ನವದೆಹಲಿ (ಪಿಟಿಐ): ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಒದಗಿಸುವ ಸಂವಿಧಾನದ 370ನೇ ವಿಧಿ ರದ್ದು, ಏಕರೂಪದ ನಾಗರಿಕ ಸಂಹಿತೆ ಜಾರಿಗಳಂತಹ ವಿವಾದಾತ್ಮಕ ವಿಷಯಗಳು ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಸ್ಥಾನ ಪಡೆದಿವೆ.
ನವದೆಹಲಿಯಲ್ಲಿ ಬಿಜೆಪಿ ಸೋಮವಾರ ಬಿಡುಗಡೆಗೊಳಿಸಿದ 52 ಪುಟಗಳ ಚುನಾವಣಾ ಪ್ರಣಾಳಿಕೆಯಲ್ಲಿ, ಉತ್ತಮ ಆಡಳಿತ ಹಾಗೂ ಸಮಗ್ರ ಅಭಿವೃದ್ಧಿ ನೀಡುವ ಭರವಸೆಯನ್ನೂ ಜನತೆಗೆ ಬಿಜೆಪಿ ನೀಡಿದೆ.
‘ಸಂವಿಧಾನದ ಚೌಕಟ್ಟಿನಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಎಲ್ಲಾ ಸಾಧ್ಯತೆಗಳನ್ನು ಮುಕ್ತವಾಗಿರಿಸುವ ನಿಲುವನ್ನು ಬಿಜೆಪಿ ಪುನರುಚ್ಚರಿಸುತ್ತದೆ’ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಬಿಡುಗಡೆ ಮತ್ತು ಇತರರು ಬಿಡುಗಡೆ ಮಾಡಿದ ಪ್ರಣಾಳಿಕೆ ಹೇಳಿದೆ.
ರಾಮಮಂದಿರ ವಿಚಾರ ಸೇರ್ಪಡೆ ಬಗ್ಗೆ ಬಿಜೆಪಿ ನಾಯಕರಲ್ಲಿ ಭಿನ್ನಾಭಿಪ್ರಾಯಗಳಿದ್ದ ಬಗ್ಗೆ ಕೇಳಲಾದ ಪ್ರಶ್ನೆಗೆ ಚುನಾವಣಾ ಪ್ರಣಾಳಿಕೆ ಸಮಿತಿಯ ಅಧ್ಯಕ್ಷ ಮುರಳಿ ಮನೋಹರ ಜೋಷಿ ಅವರು 'ಪ್ರಣಾಳಿಕೆಯಲ್ಲಿ ಏನನ್ನು ಹೇಳಬೇಕಾಗಿತ್ತೋ ಅದೆಲ್ಲವೂ ಇದೆ. ನಿಮಗೆ ಏನನ್ನಾದರೂ ಬರೆಯಬೇಕೆಂದಿದ್ದರೆ ನಿಮ್ಮ ಗ್ರಹಿಕೆ ಆಧಾರದಲ್ಲಿ ಬರೆಯಲು ನೀವು ಮುಕ್ತರು' ಎಂದು ಉತ್ತರಿಸಿದರು.