ಚಿಕ್ಕಮಗಳೂರು: ಸ್ಥಳೀಯರ ವಿರೋಧದ ನಡುವೆಯೂ ಜಿಲ್ಲೆಯ ಕುದುರೆಮುಖ ರಾಷ್ಟ್ರೀಯ ಉದ್ಯಾನದ ಅರಣ್ಯ ಪ್ರದೇಶವನ್ನು ’ಹುಲಿ ಯೋಜನೆ’ಗೆ ಒಳಪಡಿಸಿ ಕೇಂದ್ರ ಸರ್ಕಾರ ಅಧಿಕೃತ ಘೋಷಣೆ ಮಾಡಿರುವುದು, ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಬಹುತೇಕ ನಿವಾಸಿಗಳನ್ನು ಆತಂಕಕ್ಕೆ ದೂಡಿದೆ.
ಆದರೆ, ಸೂಕ್ತ ಪರಿಹಾರದ ನಿರೀಕ್ಷೆಯಲ್ಲಿದ್ದು ಸ್ವಯಂಪ್ರೇರಿತವಾಗಿ ಸ್ಥಳಾಂತರಕ್ಕೆ ಸಿದ್ಧವಿದ್ದ ಸಂತ್ರಸ್ತ ಕುಟುಂಬಗಳು ನಿಟ್ಟುಸಿರುಬಿಟ್ಟಿವೆ.
2011ರಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ್ನು ಹುಲಿ ಯೋಜನೆಗೆ ಒಳಪಡಿಸುವ ಪ್ರಸ್ತಾವನೆ ಸಿದ್ಧಪಡಿಸಿ, 2012ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಹುಲಿ ಯೋಜನೆಗೆ ಸೇರಿಸುವುದರಿಂದ ರಾಷ್ಟ್ರೀಯ ಉದ್ಯಾನದ ಸುತ್ತಲಿನ 6 ಕಿ.ಮೀ. ವ್ಯಾಪ್ತಿಯಲ್ಲಿ ಬಫರ್ ಜೋನ್ ನಿಗದಿಪಡಿಸಿ ಹಲವು ನಿರ್ಬಂಧ ವಿಧಿಸುವುದರಿಂದ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದರು.
ಆರಂಭದಲ್ಲಿ ಈ ಪ್ರದೇಶವನ್ನು ಹುಲಿ ಯೋಜನೆಗೆ ಒಳಪಡಿಸಲು ರಾಷ್ಟ್ರೀಯ ಉದ್ಯಾನದೊಳಗಿದ್ದ ಸಂತ್ರಸ್ತರೂ ವಿರೋಧಿಸಿದ್ದರು. ಆದರೆ, ಕಳೆದ ಒಂದು ವರ್ಷದ ಈಚೆಗೆ ಕೆಲ ಸಂತ್ರಸ್ತ ಕುಟುಂಬಗಳೇ ಸ್ವಯಂಪ್ರೇರಿತವಾಗಿ ಸ್ಥಳಾಂತರಕ್ಕೆ ಸಿದ್ಧವಿರುವುದಾಗಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಅಲ್ಲದೆ, ಈ ಪ್ರದೇಶವನ್ನು ಹುಲಿ ಯೋಜನೆಗೆ ಸೇರ್ಪಡೆ ಮಾಡಿ ನ್ಯಾಯಯುತ ಪರಿಹಾರ ನೀಡುವಂತೆ ಒತ್ತಾಯಿಸಿದ್ದವು.
ಸಂರಕ್ಷಣಾ ಪ್ರಾಧಿಕಾರದ ಒಪ್ಪಿಗೆ
ನವದೆಹಲಿ (ಪಿಟಿಐ): ಕರ್ನಾಟಕದ ಕುದುರೆಮುಖ ಸೇರಿದಂತೆ ದೇಶದ ಮೂರು ಅಭಯಾರಣ್ಯಗಳನ್ನು ‘ಹುಲಿ ಸಂರಕ್ಷಿತ ಅರಣ್ಯ ಪ್ರದೇಶ’ ಎಂದು ಘೋಷಿಸಲು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಒಪ್ಪಿಗೆ ದೊರೆತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಮಧ್ಯಪ್ರದೇಶ ಮತ್ತು ಒಡಿಶಾದಲ್ಲಿ ಎರಡು ಹೊಸ ಹುಲಿ ಸಂರಕ್ಷಿತ ಅಭಯಾರಣ್ಯ ಸ್ಥಾಪನೆಗೂ ಪ್ರಾಧಿಕಾರ ಒಪ್ಪಿಗೆ ನೀಡಿದೆ.