ಬೆಂಗಳೂರು: ಸರ್ಕಾರಿ ಲೆಕ್ಕಪರಿಶೋಧಕರ ಹೆಸರಿನಲ್ಲಿ ನಕಲಿ ಬಿಲ್್ ಸೃಷ್ಟಿಸಿರುವುದನ್ನು ಲೆಕ್ಕಪರಿಶೋಧಕರೇ ಪತ್ತೆ ಹಚ್ಚಿದ ಪ್ರಸಂಗವೂ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಡೆದಿದೆ. ಈ ಬಗ್ಗೆ ಕೂಡ ವಿಚಾರಣಾ ಆಯೋಗ ವಿಶ್ವವಿದ್ಯಾಲಯವನ್ನು ತರಾಟೆಗೆ ತೆಗೆದುಕೊಂಡಿದೆ.
2011ರ ಮೇ 30ರಿಂದ ಜೂನ್ 1ರ ವರೆಗೆ ಯುಜಿಸಿ ತಜ್ಞರ ಸಮಿತಿಯೊಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿತ್ತು. ಈ ಸಮಿತಿಯ ಆತಿಥ್ಯಕ್ಕಾಗಿ ವಿಶ್ವವಿದ್ಯಾಲಯದ ಯೋಜನಾ ಮತ್ತು ಅಭಿವೃದ್ಧಿ ಅಧಿಕಾರಿ ಎಸ್.ಟಿ. ಬಾಗಲಕೋಟೆ ಅವರು 2011ರ ಮೇ 20ರಂದು ₨ 18.07 ಲಕ್ಷ ಮುಂಗಡವನ್ನು ವಿವಿ ಲೆಕ್ಕಶೀರ್ಷಿಕೆ 1471ರಲ್ಲಿ ಮಂಜೂರು ಪಡೆದುಕೊಂಡಿದ್ದರು. ಈ ಪೈಕಿ ಖರ್ಚಾಗದೇ ಉಳಿದ ₨ 6.25 ಲಕ್ಷವನ್ನು 2011ರ ಆಗಸ್ಟ್ 24ರಂದು ವಿವಿ ನಿಧಿಗೆ ಮರಳಿಸಿದ್ದರು.
ವೆಚ್ಚವಾಗದೇ ಇರುವ ಹಣವನ್ನು ವಿವಿ ನಿಧಿಗೆ ಮರಳಿಸಲು 2 ತಿಂಗಳು ವಿಳಂಬ ಮಾಡಲಾಗಿತ್ತು. ಅಲ್ಲದೆ ವೆಚ್ಚ ಮಾಡಿದ ಹಣದ ವೋಚರ್ಗಳನ್ನು ಒಂದು ವರ್ಷ 10 ತಿಂಗಳ ನಂತರ ಹೊಂದಾಣಿಕೆ ಮಾಡಲಾಗಿದೆ. ಯುಜಿಸಿ ಸಮಿತಿ ಸದಸ್ಯರಿಗಾಗಿ ಮಯೂರ ಆದಿತ್ಯ ರೆಸಾರ್ಟ್ನಲ್ಲಿ ಕೊಠಡಿ ಕಾಯ್ದಿರಿಸಲಾಗಿತ್ತು. ಅಲ್ಲದೆ ಕೊಠಡಿ ಸಂಖ್ಯೆ 407 ಮತ್ತು 408ನ್ನು ಸರ್ಕಾರಿ ಲೆಕ್ಕಪರಿಶೋಧಕರಿಗಾಗಿ ಕಾಯ್ದಿರಿಸಿದ್ದು ಇದರ ಬಾಬ್ತು ₨ 77, 500 ವೆಚ್ಚ ಮಾಡಲಾಗಿದೆ ಎಂದು ವೋಚರ್ಗಳನ್ನು ವಿವಿ ನಿಧಿಗೆ ಒಪ್ಪಿಸಲಾಗಿದೆ.
ಬಿಲ್ ನೋಡಿ ಅಚ್ಚರಿ: 2012–13ನೇ ಸಾಲಿನ ಲೆಕ್ಕ ಪರಿಶೋಧನೆ ನಡೆಸುತ್ತಿದ್ದ ಸರ್ಕಾರಿ ಲೆಕ್ಕಪರಿಶೋಧಕರಿಗೆ, ತಮ್ಮ ಹೆಸರಿನಲ್ಲಿಯೇ ಹಣ ಖರ್ಚು ಮಾಡಿ ಅದಕ್ಕೆ ಸಂಬಂಧಿಸಿದ ವೋಚರ್ಗಳನ್ನು ಹಾಜರುಪಡಿಸಿದ್ದು ಬೆರಗು ಮೂಡಿಸಿತು. ಯುಜಿಸಿ ತಜ್ಞರ ಸಮಿತಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡುವುದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲದಿದ್ದರೂ ಹಾಗೂ ತಾವು ಈ ಸಂದರ್ಭದಲ್ಲಿ ಭೇಟಿ ನೀಡದೇ ಇದ್ದರೂ ತಮ್ಮ ಹೆಸರಿನಲ್ಲಿ ಬಿಲ್ ಪಾವತಿ ಆಗಿರುವ ಬಗ್ಗೆ ಲೆಕ್ಕ ಪರಿಶೋಧಕರು ಆಕ್ಷೇಪ ವ್ಯಕ್ತಪಡಿಸಿದರು.
ಬಾರದ ಉತ್ತರ: ಸರ್ಕಾರಿ ಲೆಕ್ಕ ಪರಿಶೋಧಕರಾದ ಎಂ.ಪಿ.ಅನಿತಾ ಈ ಬಗ್ಗೆ ವಿಶ್ವವಿದ್ಯಾಲಯದ ಅಧಿಕಾರಿಗಳಿಂದ ವಿವರಣೆ ಕೇಳಿದರೂ ಸೂಕ್ತ ಉತ್ತರ ಬಂದಿಲ್ಲ. ಆದ್ದರಿಂದ ಅನಿತಾ ಅವರು ಈ ಬಗ್ಗೆ ಮಹಾ ಲೆಕ್ಕ ನಿಯಂತ್ರಕರಿಗೆ ದೂರು ಸಲ್ಲಿಸಿದ್ದಾರೆ. ಇದಲ್ಲದೆ ವಿಶ್ವವಿದ್ಯಾಲಯದ ಕುಲಸಚಿವರಿಗೂ ಪತ್ರ ಬರೆದು ನಕಲಿ ಬಿಲ್ ಸೃಷ್ಟಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಲೆಕ್ಕಪರಿಶೋಧಕರು ವಿಶ್ವವಿದ್ಯಾಲಯಕ್ಕೆ ಹಾಜರಾಗಿ ಲೆಕ್ಕವನ್ನು ಪರಿಶೋಧಿಸುತ್ತಾರೆ ಎನ್ನುವುದು ಗೊತ್ತಿದ್ದರೂ ಅವರ ಹೆಸರಿನಲ್ಲಿಯೇ ನಕಲಿ ಬಿಲ್ ಸೃಷ್ಟಿಸಿ ವಿಶ್ವವಿದ್ಯಾಲಯಕ್ಕೆ ನೀಡಿರುವುದು ಯೋಜನಾ ಮತ್ತು ಅಭಿವೃದ್ಧಿ ಅಧಿಕಾರಿಗಳು ಹಾಗೂ ಹಣಕಾಸು ಅಧಿಕಾರಿಗಳ ಜವಾಬ್ದಾರಿ ನಿರ್ವಹಣೆಯಲ್ಲಿ ತೀವ್ರ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಲೆಕ್ಕಪರಿಶೋಧಕರು ಹೇಳಿದ್ದಾರೆ.
ಈ ಕುರಿತಂತೆ ಪದ್ಮರಾಜ್ ಸಮಿತಿ ವಿಚಾರಣೆ ನಡೆಸಿದಾಗಲೂ ವಿಶ್ವವಿದ್ಯಾಲಯದ ಸಂಬಂಧಿಸಿದ ಅಧಿಕಾರಿಗಳಿಂದ ಸೂಕ್ತ ಉತ್ತರ ಬಂದಿಲ್ಲ. ವಿಶ್ವವಿದ್ಯಾಲಯದ ಅತಿಥಿ ಗೃಹದಲ್ಲಿಯೇ ಸಾಕಷ್ಟು ಕೊಠಡಿಗಳು ಇದ್ದರೂ ಖಾಸಗಿ ಹೊಟೇಲ್ಗಳಿಗೆ ಹಣ ವೆಚ್ಚ ಮಾಡಿರುವುದು ಸಮರ್ಥನೀಯವಲ್ಲ. ಅನಗತ್ಯವಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡುವ ಮೂಲಕ ವಿಶ್ವವಿದ್ಯಾಲಯಕ್ಕೆ ನಷ್ಟ ಉಂಟು ಮಾಡಲಾಗಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
‘ದೂರು ನೀಡಿದ್ದು ನಾವಷ್ಟೇ ಅಲ್ಲ’
ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ.ಎಚ್.ಬಿ.ವಾಲಿಕಾರ್ ಅವರ ವಿರುದ್ಧ ದೂರು ನೀಡಿದ್ದು ನಾವು ನಾಲ್ಕು ಮಂದಿ ಮಾತ್ರ ಅಲ್ಲ. ವಿಶ್ವವಿದ್ಯಾಲಯದ ಕುಲಸಚಿವರೇ ಕುಲಪತಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದರು. ಇದರ ಆಧಾರದಲ್ಲಿಯೇ ರಾಜ್ಯಪಾಲರು ತನಿಖಾ ಆಯೋಗ ರಚಿಸಿದ್ದಾರೆ. ರಾಜ್ಯಪಾಲರ ಆದೇಶದಲ್ಲಿ ಇದನ್ನು ಉಲ್ಲೇಖಿಸಲಾಗಿದೆ ಎಂದು ಕೆ.ಎಸ್.ಜಯಂತ್, ಈರೇಶ ಅಂಚಟಗೇರಿ, ಅರುಣ ಜೋಶಿ, ಡಾ. ರಘು ಅಕಮಂಚಿ ಸ್ಪಷ್ಟಪಡಿಸಿದ್ದಾರೆ.
ಕುಲಸಚಿವರ ವಿರುದ್ಧ ಕುಲಪತಿ ದೂರು
ಕುಲಸಚಿವೆ ಡಾ.ಚಂದ್ರಮಾ ಕಣಗಲಿ ವಿರುದ್ಧ ಕುಲಪತಿ ಡಾ.ಎಚ್.ಬಿ.ವಾಲಿಕಾರ ಅವರು ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ದೂರು ಸಲ್ಲಿಸಿದ್ದಾರೆ. ‘ಚಂದ್ರಮಾ ಕಣಗಲಿ ಅವರು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧವೇ ಇಲ್ಲದ ವ್ಯಕ್ತಿಗಳ ಬಗ್ಗೆಯೂ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.
ರಾಜ್ಯಪಾಲರು ವಿಶ್ವವಿದ್ಯಾಲಯದಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಕುಲಪತಿ ಮತ್ತು ಇತರರ ವಿರುದ್ಧ ದೂರು ನೀಡುವಂತೆ ಸೂಚಿಸಿದ್ದರೆ ಚಂದ್ರಮಾ ಅವರು ತಮಗೆ ಆಗದವರ ಹೆಸರುಗಳನ್ನು ಅದರಲ್ಲಿ ಸೇರಿಸಿದ್ದಾರೆ’ ಎಂದು ವಾಲೀಕಾರ್ ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ‘ಚಂದ್ರಮಾ ಕಣಗಲಿ ವಿರುದ್ಧದ ಆರೋಪಗಳ ಬಗ್ಗೆ ತನಿಖೆಗೆ ಸಿಂಡಿಕೇಟ್ ಉಪ ಸಮಿತಿ ರಚಿಸಲಾಗಿತ್ತು.
ಅದರಲ್ಲಿ ಶಂಕರಗೌಡ ಪಾಟೀಲ, ಎಲ್.ಕೆ. ಬೀರಗೌಡರ, ಡಾ.ಎನ್.ಆರ್. ಬಾಳೀಕಾಯಿ ಇದ್ದರು. ಲೋಕಾಯಕ್ತದಲ್ಲಿ ದೂರು ದಾಖಲಿಸುವಾಗ ಈ ನಾಲ್ವರ ಹೆಸರನ್ನೂ ವಿನಾಕಾರಣ ಸೇರಿಸಿದ್ದಾರೆ. ಆದ್ದರಿಂದ ಚಂದ್ರಮಾ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಕುಲಪತಿ ಶಿಫಾರಸು ಮಾಡಿದ್ದಾರೆ.
ನ್ಯಾಕ್ ಸಮಿತಿಗೆ ತಪ್ಪು ಮಾಹಿತಿ
ಅಕ್ಟೋಬರ್ 8ರಿಂದ 11ರವರೆಗೆ ವಿಶ್ವವಿದ್ಯಾಲಯಕ್ಕೆ ನ್ಯಾಕ್ ಸಮಿತಿ ಭೇಟಿ ನಿಗದಿಯಾಗಿತ್ತು. ಆದರೆ ಚಂದ್ರಮಾ ಕಣಗಲಿ ಅವರು ನ್ಯಾಕ್ ಸಮಿತಿ ಅಧ್ಯಕ್ಷ ಡಾ.ಲಕ್ಷ್ಮಣ ಚತುರ್ವೇದಿ ಅವರನ್ನು 98802 29505 ಸಂಖ್ಯೆಯ ಮೊಬೈಲ್ ಮೂಲಕ ಸಂಪರ್ಕಿಸಿ ‘ನ್ಯಾಕ್ ಸಮಿತಿ ಭೇಟಿ ಮುಂದೂಡುವಂತೆ ಕುಲಪತಿ ತಿಳಿಸಿದ್ದಾರೆ.
ಅದಕ್ಕಾಗಿ ತಾವು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡುವ ಅಗತ್ಯವಿಲ್ಲ’ ಎಂದು ಅನಧಿಕೃತವಾಗಿ ಹೇಳಿದ್ದಾರೆ ಎಂದು ವಾಲಿಕಾರ ಅವರು ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ತಾವು ಸ್ವತಃ ಕಚೇರಿ ದಾಖಲೆಗಳನ್ನು ಪರಿಶೀಲಿಸಿದ್ದು 98802 29505 ದೂರವಾಣಿ ಸಂಖ್ಯೆ ಚಂದ್ರಮಾ ಕಣಗಲಿ ಅವರಿಗೆ ಸೇರಿದ್ದು ಎಂದು ಅವರು ಹೇಳಿದ್ದಾರೆ.
(ಮುಂದುವರಿಯುವುದು)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.