ಬೆಂಗಳೂರು: ‘ಶಿಕ್ಷಣ ಕ್ಷೇತ್ರವನ್ನು ಅನುತ್ಪಾದಕವೆಂದು ನಿರ್ಲಕ್ಷಿಸಿ, ಶಿಕ್ಷಣ ವಿರೋಧಿ ಅಧಿನಿಯಮದ ಮೂಲಕ ಅಧ್ಯಾಪಕರ ವೇತನಕ್ಕೆ ಕತ್ತರಿ ಹಾಕಲು ಮುಂದಾಗಿರುವ ಸರ್ಕಾರ ಕೂಡಲೇ ಅಧಿನಿಯಮವನ್ನು ಹಿಂದಕ್ಕೆ ಪಡೆಯಬೇಕು’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಆಗ್ರಹಿಸಿದರು.
ನಗರದಲ್ಲಿ ಗುರುವಾರ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಮತ್ತು ಕಾಲೇಜು ಅಧ್ಯಾಪಕರ ಸಂಘಗಳ ಒಕ್ಕೂಟ ಏರ್ಪಡಿಸಿದ್ದ ‘ಖಾಸಗಿ ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿ ಅಧಿನಿಯಮ 2014’ ಕುರಿತ ಪದವಿ ಕಾಲೇಜು ಅಧ್ಯಾಪಕ ಮತ್ತು ಅಧ್ಯಾಪಕೇತರರ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಆದ್ಯತೆ ಪಡೆಯಬೇಕಿದ್ದ ಶಿಕ್ಷಣ ಕ್ಷೇತ್ರ ಮತ್ತು ಶಿಕ್ಷಕರನ್ನು ನಿರ್ಲಕ್ಷಿಸಿ, ಅತಾರ್ಕಿಕ ಮತ್ತು ಅತಾತ್ವಿಕ ಅಧಿನಿಯಮ ಜಾರಿಗೊಳಿಸಲು ಮುಂದಾಗಿರುವ ಸರ್ಕಾರದ ಕ್ರಮ ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಈ ವಿಚಾರದಲ್ಲಿ ಅಧ್ಯಾಪಕರ ಹೋರಾಟಕ್ಕೆ ನನ್ನ ನೈತಿಕ ಬೆಂಬಲವಿದೆ’ ಎಂದು ಅವರು ಹೇಳಿದರು.
‘ಅಧ್ಯಾಪಕರ ಪರವಾಗಿ ಸುಪ್ರೀಂ ಕೋರ್ಟ್ ಸೇರಿದಂತೆ ಅನೇಕ ನ್ಯಾಯಾಲಯಗಳು ನೀಡಿದ ತೀರ್ಪುಗಳನ್ನು ಉಲ್ಲಂಘಿಸಿ ಸರ್ಕಾರ ಭಂಡತನದಿಂದ ಅಧಿನಿಯಮವನ್ನು ಜಾರಿಗೊಳಿಸಲು ಮುಂದಾಗಿದೆ. ಇದೇ ಧೈರ್ಯವನ್ನು ಮಾತೃಭಾಷೆ ಮಾಧ್ಯಮ ಕುರಿತ ಅಧಿನಿಯಮ ತರುವಲ್ಲಿ ತೋರಲಿ’ ಎಂದು ಸವಾಲು ಹಾಕಿದರು.
‘ಸ್ವಾತಂತ್ರ್ಯೋತ್ತರ ಭಾರತದಲ್ಲಿ ಸೆರೆಯಲ್ಲಿದ್ದ ಶಿಕ್ಷಣ ಬಂಧಮುಕ್ತಗೊಂಡು ಆದ್ಯತೆ ಪಡೆದಿತ್ತು. ಬದಲಾದ ಸನ್ನಿವೇಶದಲ್ಲಿ ಉದಾರೀಕರಣ ಮತ್ತು ಖಾಸಗೀಕರಣದ ಪ್ರಭಾವದಿಂದಾಗಿ ಸರ್ಕಾರ ಶಿಕ್ಷಣ ಕ್ಷೇತ್ರವನ್ನು ಅನುತ್ಪಾದಕಎಂದು ಪರಿಗಣಿಸಿ ನಿರ್ಲಕ್ಷಿಸುತ್ತಿರುವುದು ವಿಷಾದನೀಯ’ ಎಂದರು.
‘ಜೀವವಿರೋಧಿ ಗ್ಯಾಟ್ ಒಪ್ಪಂದದ ತರುವಾಯ ಸರ್ಕಾರಗಳ ಮನೋಧರ್ಮದೊಂದಿಗೆ ಶಿಕ್ಷಣದ ಪರಿಭಾಷೆಯೇ ಬದಲಾಗಿದೆ. ಇಂದು ಶಿಕ್ಷಣ ಕ್ಷೇತ್ರವನ್ನು ಲಾಭದಾಯಕ ಉದ್ಯಮವೆಂದು, ಶಿಕ್ಷಕರನ್ನು ಕೆಲಸಗಾರರೆಂದು, ವಿದ್ಯಾರ್ಥಿಗಳನ್ನು ಗಿರಾಕಿಗಳೆಂದು ಭಾವಿಸಲಾಗುತ್ತಿದ್ದು, ಇದರ ಲಾಭವನ್ನು ಖಾಸಗಿ ಬಂಡವಾಳಶಾಹಿಗಳು ಪಡೆಯುತ್ತಿದ್ದಾರೆ’ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ಶಿಕ್ಷಕರ ತಲೆ ಮೇಲೆ ಇಂತಹ ತೂಗುಕತ್ತಿ ಇರಿಸುತ್ತದೆ. ಅನ್ನಭಾಗ್ಯ, ಸಾಲಮನ್ನಾ ಮೊದಲಾದ ಯೋಜನೆಗಳಿಗೆ ಸಾವಿರಾರು ಕೋಟಿ ನೀಡುವ ಸರ್ಕಾರ, ಶಿಕ್ಷಕರ ವಿಚಾರದಲ್ಲಿ ಮೀನಮೇಷ ಎಣಿಸುತ್ತಿದೆ’ ಎಂದು ಹೇಳಿದರು.
‘ನಾವು 14 ಜನ ಪರಿಷತ್ ಸದಸ್ಯರು ಸಮಸ್ಯೆಯನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಆದಾಗ್ಯೂ, ಸರ್ಕಾರ ಮೊಂಡುತನ ತೋರಿದರೆ ಶಿಕ್ಷಕರು ಶಾಲೆ, ಕಾಲೇಜುಗಳನ್ನು ಬಂದ್ ಮಾಡಿ ಹೋರಾಟಕ್ಕೆ ಇಳಿಯಬೇಕು’ ಎಂದು ಕರೆ ನೀಡಿದರು.
‘ಶಿಕ್ಷಕ ಸಂಘಟನೆಗಳು ರೂಪುರೇಷೆ ತಯಾರಿಸಿ ಎಲ್ಲರೂ ಒಟ್ಟಾಗಿ ಹೋರಾಟ ಮಾಡಿದಾಗ ಮಾತ್ರ ಸರ್ಕಾರ ಮಣಿಯುತ್ತದೆ. ನಿಮ್ಮ ಹೋರಾಟಕ್ಕೆ ಸದಾ ಬೆಂಗಾವಲಾಗಿ ನಾವಿದ್ದೇವೆ’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ಮರಿತಿಬ್ಬೇಗೌಡ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಅರುಣ ಶಹಾಪುರ, ಅಮರನಾಥ ಪಾಟೀಲ, ಶರಣಪ್ಪ ಮಟ್ಟೂರ, ಮಹಾಂತೇಶ ಕೌಜಲಗಿ, ಪ್ರೊ.ಎಸ್.ವಿ.ಸಂಕನೂರ, ಆರ್.ಚೌಡರೆಡ್ಡಿ, ಒಕ್ಕೂಟದ ಅಧ್ಯಕ್ಷ ಪ್ರೊ.ಸಿ.ಎಚ್.ಮುರಿಗೇಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಪ್ರೊ.ಕೆ.ಎಂ.ನಾಗರಾಜ್. ಸಂಚಾಲಕರಾದ ಡಾ.ಎ.ಎಂ.ನರಹರಿ, ಡಾ.ಬಿ.ಜಿ.ಭಾಸ್ಕರ್, ಡಾ.ಕೆ.ಜಿ. ಹಾಲಸ್ವಾಮಿ ಮತ್ತು ಡಿ.ಟಿ.ಗೋಪಾಲ್ ರಾಜ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.