ಲೇಹ್ (ಪಿಟಿಐ): ಸಾಂಪ್ರದಾಯಿಕ ಯುದ್ಧವನ್ನು ಮಾಡುವ ಸಾಮರ್ಥ್ಯ ಕಳೆದುಕೊಂಡಿರುವ ಪಾಕಿಸ್ತಾನವು ಭಾರತದ ವಿರುದ್ಧ ಭಯೋತ್ಪಾದನೆಯ ಪರೋಕ್ಷ ಸಮರ ನಡೆಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಜರಿದಿದ್ದಾರೆ.
ಇದೇ ಮೊದಲ ಬಾರಿಗೆ ಲೇಹ್ ಹಾಗೂ ಲಡಾಖ್ ಪ್ರವಾಸ ಕೈಗೊಂಡಿರುವ ಪ್ರಧಾನಿ ಅವರು ಭೂಸೇನೆ ಹಾಗೂ ವಾಯು ಸೇನೆಯ ಯೋಧರನ್ನು ಉದ್ದೇಶಿಸಿ ಅವರು ಮಾತನಾಡಿದರು.
‘ನೆರೆಯ ರಾಷ್ಟ್ರವು ಸಾಂಪ್ರದಾಯಿಕ ಯುದ್ಧ ಮಾಡುವ ಬಲ ಕಳೆದುಕೊಂಡಿದೆ. ಆದರೆ ಭಯೋತ್ಪಾದನೆಯ ಪರೋಕ್ಷ ಸಮರವನ್ನು ಮುಂದುವರಿಸಿದೆ’ ಎಂದು ಮೋದಿ ಅವರು ಟೀಕಿಸಿದ್ದಾರೆ.
ಭಾರತೀಯ ಸಶಸ್ತ್ರ ಪಡೆಗಳಲ್ಲಿ ಯುದ್ಧಕ್ಕಿಂತಲೂ ಹೆಚ್ಚಾಗಿ ಭಯೋತ್ಪಾದನೆಯಿಂದ ಸಾವುಗಳಾಗುತ್ತಿವೆ. ಆದರೆ ಇದೊಂದು ಜಾಗತಿಕ ಸಮಸ್ಯೆಯಾಗಿದ್ದು, ಇದರ ವಿರುದ್ಧ ಸಮರಕ್ಕಾಗಿ ಮಾನವತಾವಾದ ಪ್ರತಿಪಾದಿಸುವ ಎಲ್ಲಾ ಪಡೆಗಳು ಒಗ್ಗೂಡಬೇಕು ಎಂದು ಅವರು ಅಭಿಪ್ರಾಯ ಪಟ್ಟರು.
ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಇತ್ತೀಚಿಗೆ ನಡೆದ ಉಗ್ರರ ವಿರುದ್ಧದ ಕಾಳಗದಲ್ಲಿ ಒಬ್ಬ ಅಧಿಕಾರಿ ಸೇರಿದಂತೆ ಸೇನೆಯ ಎಂಟು ಸಿಬ್ಬಂದಿ ಗಾಯಗೊಂಡ ಘಟನೆಯ ಹಿನ್ನೆಲೆ ಮೋದಿ ಅವರು ಈ ಅಭಿಪ್ರಾಯ ಹೊರ ಬಿದ್ದಿದೆ.