ಹಿರಿಯಡಕ: ತ್ರಿವರ್ಣ ಚಿತ್ರಕಲಾ ಕೇಂದ್ರ ಹಾಗೂ ಸ್ಪರ್ಶ ಚಿತ್ರಕಲಾ ಪ್ರದರ್ಶನ ಮಣಿಪಾಲದ ಅನ್ನಪೂರ್ಣ ಕಾಂಪ್ಲೆಕ್ಸ್ ನಲ್ಲಿ ಭಾನುವಾರ ಉದ್ಘಾಟನೆಗೊಂಡಿತು. ಕಲಾ ವಿಮರ್ಶಕ ಪ್ರೊ.ಎ.ಈಶ್ವರಯ್ಯ ಚಿತ್ರ ರಚನೆಯ ಮೂಲಕ ಉದ್ಘಾಟಿಸಿರು. ಬಳಿಕ ಅವರು ಮಾತನಾಡಿ ‘ಉಡುಪಿಯಲ್ಲಿ ಹಿಂದಿನಿಂದಲೂ ಚಿತ್ರಕಲೆಗೆ ಸಾಕಷ್ಟು ಪ್ರೋತ್ಸಾಹ ದೊರೆಯುತ್ತಿದೆ.
ಅನೇಕ ಕಲಾವಿದರು ಚಿತ್ರ ಕಲೆಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಉಡುಪಿ ಮಣಿಪಾಲ ಪರಿಸರದಲ್ಲಿ ಚಿತ್ರ ಕಲಾವಿದರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಅವರ ಚಿತ್ರಗಳ ಪ್ರದರ್ಶನಕ್ಕೆ ಸುಮಾರು 6–7 ಗ್ಯಾಲರಿಗಳು ಪ್ರಾರಂಭಗೊಂಡಿದೆ. ಆದಿ ಮಾನವರು ಮೊಟ್ಟ ಮೊದಲು ಮಾಡಿದ ಕಲೆ ಚಿತ್ರಕಲೆಯಾಗಿದೆ. ಆ ಚಿತ್ರಗಳ ಮೂಲಕ ಲಿಪಿ ಹುಟ್ಟುಕೊಂಡಿತು.
ಆ ಲಿಪಿಗಳ ಮೂಲಕ ಭಾಷೆ ಜನ್ಮ ತಾಳಿದೆ. ಇಂದಿಗೂ ಚೀನಾ, ಜಪಾನ್ ಭಾಷೆಗಳು ಚಿತ್ರಗಳಂತೆ ಕಂಡು ಬರುತ್ತದೆ. ಮಕ್ಕಳಿಗೆ ಚಿತ್ರಕಲೆಯ ಬಗ್ಗೆ ಹೆಚ್ಚಿನ ಆಸಕ್ತಿಯಿದೆ. ಮಕ್ಕಳು ಚಿತ್ರ ಕಲೆಯಲ್ಲಿ ಮಾತ್ರ ಸುಲಭ ರೀತಿಯಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಳ್ಳುವುದು ಕಂಡುಬರುತ್ತದೆ’. ಎಂದರು.
ಉಡುಪಿಯ ಚಿತ್ರ ಕಲಾಮಂದಿರದ ಕಲಾ ನಿರ್ದೇಶಕ ಡಾ.ಯು.ಸಿ ನಿರಂಜನ್, ಕುಂದಾಪುರದ ಉದ್ಯಮಿ ಸುರೇಂದ್ರ ಶೆಟ್ಟಿ, ಮಾಜಿ ನಗರಸಭಾ ಸದಸ್ಯ ದೇವೆಂದ್ರ ಪ್ರಭು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ನಿರ್ದೇಶಕ ಕಲಾವಿದ ಹರೀಶ್ ಸಾಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ವಿದ್ಯಾರ್ಥಿನಿ ಸಂಜನಾ ಸ್ವಾಗತಿಸಿ ವಂದಿಸಿದರು. ರಾಘವೇಂದ್ರ ಅಮೀನ್ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ವಿದ್ಯಾರ್ಥಿಗಳಿಂದ ರಚಿಸಲ್ಪಟ್ಟ ಚಿತ್ರಗಳ ಪ್ರದರ್ಶನ ಜುಲೈ 9ರವರೆಗೆ ನಡೆಯಲಿದೆ.