ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಬಳಿ ಜೋಳಿಗೆಯೇ ಇಲ್ಲಿ ಆಂಬುಲನ್ಸ್‌!

ಜೊಯಿಡಾದಲ್ಲಿ ಜಾರಿಯಾಗದ ‘ನಗು ಮಗು’ ಯೋಜನೆ
Last Updated 2 ನವೆಂಬರ್ 2014, 19:30 IST
ಅಕ್ಷರ ಗಾತ್ರ

ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ಬಹುತೇಕ ಗ್ರಾಮ­­­ಗ­ಳಲ್ಲಿ ರಸ್ತೆಯೇ ಇಲ್ಲ. ರಸ್ತೆ­ಗಳಿ­ದ್ದರೂ ವಾಹನ ಸಂಚಾರಕ್ಕೆ  ಯೋಗ್ಯ­ವಾ­ಗಿಲ್ಲ. ಇದು ತಾಲ್ಲೂಕಿನಲ್ಲಿ ಸರ್ಕಾ­ರದ ಮಹತ್ವಪೂರ್ಣ ಯೋಜನೆಯಾದ ‘ನಗು ಮಗು’ ಯೋಜನೆ ಜಾರಿಗೆ ತೊಡಕಾಗಿದೆ.

ರಸ್ತೆಗಳಿಲ್ಲದ ಕಾರಣ ಜನರು ತಾಲ್ಲೂಕು ಕೇಂದ್ರಕ್ಕೆ 10 ರಿಂದ 50 ಕಿ.ಮೀ ದೂರವನ್ನು ಕಾಲ್ನಡಿಗೆ­ಯ­ಲ್ಲಿಯೇ ಕ್ರಮಿಸಬೇಕು. ರೋಗಿಗಳು ಮತ್ತು ಗರ್ಭಿಣಿಯರನ್ನು ಆಸ್ಪತ್ರೆಗೆ ಕಂಬಳಿ ಜೋಳಿಗೆಯಲ್ಲಿ ಹೊತ್ತು­ಕೊಂಡೇ ಹೋಗಬೇಕು.

ತಾಲ್ಲೂಕಿನ ಕುಂಬಾರವಾಡಾ, ಉಳವಿ, ಜಗಲಪೇಟ, ರಾಮನಗರ, ಕ್ಯಾಸಲ್‌ರಾಕ್ ಹಾಗೂ ಡಿಗ್ಗಿಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದರೂ ಕಾಯಂ ವೈದ್ಯರ ನೇಮಕವಾಗಿಲ್ಲ. ತಾಲ್ಲೂಕು ಕೇಂದ್ರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಏಳು ಹುದ್ದೆಗಳು ಮಂಜೂರಾಗಿವೆ. ಸಿಬ್ಬಂದಿ ಕೊರತೆ­ಯಿಂದಾಗಿ ಜನರು ಹೆರಿಗೆಗೆ ಕಾರವಾರ ಜಿಲ್ಲಾ ಆಸ್ಪತ್ರೆ, ಬೆಳಗಾವಿ, ಖಾನಾ­ಪುರ, ದಾಂಡೇಲಿ ಅಥವಾ ಧಾರ­ವಾ­ಡಕ್ಕೆ ಹೋಗಬೇಕಾಗಿದೆ.

ಡಿಗ್ಗಿ, ಬೊಂಡೇಲಿ, ಕಣ್ಣೆ, ಮಾಯರೆ ಮುಂತಾದ ಗಡಿ ಭಾಗದ ಗ್ರಾಮಸ್ಥರು ನೆರೆಯ ಗೋವಾ ರಾಜ್ಯದ ಪ್ರಸೂತಿ ಕೇಂದ್ರಗಳಿಗೆ ಹೋಗ­ಬೇಕಾದ ಪರಿಸ್ಥಿತಿ ಇದೆ ಎನ್ನುತ್ತಾರೆ ಜೊಯಿಡಾ ತಾಲ್ಲೂಕು ಕುಣಬಿ ಹೋರಾಟ ಸಮಿತಿ ಅಧ್ಯಕ್ಷ ತುಕಾರಾಮ ವೇಲಿಪ ಮತ್ತು ತಾಲ್ಲೂಕು ಕುಣಬಿ ಅಭಿ­ವೃದ್ಧಿ ಸಮಾಜದ ಅಧ್ಯಕ್ಷ ದೇವಿದಾಸ ವೇಲಿಪ.

‘ಜೊಯಿಡಾ ತಾಲ್ಲೂಕಿಗೆ ಅಗತ್ಯ­ವಾದ ಈ ಯೋಜನೆ ಜಾರಿಯಾಗದಿ­ರು­ವು­ದು ನೋವಿನ ಸಂಗತಿ. ಇಲ್ಲಿನ ಸಮಸ್ಯೆ ಹಾಗೂ ಜನಜೀವನ
ವನ್ನು ಅರಿತು ಶೀಘ್ರವೇ ‘ನಗು ಮಗು’ ಯೋಜನೆ­ಯನ್ನು ಜಾರಿ ಮಾಡಬೇಕು. ಇಲ್ಲವಾ­ದಲ್ಲಿ ಹೋರಾಟ ಮಾಡು­ವುದು ಅನಿ­ವಾರ್ಯ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಶುಭಾಂಗಿ ಗಾವಡಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಯೋಜನೆಯನ್ನು ತಾಲ್ಲೂಕಿ­ನಲ್ಲಿ ಜಾರಿ ಮಾಡಲು ತಕ್ಷಣ ಕ್ರಮ ತೆಗೆ­ದು­ಕೊಳ್ಳದಿದ್ದರೆ ಹೋರಾಟ ಕೈಗೊಳ್ಳ­ಬೇ­ಕಾಗುತ್ತದೆ’ ಎಂದು ಜಿಲ್ಲಾ ಬುಡ­ಕಟ್ಟು ಅಭಿವ್ಯಕ್ತಿ ವೇದಿಕೆ ಅಧ್ಯಕ್ಷ  ಸುಭಾಷ ಗಾವಡಾ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT