ಬೆಂಗಳೂರು: ತಂದೆ ವ್ಯಾಸಂಗ ಮಾಡಿದ್ದು ಏಳನೇ ತರಗತಿವರೆಗೆ ಮಾತ್ರ. ತಾಯಿ ಕಲಿತದ್ದು ಎರಡನೇ ತರಗತಿವರೆಗೆ. ಸಹೋದರರ ಶಿಕ್ಷಣ ಎಸ್ಸೆಸ್ಸೆಲ್ಸಿಗಿಂತಲೂ ಕಡಿಮೆ. ಆದರೆ, ಮಗಳು ಸ್ನಾತಕೋತ್ತರ ಪದವಿಯಲ್ಲಿ ಆರು ಚಿನ್ನದ ಪದಕಗಳನ್ನು ಗಳಿಸಿದ್ದಾಳೆ.
ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿಯ ರಸಾಯನವಿಜ್ಞಾನ ವಿಭಾಗದಲ್ಲಿ 6 ಚಿನ್ನದ ಪದಕ ಹಾಗೂ 3 ನಗದು ಬಹುಮಾನ ಪಡೆದ ನೂರ್ಜಹಾನ್ ಎ.ಆರ್. ಅವರ ಚಿನ್ನದ ಹಾದಿಯ ಕಥನ ಇದು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ 49ನೇ ಘಟಿಕೋತ್ಸವದಲ್ಲಿ ಚಿನ್ನದ ಪದಕ ಸ್ವೀಕರಿಸಿದ ಬಳಿಕ ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದರು.
ನೂರ್ಜಾನ್ ಅವರ ಊರು ಬಾಗೇಪಲ್ಲಿ. ತಂದೆ ಅಬ್ದುಲ್ ರಫೀಕ್. ತಾಯಿ ಶಕೀಲಾ ಬಾನು. ತಂದೆ ಊರಿನ ಮಾಂಸದ ಅಂಗಡಿಯಲ್ಲಿ ದುಡಿಯುತ್ತಿದ್ದಾರೆ. ನೂರ್ಜಹಾನ್ ಪದವಿವರೆಗೆ ಬಾಗೇಪಲ್ಲಿ ನ್ಯಾಷನಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು. ಎಸ್ಸೆಸ್ಸೆಲ್ಸಿ ಕಲಿಯುವ ತನಕ ಅವರು ಉನ್ನತ ಶಿಕ್ಷಣದ ಕನಸು ಕಂಡಿರಲಿಲ್ಲ. ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕಗಳು ಬಂತು. ಹೀಗಾಗಿ ಕಲಿಯುವ ಉತ್ಸಾಹ ಮೂಡಿತು.
ಬಿ.ಎಸ್ಸಿಯಲ್ಲಿ ಜೀವನದ ಗುರಿಯೇ ಬದಲಾಯಿತು. ಬಿ.ಎಸ್ಸಿಯಲ್ಲಿ ಅವರು ಶೇ 85 ಅಂಕ ಗಳಿಸಿದರು. ಇದೇ ವೇಳೆ ದೊರಕಿದ ಜಿಂದಾಲ್ ವಿದ್ಯಾರ್ಥಿ ವೇತನ, ರಾಜ್ಯ ಸರ್ಕಾರದ ವಿದ್ಯಾರ್ಥಿ ವೇತನ ಇನ್ನಷ್ಟು ಕಲಿಯುವ ತುಡಿತಕ್ಕೆ ಉತ್ತೇಜನ ನೀಡಿತು. ಉನ್ನತ ವ್ಯಾಸಂಗಕ್ಕಾಗಿ ಬೆಂಗಳೂರು ವಿವಿಯಲ್ಲಿ ರಸಾಯನವಿಜ್ಞಾನ ವಿಭಾಗದಲ್ಲಿ ಸ್ನಾತಕೋತ್ತರ ಪದವಿಗೆ ಸೇರ್ಪಡೆಯಾದರು.
ಆರಂಭದಲ್ಲಿ ಬಾಗೇಪಲ್ಲಿಯಿಂದ ಜ್ಞಾನಭಾರತಿಗೆ ನಿತ್ಯ ಪ್ರಯಾಣ ಮಾಡುತ್ತಿದ್ದರು. ಸ್ವಲ್ಪ ಸಮಯ ಕಳೆದ ಬಳಿಕ ಸ್ನೇಹಿತರ ಸಲಹೆ ಮೇರೆಗೆ ವಿವಿಯ ಹಾಸ್ಟೆಲ್ಗೆ ಸೇರಿಕೊಂಡರು. ಇದರಿಂದ ಕಲಿಕೆಗೆ ಹೆಚ್ಚಿನ ಸಮಯ ಸಿಕ್ಕಿತು. ‘ಪೋಷಕರು ಹೆಚ್ಚು ಕಲಿತವರು ಅಲ್ಲ. ಆರ್ಥಿಕ ಪರಿಸ್ಥಿತಿಯೂ ಸಾಧಾರಣ ಸ್ಥಿತಿಯಲ್ಲಿ ಇತ್ತು. ಇಂತಹ ಸ್ಥಿತಿಯಲ್ಲೂ ಪೋಷಕರು ಕಲಿಕೆಗೆ ಹೆಚ್ಚಿನ ಉತ್ತೇಜನ ನೀಡಿದರು. ಅವರ ಪ್ರೋತ್ಸಾಹವೇ ಈ ಸಾಧನೆ ಮಾಡಲು ಸಾಧ್ಯ ಆಯಿತು’ ಎಂದು ನೂರ್ಜಹಾನ್ ಅನಿಸಿಕೆ ಹಂಚಿಕೊಂಡರು.
‘ಪ್ರಾಥಮಿಕ ತರಗತಿಯಲ್ಲಿಯೇ ಶಿಕ್ಷಕಿ ಆಗಬೇಕು ಎಂಬ ಕನಸು ಕಂಡಿದ್ದೆ. ಪಿಎಚ್.ಡಿ ಪದವಿ ಪಡೆದು ಉಪನ್ಯಾಸಕಿ ಆಗುವ ಯೋಚನೆ ಇದೆ’ ಎಂದರು. ಬಿ.ಎಸ್ಸಿ ಪದವಿಯಲ್ಲಿ ಚಿಂತಾಮಣಿ ಸರ್ಕಾರಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಚೈತ್ರ ಎನ್. ಅವರು ಮೂರು ಚಿನ್ನದ ಪದಕ ಹಾಗೂ ನಾಲ್ಕು ನಗದು ಬಹುಮಾನಗಳನ್ನು ಸ್ವೀಕರಿಸಿದರು. ‘ತಂದೆ ಕೃಷಿಕರು. ಪೋಷಕರ ಬೆಂಬಲ ಹಾಗೂ ಸಹಪಾಠಿಗಳ ಸಹಕಾರದಿಂದ ಹೆಚ್ಚಿನ ಅಂಕ ಗಳಿಸಲು ಸಾಧ್ಯ ಆಯಿತು. ಪಿಎಚ್.ಡಿ ಮಾಡುವ ಯೋಚನೆ ಇದೆ’ ಎಂದು ಅವರು ಹೇಳಿದರು.
ಪಠ್ಯ ಪುಸ್ತಕ ಓದಲಿಲ್ಲ: ಬಿಎ ಪದವಿಯಲ್ಲಿ ನಗರದ ಬಿಷಪ್ ಕಾಟನ್ ಮಹಿಳಾ ಕ್ರೈಸ್ತ ಕಾಲೇಜಿನ ವಿದ್ಯಾರ್ಥಿನಿ ಅನುಷಾ ಜಿ. ಅವರು 4 ಚಿನ್ನದ ಪದಕ ಹಾಗೂ 3 ನಗದು ಬಹುಮಾನ ಗಳಿಸಿದರು. ಅವರ ತಂದೆ ಗಣೇಶ್ ಕೆ.ಎಸ್. ಅವರು ಅಬಕಾರಿ ಇಲಾಖೆಯಲ್ಲಿ ಅಧಿಕಾರಿಯಾಗಿದ್ದಾರೆ. ತಾಯಿ ಕುಸುಮಾ, ಗೃಹಿಣಿ.
‘ಪೋಷಕರು ನನ್ನನ್ನು ಹುಡುಗನ ಹಾಗೆ ಬೆಳೆಸಿದರು. ಕರಾಟೆಯಲ್ಲಿ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದೇನೆ. ಓದಿನಲ್ಲೂ ಹುಡುಗರಿಗಿಂತ ಹೆಚ್ಚಿನ ಸಾಧನೆ ಮಾಡಬೇಕು ಎಂಬುದು ಹಂಬಲ ಆಗಿತ್ತು’ ಎಂದು ಅನುಷಾ ತಿಳಿಸಿದರು. ‘ರ್ಯಾಂಕ್ ನಿರೀಕ್ಷೆ ಮಾಡಿರಲಿಲ್ಲ. ಕಲಾ ವಿಭಾಗದಲ್ಲಿ ಹೆಚ್ಚಿನ ಅಂಕ ಗಳಿಸಲು ಪುಸ್ತಕಗಳನ್ನೇ ಓದಬೇಕಿಲ್ಲ. ಪ್ರಸಕ್ತ ವಿದ್ಯಮಾನಗಳ ಬಗ್ಗೆ ಗಮನ ಹರಿಸಿದೆ. ಇದರಿಂದ ಹೆಚ್ಚಿನ ಅಂಕ ಗಳಿಸಲು ಸಾಧ್ಯ ಆಯಿತು. ಐಎಎಸ್ ಅಧಿಕಾರಿ ಆಗಬೇಕು ಎಂಬ ಕನಸಿದೆ’ ಎಂದರು.
ಆರು ಮಂದಿಗೆ ಗೌರವ ಡಾಕ್ಟರೇಟ್: ಎಸ್.ಎಸ್. ಅರಕೇರಿ (ಸಮಾಜಸೇವೆ), ಜಿ.ಬಿ. ಪರಮಶಿವಯ್ಯ (ಸಮಾಜಸೇವೆ), ಬಿ.ಟಿ. ಲಕ್ಷ್ಮಣ್ (ಶಿಕ್ಷಣ), ಪಿ. ರಾಮಯ್ಯ (ಪತ್ರಿಕೋದ್ಯಮ), ಹಂಸಲೇಖ (ಸಿನಿಮಾ ಸಂಗೀತ) ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಕಿರಣ್ ಮಜುಂದಾರ್ ಷಾ (ವಿಜ್ಞಾನ ಮತ್ತು ಜೀವ ತಂತ್ರಜ್ಞಾನ) ಗೈರು ಹಾಜರಾಗಿದ್ದರು.
223 ಮಂದಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡಲಾಯಿತು. ಸ್ನಾತಕೋತ್ತರ ವಿಭಾಗದಲ್ಲಿ 38 ವಿದ್ಯಾರ್ಥಿನಿಯರು ಹಾಗೂ 28 ವಿದ್ಯಾರ್ಥಿಗಳು ಸೇರಿ 83 ಮಂದಿ ಚಿನ್ನದ ಪದಕ ಪಡೆದರು. ಪದವಿಯಲ್ಲಿ 11 ವಿದ್ಯಾರ್ಥಿನಿಯರು ಹಾಗೂ 6 ಮಂದಿ ವಿದ್ಯಾರ್ಥಿಗಳು ಚಿನ್ನದ ಪದಕ ಸ್ವೀಕರಿಸಿದರು.
ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾ. ಎಸ್. ರಾಜೇಂದ್ರ ಬಾಬು ಘಟಿಕೋತ್ಸವ ಭಾಷಣ ಮಾಡಿ, ‘ಶೈಕ್ಷಣಿಕ ವಲಯಗಳಲ್ಲಿ ರಾಜಕೀಯ ಹಸ್ತಕ್ಷೇಪವನ್ನು ತಡೆಗಟ್ಟಬೇಕು. ಅದೇ ಹೊತ್ತಿಗೆ, ನೀತಿ ನಿರೂಪಣೆಯ ಮಟ್ಟದಲ್ಲಿ ರಾಜಕೀಯ ನಾಯಕತ್ವದ ಜೊತೆಗೆ ಸರಿಯಾದ ಸಂಬಂಧವನ್ನು ನಿಭಾಯಿಸಬೇಕು’ ಎಂದು ಸಲಹೆ ನೀಡಿದರು.
ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅಧ್ಯಕ್ಷತೆ ವಹಿಸಿದ್ದರು. ಕುಲಪತಿ ಪ್ರೊ.ಬಿ. ತಿಮ್ಮೇಗೌಡ, ಕುಲಸಚಿವರಾದ ಪ್ರೊ.ಕೆ.ಕೆ. ಸೀತಮ್ಮ, ಕುಲಸಚಿವ (ಮೌಲ್ಯಮಾಪನ) ಪ್ರೊ. ನಿಂಗೇಗೌಡ ಉಪಸ್ಥಿತರಿದ್ದರು.
ನೇಕಾರ ಪುತ್ರಿಗೆ 7 ಚಿನ್ನ
ಸ್ನಾತಕೋತ್ತರ ಪದವಿಯ ಭೌತವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಶ್ರುತಿ ಡಿ.ಎಲ್. ಅವರು 7 ಚಿನ್ನದ ಪದಕಗಳನ್ನು ಗಳಿಸುವ ಮೂಲಕ ಅತ್ಯಧಿಕ ಚಿನ್ನದ ಪದಕಗಳನ್ನು ಗಳಿಸಿದ್ದಾರೆ. ಅವರ ತಂದೆ ಕೈಮಗ್ಗ ನಡೆಸುತ್ತಿದ್ದಾರೆ. ಅವರು ದೊಡ್ಡಬಳ್ಳಾಪುರದ ನಿವಾಸಿ.
‘ಸ್ನಾತಕೋತ್ತರ ಪದವಿಯ ಮೊದಲ ವರ್ಷ ವಿವಿಯ ಹಾಸ್ಟೆಲ್ ಭರ್ತಿಯಾಗಿತ್ತು. ಇದನ್ನೇ ಸವಾಲಾಗಿ ಸ್ವೀಕರಿಸಿದೆ. ಪ್ರತಿನಿತ್ಯ ಜ್ಞಾನಭಾರತಿ ವರೆಗೆ ಬಿಎಂಟಿಸಿ ಬಸ್ನಲ್ಲಿ ಪ್ರಯಾಣ. ಪ್ರಯಾಣದ 6 ಗಂಟೆ ಅವಧಿಯನ್ನೇ ಓದಿಗಾಗಿ ಮೀಸಲಿಟ್ಟೆ. ಇದರಿಂದಾಗಿ ಹೆಚ್ಚಿನ ಅಂಕಗಳು ಬಂತು’ ಎಂದು ಶ್ರುತಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.