ನವದೆಹಲಿ: ಬಹುಕೋಟಿ ಮೊತ್ತದ ಬೆಂಗಳೂರು–ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆಗೆ (ಬಿಎಂಐಸಿಪಿ) ಸಂಬಂಧಿಸಿದಂತೆ ಹಿರಿಯ ಸಾಹಿತಿ ಯು.ಆರ್.ಅನಂತಮೂರ್ತಿ ಅವರು ಸಲ್ಲಿಸಿರುವ ವಿಶೇಷ ಮೇಲ್ಮನವಿ ಅರ್ಜಿಯ ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಸೋಮವಾರ ಸಮ್ಮತಿ ಸೂಚಿಸಿದೆ.
ಭೂಸ್ವಾಧೀನ ಪರಿಹಾರ ನಿಗದಿಪಡಿಸಲು ರಾಜ್ಯ ಸರ್ಕಾರಕ್ಕೆ ಅವಕಾಶ ಕಲ್ಪಿಸಿದ ಕರ್ನಾಟಕ ಹೈಕೋರ್ಟ್ನ 2013ರ ತೀರ್ಪನ್ನು ಪ್ರಶ್ನಿಸಿ ಅನಂತಮೂರ್ತಿ ಈ ಅರ್ಜಿ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ಆರ್.ಎಂ. ಲೋಧಾ ನೇತೃತ್ವದ ಮೂವರು ಸದಸ್ಯರ ನ್ಯಾಯಪೀಠ ಈ ಅರ್ಜಿ ವಿಚಾರಣೆ ನಡೆಸಲು ಒಪ್ಪಿಗೆ ನೀಡಿದೆ.
ಈ ಯೋಜನೆಗಾಗಿ ರೈತರ ಜಮೀನುಗಳನ್ನು ಸ್ವಾಧೀನ ಮಾಡಿಕೊಳ್ಳಲಾಗಿದೆ. ಆದರೆ, ರೈತರಿಗೆ ಅತ್ಯಲ್ಪ ಮೊತ್ತದ ಪರಿಹಾರ ನೀಡಿರುವ ಬಿಎಂಐಸಿಪಿ, ಪರಿಹಾರ ನೀಡಿದ ಮೊತ್ತಕ್ಕಿಂತ 30 ಪಟ್ಟು ಹೆಚ್ಚಿನ ಬೆಲೆಗೆ ಅವುಗಳನ್ನು ಮಾರಿ ಲಾಭ ಮಾಡಿಕೊಂಡಿದೆ. ಆದರೂ ರಾಜ್ಯ ಸರ್ಕಾರ ಹೈಕೋರ್ಟ್ನ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿಲ್ಲ ಎಂದು ಅನಂತಮೂರ್ತಿ ಪರ ವಕೀಲ ಪ್ರಶಾಂತ್ ಭೂಷಣ್ ನ್ಯಾಯಪೀಠದ ಗಮನಕ್ಕೆ ತಂದರು.