ಬೆಂಗಳೂರು: ‘ಕರ್ನಾಟಕ ಹಾಲು ಮಹಾಮಂಡಲ (ಕೆಎಂಎಫ್) ನಷ್ಟದಲ್ಲಿಲ್ಲ. 2015–16ನೇ ಸಾಲಿನಲ್ಲಿ ₹ 81 ಕೋಟಿ ನಿವ್ವಳ ಲಾಭ ಗಳಿಸಿದೆ’ ಎಂದು ಅಧ್ಯಕ್ಷ ಪಿ.ನಾಗರಾಜು ತಿಳಿಸಿಕದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಾಲಿನ ಪುಡಿಗೆ ಬೇಡಿಕೆ ಕುಸಿದಿರುವುದರಿಂದ ಕೆಎಂಎಫ್ ನಷ್ಟದಲ್ಲಿದೆ ಎಂಬುದಾಗಿ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಇತ್ತೀಚೆಗೆ ಮಾಡಿರುವ ಆರೋಪ ಸತ್ಯಕ್ಕೆ ದೂರ’ ಎಂದು ಸ್ಪಷ್ಟಪಡಿಸಿದರು.
‘ಕಳೆದ ಸಾಲಿನಲ್ಲಿ ಕೆಎಂಎಫ್ ₹ 3,500 ಕೋಟಿ ವಹಿವಾಟು ನಡೆಸಿದೆ. ಎಲ್ಲ ಹಾಲು ಒಕ್ಕೂಟಗಳೂ ಸೇರಿ ವಹಿವಾಟಿನ ಮೊತ್ತ ₹ 7,640 ಕೋಟಿಗೆ ಏರಿದೆ. ಈ ಒಕ್ಕೂಟಗಳು ₹ 40 ಕೋಟಿ ಲಾಭ ಗಳಿಸಿವೆ’ ಎಂದು ತಿಳಿಸಿದರು.
‘2014–15ನೇ ಸಾಲಿನಲ್ಲಿ ಕೆಎಂಎಫ್ ₹ 100 ಕೋಟಿ ನಿವ್ವಳ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಲಾಭ ಸ್ವಲ್ಪ ಕಡಿಮೆ ಆಗಿದೆ. ರೈತರಿಗೆ ₹ 80 ಕೋಟಿ ಸಹಾಯಧನ ನೀಡಿದ್ದೂ ಇದಕ್ಕೆ ಕಾರಣ’ ಎಂದು ವಿವರಿಸಿದರು.
‘ಕೆಎಂಎಫ್ ಬಳಿ 24,977 ಟನ್ ಹಾಲಿನ ಪುಡಿ ದಾಸ್ತಾನು ಇದೆ. ಈ ದಾಸ್ತಾನನ್ನು ಒಮ್ಮೆಲೆ ಮಾರುಕಟ್ಟೆಗೆ ಬಿಡುಗಡೆ ಮಾಡಿದರೆ ದರ ಕುಸಿಯು
ತ್ತದೆ. ಹಾಗಾಗಿ, ಬೇಡಿಕೆ ನೋಡಿ ಕೊಂಡು ಹಂತ ಹಂತವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದೇವೆ’ ಎಂದರು.
‘ಹಾಲಿನ ಪುಡಿಯನ್ನು ಒಂದು ವರ್ಷದವರೆಗೆ ಬಳಸಬಹುದು. ದಾಸ್ತಾನಿರುವ ಪುಡಿ 6 ತಿಂಗಳ ಈಚೆಗೆ ತಯಾರಾದುದು. ಹೀಗಾಗಿ ಬಳಕೆ ಅವಧಿ ಮೀರಿ ಹಾಲಿನ ಪುಡಿ ವ್ಯರ್ಥವಾಗುವ ಪ್ರಮೇಯ ಸೃಷ್ಟಿಯಾಗುವುದಿಲ್ಲ’ ಎಂದರು.
‘ಬೇಸಿಗೆಯಲ್ಲಿ ಹಾಲಿನ ಉತ್ಪಾದನೆ ಕಡಿಮೆ ಆಗುತ್ತದೆ. ದೈನಂದಿನ ಹಾಲು ಸಂಗ್ರಹ 73 ಲಕ್ಷ ಟನ್ಗಳಿಂದ 60 ಲಕ್ಷ ಟನ್ಗಳಿಗೆ ಇಳಿದಿದೆ. ನಿತ್ಯ ಸರಾಸರಿ 12 ಲಕ್ಷ ಲೀಟರ್ನಷ್ಟು ಹೆಚ್ಚುವರಿ ಹಾಲಿನಿಂದ ಪುಡಿಯನ್ನು ತಯಾರಿಸಲಾಗುತ್ತಿತ್ತು. ಈಗ ಈ ಪ್ರಮಾಣ 3.5 ಲಕ್ಷ ಲೀಟರ್ಗೆ ಇಳಿದಿದೆ. ಪ್ರತೀ ಲೀಟರ್ ಹಾಲನ್ನು ಪುಡಿಯನ್ನಾಗಿ ಪರಿವರ್ತಿಸಲು ಆಗುತ್ತಿದ್ದ ವೆಚ್ಚವನ್ನು ₹ 36 ರಿಂದ ₹ 26ಕ್ಕೆ ಕಡಿಮೆ ಮಾಡಿದ್ದೇವೆ’ ಎಂದರು.
ಅಧಿಕಾರಾವಧಿ ಹಂಚಿಕೆ ಅಪ್ರಸ್ತುತ
‘ಶಾಸಕ ಎಂ.ಪಿ.ರವೀಂದ್ರ ಜೊತೆ ಅಧಿಕಾರಾವಧಿಯನ್ನು ಹಂಚಿಕೊಳ್ಳುವ ಬಗ್ಗೆ ನಮ್ಮ ಹಂತದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ನಾನು 2014ರ ಸೆಪ್ಟೆಂಬರ್ನಲ್ಲಿ ಅಧಿಕಾರ ವಹಿಸಿಕೊಂಡಿದ್ದೇನೆ. ನಾನು ಅಧ್ಯಕ್ಷನಾಗಿ ಎರಡು ವರ್ಷ ತುಂಬುವುದಕ್ಕೆ ಇನ್ನೂ ಸಮಯ ಇದೆ.
ಈ ಕುರಿತು ಈಗಲೇ ಚರ್ಚೆ ನಡೆಸುವುದು ಅಪ್ರಸ್ತುತ’ ಎಂದು ಪಿ.ನಾಗರಾಜು ತಿಳಿಸಿದರು. ‘ಯಾರು ಅಧ್ಯಕ್ಷರಾಗಿರಬೇಕು ಎಂಬುದನ್ನು ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.