ಬೆಂಗಳೂರು: ಬಲಾಢ್ಯರ ಮೇಲೆ ಮತ್ತೆ ಚಾಟಿ ಬೀಸಿರುವ ನಗರ ಜಿಲ್ಲಾಡಳಿತ, ಬೆಂಗಳೂರು ಪೂರ್ವ ತಾಲ್ಲೂಕಿನ ಕೆ.ಆರ್.ಪುರ ಸಮೀಪದ ಚೇಳಕೆರೆ ಗ್ರಾಮದಲ್ಲಿ ‘ರಾಯಲ್ ಕಾನ್ಕಾರ್ಡ್ ಅಂತರರಾಷ್ಟ್ರೀಯ ಶಾಲೆ’ ಮಾಡಿದ್ದ ಸರ್ಕಾರಿ ಕೆರೆಯ ಒತ್ತುವರಿಯನ್ನು ಬುಧವಾರ ತೆರವುಗೊಳಿಸಿತು.
ಚೇಳಕೆರೆ ಗ್ರಾಮದ ಸರ್ವೆ ಸಂಖ್ಯೆ 85ರಲ್ಲಿ 37 ಎಕರೆ ವಿಸ್ತೀರ್ಣದಲ್ಲಿ ಸರ್ಕಾರಿ ಕೆರೆ ಇದೆ. ಈ ಕೆರೆ ಅರಣ್ಯ ಇಲಾಖೆಗೆ ಸೇರಿದ್ದು. ಇದರಲ್ಲಿ 14 ಎಕರೆ ಒತ್ತುವರಿಯಾಗಿತ್ತು. ಏಳು ಎಕರೆ ಪ್ರದೇಶದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಬಡಾವಣೆ ನಿರ್ಮಿಸಿತ್ತು. 10 ವರ್ಷಗಳ ಹಿಂದೆ ರಾಯಲ್ ಕಾನ್ಕಾರ್ಡ್ ಶಾಲಾ ಆಡಳಿತ ಮಂಡಳಿ ಕೆರೆಯ ನಾಲ್ಕು ಎಕರೆ ಜಾಗವನ್ನು ಲೀಸ್ಗೆ ಪಡೆದಿತ್ತು.
ಪ್ರತಿಯಾಗಿ ಕೆರೆಯನ್ನು ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿತ್ತು. ಆದರೆ, ಕೆರೆಯನ್ನು ಅಭಿವೃದ್ಧಿಪಡಿಸಿರಲಿಲ್ಲ. ಈ ಶಾಲೆ ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡ ಅವರಿಗೆ ಸೇರಿದ್ದು ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.
ನಾಲ್ಕು ಎಕರೆ ಜಾಗವನ್ನು ಶಾಲೆಯು ಆಟದ ಮೈದಾನ ಹಾಗೂ ಇತರ ಕಾರ್ಯಕ್ರಮಗಳಿಗೆ ಬಳಸುತ್ತಿತ್ತು. ಲೀಸ್ ಅವಧಿ ಕೆಲವು ತಿಂಗಳ ಹಿಂದೆಯೇ ಮುಕ್ತಾಯಗೊಂಡಿತ್ತು. ಈ ಜಾಗವನ್ನು ತೆರವು ಮಾಡುವಂತೆ ತಹಶೀಲ್ದಾರ್ ಡಾ.ಬಿ.ಆರ್.ಹರೀಶ್ ನಾಯ್ಕ್ ಅವರು ಆಡಳಿತ ಮಂಡಳಿಗೆ ನೋಟಿಸ್ ನೀಡಿದ್ದರು.