ಸಕಲೇಶಪುರ: ಎತ್ತಿನಹೊಳೆ ತಿರುವು ಯೋಜನೆ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಚೆನ್ನೈನ ಹಸಿರು ನ್ಯಾಯಪೀಠ ನೋಟಿಸ್ ಜಾರಿ ಮಾಡಿದೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ದೆಹಲಿಯ ರಾಷ್ಟ್ರೀಯ ಜೀವ ವೈವಿಧ್ಯ ಪ್ರಾಧಿಕಾರ , ಕರ್ನಾಟಕ ನೀರಾವರಿ ನಿಗಮದ ಮುಖ್ಯ ಕಾರ್ಯದರ್ಶಿ, ದೆಹಲಿಯ ಹಣಕಾಸು ಇಲಾಖೆಯ ಮುಖ್ಯ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಜೀವ ವೈವಿಧ್ಯ ಮಂಡಳಿ, ದೆಹಲಿಯ ರಾಷ್ಟ್ರೀಯ ನೀರಾವರಿ ಅಭಿವೃದ್ಧಿ ಮಂಡಳಿಗೆ ನೋಟಿಸ್ ನೀಡಿದೆ. ಫೆ. 10ರ ಒಳಗೆ ವಿವರಣೆ ನೀಡುವಂತೆ ನೋಟಿಸಿನಲ್ಲಿ ತಿಳಿಸಲಾಗಿದೆ ಎಂದು ವಕೀಲ ಋಥ್ವಿಕ್ ದತ್ತ ತಿಳಿಸಿದ್ದಾರೆ.
ಯೋಜನೆಯೇ ಅವೈಜ್ಞಾನಿಕವಾಗಿದ್ದು, ಸಾಮಾಜಿಕ, ಮಳೆ ಮೂಲ, ಅರಣ್ಯ, ನೀರಾವರಿ, ವನ್ಯಜೀವಿ ಸೇರಿದಂತೆ ಪರಿಸರದ ಮೇಲೆ ಭಾರಿ ದುಷ್ಪರಿಣಾಮ ಸೇರಿದಂತೆ ಒಟ್ಟು 17 ಅಂಶ ಮುಂದಿಟ್ಟುಕೊಂಡು ಬೆಂಗಳೂರಿನ ಕೆ.ಎನ್. ಸೋಮಶೇಖರ್ ಅವರು ಚೆನ್ನೈನಲ್ಲಿರುವ ನ್ಯಾಷನಲ್ ಗ್ರೀನ್ ಟ್ರಿಬ್ಯೂನಲ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.