ಶ್ರೀರಂಗಪಟ್ಟಣ: ಕಾವೇರಿ ನದಿಯಲ್ಲಿ ನೀರಿನಮಟ್ಟ ಇಳಿಕೆಯಾಗಿರುವುದರಿಂದ ಕೆಆರ್ಎಸ್ ಜಲಾಶಯದ ತಗ್ಗಿನಲ್ಲಿರುವ ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮದಲ್ಲಿ ‘ದೋಣಿ ವಿಹಾರ’ ಮಂಗಳವಾರ ಪುನರಾರಂಭವಾಗಿದೆ.
ನದಿಯಲ್ಲಿ ನೀರಿನ ಹರಿವು ಹೆಚ್ಚು ಇದ್ದ ಕಾರಣ ಜುಲೈ 16ರಿಂದ ದೋಣಿ ವಿಹಾರ ಸ್ಥಗಿತಗೊಂಡಿತ್ತು. ಈಗ ಪಕ್ಷಿಧಾಮದಲ್ಲಿರುವ ಎಲ್ಲ ದೋಣಿಗಳು ನದಿಗೆ ಇಳಿದಿವೆ. 2 ಮರದ ದೋಣಿಗಳು ಹಾಗೂ 10 ಫೈಬರ್ ದೋಣಿಗಳು ಪಕ್ಷಿಧಾಮದಲ್ಲಿ ವಿಹಾರ ಆರಂಭಿಸಿವೆ. ಅರಣ್ಯ ಇಲಾಖೆ (ವನ್ಯಜೀವಿ ವಿಭಾಗ) ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಸೂಚನೆ ಮೇರೆಗೆ 27 ದಿನಗಳ ಬಳಿಕ ಮತ್ತೆ ದೋಣಿ ವಿಹಾರವನ್ನು ಶುರು ಮಾಡಲಾಗಿದೆ.
ದೇಶ– ವಿದೇಶಗಳ 250ಕ್ಕೂ ಹೆಚ್ಚು ಪ್ರವಾಸಿಗರು ಮಂಗಳವಾರ ದೋಣಿ ವಿಹಾರದ ಮೂಲಕ ಪಕ್ಷಿ ವೀಕ್ಷಣೆ ಮಾಡಿದ್ದಾರೆ ಎಂದು ರಂಗನತಿಟ್ಟು ಪಕ್ಷಿಧಾಮದ ಉಪ ವಲಯ ಅರಣ್ಯಾಧಿಕಾರಿ ಲಕ್ಷ್ಮೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪಕ್ಷಿಧಾಮದಲ್ಲಿ ಸದ್ಯ ಐಬಿಸ್, ಇಗ್ರೆಟ್್ಸ, ಕಾರ್ಮೊರೆಂಟ್, ಹೆರಾನ್ ಮಾತ್ರವಲ್ಲದೆ, ಸ್ನೇಕ್ ಬರ್ಡ್ನಂತಹ ಅಪರೂಪದ ಪಕ್ಷಿಗಳು ಕಾಣಸಿಗುತ್ತವೆ ಎಂದು ಅವರು ಹೇಳಿದರು.
₨ 10 ಲಕ್ಷ ನಷ್ಟ: ಪಕ್ಷಿಧಾಮದಲ್ಲಿ 27 ದಿನಗಳ ಕಾಲ ದೋಣಿ ವಿಹಾರ ಸ್ಥಗಿತಗೊಂಡಿದ್ದರಿಂದ ಅರಣ್ಯ ಇಲಾಖೆಗೆ ₨ 10 ಲಕ್ಷ ನಷ್ಟ ಉಂಟಾಗಿದೆ. ಹಿಂದಿನ ವರ್ಷ ಕೂಡ ಜುಲೈ 13ರಿಂದ ಆ. 16ರವರೆಗೆ ದೋಣಿ ವಿಹಾರ ಸ್ಥಗಿತಗೊಂಡು ₨ 12 ಲಕ್ಷ ನಷ್ಟವಾಗಿತ್ತು ಎಂದು ಲಕ್ಷ್ಮೀಶ್ ತಿಳಿಸಿದರು.