ಬೆಂಗಳೂರು: ಪ್ರೊ. ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನ ಜೀವಮಾನ ಸಾಧನೆಗಾಗಿ ನೀಡುವ ಪ್ರೊ. ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿಗೆ ಗುಲ್ಬರ್ಗ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಪ್ರೊ.ವಿ.ಜಿ. ಪೂಜಾರ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ₨ 10 ಸಾವಿರ ನಗದು, ಫಲಕ ಹಾಗೂ ಸ್ಮರಣಿಕೆ ಒಳಗೊಂಡಿದೆ.
ಮಹಿಳಾ ಸಾಹಿತ್ಯಕ್ಕಾಗಿ ‘ರಮಾಬಾಯಿ ಅಂಬೇಡ್ಕರ್ ಪುಸ್ತಕ ಬಹುಮಾನ’ಕ್ಕೆ ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಡಾ. ಎಚ್.ಎಸ್. ಅನುಪಮಾ, ಸಮಾಜಶಾಸ್ತ್ರೀಯ ಅಧ್ಯಯನಕ್ಕಾಗಿ ‘ಬಿ. ಶಾಮಸುಂದರ್ ಪುಸ್ತಕ ಬಹುಮಾನ’ಕ್ಕೆ ಮಂಡ್ಯದ ಡಾ. ಎನ್. ಜಗದೀಶ್ ಕೊಪ್ಪ ಹಾಗೂ ಸೃಜನ ಸಾಹಿತ್ಯಕ್ಕಾಗಿ ‘ಉರಿಲಿಂಗಪೆದ್ದಿ ಪುಸ್ತಕ ಬಹುಮಾನ’ಕ್ಕೆ ಬೆಂಗಳೂರಿನ ಡಾ. ಟಿ. ಯಲ್ಲಪ್ಪ ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿಗಳು ತಲಾ ₨ 5 ಸಾವಿರ ನಗದು, ಫಲಕ ಮತ್ತು ಸ್ಮರಣಿಕೆ ಒಳಗೊಂಡಿವೆ. ಶನಿವಾರ (ಮೇ 31) ಇಲ್ಲಿನ ನಯನ ಸಭಾಂಗಣದಲ್ಲಿ ನಡೆಯಲಿರುವ ಮಂಟಪ ಮಾಲೆ ಸರಣಿಯ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಎಂ.ಬಿ. ಕಟ್ಟಿ ತಿಳಿಸಿದ್ದಾರೆ.