ಓಸ್ಲೋ(ಪಿಟಿಐ): ಭಾರತದ ಮಕ್ಕಳ ಹಕ್ಕುಗಳ ಹೋರಾಟಗಾರ ಕೈಲಾಶ್ ಸತ್ಯಾರ್ಥಿ ಹಾಗೂ ಪಾಕಿಸ್ತಾನದಲ್ಲಿ ಹೆಣ್ಣುಮಕ್ಕಳ ಶಿಕ್ಷಣದ ಹೋರಾಟಗಾರ್ತಿ ಮಲಾಲಾ ಯೂಸುಫ್ಝೈ ಅವರು ೨೦೧೪ನೇ ಸಾಲಿನ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.
೬೦ ವರ್ಷದ ಸತ್ಯಾರ್ಥಿ ಅವರು ‘ಬಚ್ಪನ್ ಬಚಾವೋ ಆಂದೋಲನ್’ (ಬಾಲ್ಯ ರಕ್ಷಿಸಿ ಆಂದೋಲನ) ಸ್ವಯಂಸೇವಾ ಸಂಸ್ಥೆ ಮೂಲಕ ೩೦ ವರ್ಷಗಳಿಂದಲೂ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಹೋರಾಟ ಮಾಡುತ್ತಿದ್ದಾರೆ. ಮಕ್ಕಳ ಮಾರಾಟ, ಬಾಲ ಕಾರ್ಮಿಕ ಪದ್ಧತಿ ನಿಯಂತ್ರಣಕ್ಕೆ ಈ ಸಂಸ್ಥೆ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿದೆ.
ಮದರ್ ತೆರೆಸಾ ಬಳಿಕ ಭಾರತಕ್ಕೆ ನೊಬೆಲ್್ ಶಾಂತಿ ಪ್ರಶಸ್ತಿ ಸಂದಿರುವುದು ಇದು ಎರಡನೇ ಬಾರಿ.
‘ಬಚ್ಪನ್ ಬಜಾವೋ ಆಂದೋಲನ್’ ಸ್ವಯಂಸೇವಾ ಸಂಸ್ಥೆ ನಡೆಸುತ್ತಿರುವ ಸತ್ಯಾರ್ಥಿ, ಗಾಂಧಿ ಪರಂಪರೆಮುಂದುವರಿಸಿಕೊಂಡು ಬಂದಿದ್ದಾರೆ. ಆರ್ಥಿಕ ಲಾಭಕ್ಕಾಗಿ ಮಕ್ಕಳ ಮೇಲೆ ನಡೆಯುತ್ತಿರುವ ಶೋಷಣೆಗಳ ವಿರುದ್ಧ ವಿವಿಧ ಸ್ವರೂಪದ ಶಾಂತಿಯುತ ಪ್ರತಿಭಟನೆಗಳ ನೇತೃತ್ವ ವಹಿಸಿದ್ದಾರೆ’ ಎಂದು ಸಮಿತಿ ತಿಳಿಸಿದೆ.
‘ವಯಸ್ಸು ಚಿಕ್ಕದಾದರೂ ಮಲಾಲಾ ಅನೇಕ ವರ್ಷಗಳಿಂದ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಹೋರಾಟ ನಡೆಸುತ್ತ ಬಂದಿದ್ದಾರೆ. ತಮ್ಮಂತೆಯೇ ಇರುವವರ ಸ್ಥಿತಿಗತಿ ಸುಧಾರಿಸುವುದಕ್ಕೆ ಮಕ್ಕಳು ಹಾಗೂ ಹದಿಹರೆಯದವರೂ ಯಾವ ರೀತಿ ಕೊಡುಗೆ ನೀಡಬಹುದು ಎನ್ನುವುದಕ್ಕೆ ಅವರು ಉದಾಹರಣೆಯಾಗಿ ನಿಲ್ಲುತ್ತಾರೆ. ದಿಟ್ಟ ಹೋರಾಟದ ಮೂಲಕ ಹೆಣ್ಣುಮಕ್ಕಳ ಶಿಕ್ಷಣದ ಹಕ್ಕುಗಳ ಪ್ರಮುಖ ಧ್ವನಿಯಾಗಿದ್ದಾರೆ’ ಎಂದು ಆಯ್ಕೆ ಸಮಿತಿ ಬಣ್ಣಿಸಿದೆ.