆ ದಾಳಿ ನಡೆಸಿದ ಸಿಐಡಿ ಹಾಗೂ ಇತರ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ಜಂಟಿ ತಂಡವು ನಾಲ್ವರು ಅಪ್ರಾಪ್ತರು ಸೇರಿದಂತೆ 27 ಜೀತ ಕಾರ್ಮಿಕರನ್ನು ರಕ್ಷಿಸಿದೆ. ಈ ಪೈಕಿ 17 ಪುರುಷರು ಹಾಗೂ 10 ಮಹಿಳೆಯರು.
ಛತ್ತೀಸ್ಗಡದ ಹಿರಿಯ ಅಧಿಕಾರಿಗಳು, ಕಂದಾಯ ಇಲಾಖೆ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳು ಈ ತಂಡದಲ್ಲಿದ್ದರು.ಕೆಂಪಾಪುರದ ಜೆ.ಎಂ.ಸಿ ಪ್ರಾಜೆಕ್ಟ್ಸ್ ಕಟ್ಟಡ ನಿರ್ಮಾಣ ಸ್ಥಳದ ಮೇಲೆ ಜೂನ್ 28ರಂದು ದಾಳಿ ನಡೆಸಿದ ತಂಡವು, ಕಳೆದ ಏಳು ತಿಂಗಳಿಂದ ಜೀತ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ 11 ಪುರುಷರು ಹಾಗೂ ಇಬ್ಬರು ಮಹಿಳೆಯರನ್ನು ರಕ್ಷಿಸಿದೆ.
ಈ ಸಂಬಂಧ ಮಧ್ಯವರ್ತಿಗಳ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದೇ ತಂಡವು, ಹಳೆ ವಿಮಾನ ನಿಲ್ದಾಣ ರಸ್ತೆಯ ಯಮಲೂರಿನಲ್ಲಿರುವ ದಿವ್ಯಶ್ರೀ ಇನ್ಫ್ರಾಸ್ಟ್ರಕ್ಚರ್ಸ್ ನಿರ್ಮಿಸುತ್ತಿರುವ ಕಟ್ಟಡ ನಿರ್ಮಾಣ ಸ್ಥಳದ ಮೇಲೆ ಜೂನ್ 29ರಂದು ದಾಳಿ ಮಾಡಿ, 6 ಪುರುಷರು ಹಾಗೂ 8 ಮಹಿಳೆಯರನ್ನು ರಕ್ಷಿಸಿದೆ. ಇವರು ಕಳೆದ 10 ತಿಂಗಳಿನಿಂದ ಕೆಲಸ ಮಾಡುತ್ತಿದ್ದರು. ಈ ಸಂಬಂಧ ಮಧ್ಯವರ್ತಿಗಳ ವಿರುದ್ಧ ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಮಿಷ ಒಡ್ಡಲಾಗಿತ್ತು: ತಿಂಗಳಿಗೆ ₹10 ಸಾವಿರ ಸಂಬಳ, ಊಟ, ವಸತಿ ನೀಡುವುದಾಗಿ ಆಮಿಷವೊಡ್ಡಿ ನಗರಕ್ಕೆ ಕರೆತಂದಿದ್ದ ಮಧ್ಯವರ್ತಿಗಳು, ಇವರನ್ನು ನಿತ್ಯ 12ಗಂಟೆ ದುಡಿಸಿಕೊಳ್ಳುತ್ತಿದ್ದರು. ದುಡಿಯಲು ನಿರಾಕರಿಸಿದರೆ, ದೈಹಿಕ ಹಲ್ಲೆ ನಡೆಸುತ್ತಿದ್ದರು. ಊಟಕ್ಕಾಗಿ ದಿನಸಿ ಹಾಗೂ ವಾರಕ್ಕೆ ₹100 ಹಣವಷ್ಟೇ ನೀಡುತ್ತಿದ್ದರು ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದಾರೆ.
ಕ್ರಿಮಿನಲ್ ಪ್ರಕರಣ: ಈ ಸಂಬಂಧ ಮಧ್ಯವರ್ತಿಗಳಾದ ಸರಸ್ವತಿ, ಕಲಾವತಿ, ಪಪ್ಪು ಯಾದವ್, ಸಂತೋಷ್, ರಾಜಕಿಶೋರ್ ಯಾದವ್, ಪವನ್ಕುಮಾರ್ ಯಾದವ್ ಹಾಗೂ ಬಿಲ್ಡರ್ಗಳ ವಿರುದ್ಧ ಐಪಿಸಿ ಹಾಗೂ ಜೀತ ನಿರ್ಮೂಲನಾ ಕಾಯ್ದೆಯ ಕಲಂಗಳ ಅಡಿ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದ್ದಾರೆ.