ನವದೆಹಲಿ(ಪಿಟಿಐ): ನೂತನ ತಂತ್ರಜ್ಞಾನ ಅಳವಡಿಕೆಗೆ ಒತ್ತು ನೀಡಿ ಸ್ವಚ್ಛ ರಾಜಧಾನಿಯನ್ನಾಗಿ ಮಾಡುವ ಮೂಲಕ ‘ಕೇವಲ ನಾಲ್ಕು ವರ್ಷದಲ್ಲಿ’ ದೆಹಲಿಯನ್ನು ವಿಶ್ವದರ್ಜೆಯ ನಗರವನ್ನಾಗಿ ರೂಪಿಸುತ್ತೇವೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಭರವಸೆ ನೀಡಿದ್ದಾರೆ.
ಇಲ್ಲಿನ ಕಲಿಬರಿ ರಸ್ತೆಯಲ್ಲಿ ರಸ್ತೆ ಸ್ವಚ್ಛತಾ ಯಂತ್ರಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ‘ದೆಹಲಿಯನ್ನು ವಿಶ್ವದ ಗಮನ ಸೆಳೆಯುವ ಕೇಂದ್ರನ್ನಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಚುನಾವಣೆ ವೇಳೆ ನೀಡಿದ್ದ ಭರವಸೆಯನ್ನು ಈಡೇರಿಸಲು ಬದ್ಧವಾಗಿದ್ದೇವೆ. ಆದರೆ, ಆಧುನಿಕ ತಂತ್ರಜ್ಞಾನದ ಯಂತ್ರಗಳನ್ನು ಬಳಸಿದರೂ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯ ಸಂಖ್ಯೆಯಲ್ಲಿ ಯಾವುದೇ ಕಡಿತ ಮಾಡುವುದಿಲ್ಲ. ಅವರ ಬದುಕನ್ನು ಕಿತ್ತುಕೊಳ್ಳುವುದಿಲ್ಲ’ ಎಂದು ಹೇಳಿದ್ದಾರೆ.
ಸಾರ್ವಜನಿಕರು ಹಾಗೂ ಕಾರ್ಯಕರ್ತರು ನಿರಂತರವಾಗಿ ಪ್ರೀತಿ ತೋರುತ್ತಿದ್ದಾರೆ. ಎಲ್ಲರ ಪ್ರೀತಿಯ ಮೇಲೆ ವಿಶ್ವಾಸವಿಟ್ಟು ಕಾರ್ಯ ನಿರ್ವಹಿಸುತ್ತಿದ್ದೇವೆ. ಕೇವಲ ನಾಲ್ಕು ವರ್ಷಗಳಲ್ಲಿ ದೆಹಲಿಯನ್ನು ವಿಶ್ವದರ್ಜೆ ನಗರವನ್ನಾಗಿಸುತ್ತೇವೆ ಎಂಬ ವಿಶ್ವಾಸ ನಮಗಿದೆ ಎಂದು ಪುನರುಚ್ಚರಿಸಿದರು.
ಎನ್ ಡಿಎಂಸಿ ಮೂಲಕ ಪ್ರಯೋಗಿಕವಾಗಿ ರಸ್ತೆ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ. ಇದರ ಯಶಸ್ವಿಯ ಆಧಾರದ ಮೇಲೆ ನಗರದಲ್ಲಿ ಹರಡಿಕೊಂಡಿರುವ 1,260 ಕಿ.ಮೀ. ಉದ್ದದ ರಸ್ತೆ ಸ್ವಚ್ಛತೆಗೆ ಕ್ರಮ ಕೈಳ್ಳುವುದಾಗಿ ಹೇಳಿದರು.