ಬೆಳಗಾವಿ: ಉತ್ತರ ಕರ್ನಾಟಕ ಭಾಗದ ಜನರಿಗೆ ಗಳಗನಾಥರ ನಂತರ ಕಾದಂಬರಿಯ ರುಚಿ ಹತ್ತಿಸಿದ ಪ್ರಮುಖ ಲೇಖಕ ಬಸವರಾಜ ಕಟ್ಟಿಮನಿ ಅವರ ಸಮಗ್ರ ಸಾಹಿತ್ಯವನ್ನು ಒಟ್ಟು 15 ಸಂಪುಟಗಳಲ್ಲಿ ಪ್ರಕಟಿಸಲಾಗಿದ್ದು, ಇದೇ 9ರಂದು ಇಲ್ಲಿ ಬಿಡುಗಡೆಯಾಗಲಿದೆ.
‘ಕಥಾ ಸಂಕಲನ, 40 ಕಾದಂಬರಿ, ಅಪ್ರಕಟಿತ ಕಾದಂಬರಿ, ಆತ್ಮಕಥೆ, ಕವಿತೆ, ನಾಟಕ, ಮಕ್ಕಳ ಕಥೆ ಸೇರಿದಂತೆ ಕಟ್ಟಿಮನಿ ಅವರ ಎಲ್ಲ 64 ಪುಸ್ತಕಗಳನ್ನು 15 ಸಂಪುಟ (10,500 ಪುಟ) ಗಳಲ್ಲಿ ಪ್ರಕಟಿಸಲಾಗಿದೆ’ ಎಂದು ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಎಂ. ಕಲಬುರ್ಗಿ ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ರಾಜ್ಯ ಸರ್ಕಾರವು ಸಮಗ್ರ ಸಾಹಿತ್ಯ ಪ್ರಕಟಣೆಗಾಗಿ ₨ 30 ಲಕ್ಷ ಅನುದಾನ ಬಿಡುಗಡೆ ಮಾಡಿದೆ. ಒಟ್ಟು ₨ 4,500 ಬೆಲೆ ಆಕರಿಸಲು ನಿರ್ಧರಿಸಲಾಗಿದ್ದು, ಲೋಕಾ ರ್ಪಣೆಯ ದಿನ ಓದುಗರಿಗಾಗಿ ₨ 2,250ಕ್ಕೆ ಮಾರಾಟ ಮಾಡಲಾಗು ವುದು’ ಎಂದರು. ‘ಕಟ್ಟಿಮನಿ ಅವರ ‘ಮಗನ ತಾಯಿ’ ಕಾದಂಬರಿಯ ಪ್ರತಿ ದೊರೆಯಲಿಲ್ಲ. ಆದರೆ, ‘ಮಂಗಳ’ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿರುವ ವಿಷಯ ತಿಳಿದು, ಪತ್ರಿಕಾ ಕಚೇರಿಯಲ್ಲಿ ಲಭ್ಯವಿದ್ದ ಕೆಲವು ಭಾಗಗಳನ್ನು ಸಂಗ್ರಹಿಸಿ ಪ್ರಕಟಿಸಲಾಗಿದೆ. ಅವರ ‘ಮಾಡಿ ಮಡಿದವರು’ ಕಾದಂಬರಿಯನ್ನು ಪ್ರತಿಷ್ಠಾನದಿಂದ ಇಂಗ್ಲಿಷ್ ಮತ್ತು ಮರಾಠಿಗೆ ಅನುವಾದಿಸಿ ಪ್ರಕಟಿಸಲಾಗಿದೆ’ ಎಂದು ಡಾ.ಕಲಬುರ್ಗಿ ತಿಳಿಸಿದರು.