ಮಂಡ್ಯ: ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ಮಹಾತ್ಮ ಗಾಂಧಿ ಅವರು ನಡೆಸಿದ ಅಹಿಂಸಾತ್ಮಕ ಹೋರಾಟದಲ್ಲಿ ಕವಿಗಳು ದೀವಿಟಿಗೆಳನ್ನು ಹಿಡಿದಿದ್ದರು ಎಂದು ಸಾಹಿತಿ ಡಾ.ಭೈರಮಂಗಲ ರಾಮೇಗೌಡ ಅವರು ಹೇಳಿದರು.
ಕರ್ನಾಟಕ ಸಂಘದ ವತಿಯಿಂದ ಗುರುವಾರ ಆಯೋಜಿಸಿದ್ದ ‘ಸ್ವಾತಂತ್ರೋತ್ಸವ–ಒಂದು ಮೆಲುಕು’ ಹಾಗೂ ‘ಕೆ.ಟಿ. ಶಿವಲಿಂಗಯ್ಯ–ಒಂದು ನೆನೆಪು’ ಕಾರ್ಯಕ್ರಮದ ಉದ್ಘಾಟಿಸಿ ಅವರು ಮಾತನಾಡಿದರು.
ಕವಿಗಳು ಸ್ವಾತಂತ್ರ್ಯವನ್ನೇ ಒಂದು ವಿಚಾರವನ್ನಾಗಿ ಮಾಡಿಕೊಂಡಿದ್ದರು. ಬರವಣಿಗೆಯ ರೂಪದಲ್ಲಿ ಸ್ವಾತಂತ್ರ್ಯದ ಬಗ್ಗೆ ಹೆಚ್ಚು ಹೊತ್ತು ಕೊಟ್ಟು ಜನರಲ್ಲಿ ದೇಶಪ್ರೇಮದ ಕಿಚ್ಚು ಹಚ್ಚಿದ್ದರು ಎಂದರು.
ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತೆ ಕರ್ನಾಟಕ ಸಂಘ ಹಲವು ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬಂದಿದೆ. ಜತೆಗೆ ಹಲವು ಮಹನೀಯರನ್ನು ನೆನೆಸಿಕೊಳ್ಳುವ ಪ್ರಯತ್ನ ಶ್ಲಾಘನೀಯ ಎಂದು ಹೇಳಿದರು.
ಬ್ರಿಟಿಷರ ದಬ್ಬಾಳಿಕೆಗೆ ಜನರು ನಲುಗಿ ಹೋಗಿದ್ದರು. ನಿತ್ಯ ಹೆಣ್ಣಿನ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳನ್ನು ನೋಡಿದರೆ ಮತ್ತೆ ಅದೇ ದಿನಗಳು ಬರುತ್ತಿವೆಯೇನೋ ಎಂದು ಆತಂಕ ವ್ಯಕ್ತಪಡಿಸಿದರು.
ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಮಾತನಾಡಿ, ಕೆ.ಟಿ. ಶಿವಲಿಂಗಯ್ಯ ಅವರು ಕರ್ನಾಟಕ ಸಂಘವನ್ನು ಕಟ್ಟಿ ಬೆಳೆಸಿದವರು. ಜತೆಗೆ ಸಂಘಕ್ಕೆ ಹೊಸ ತಿರುವನ್ನು ತಂದು ಕೊಟ್ಟವರು. ನೆರೆ–ಹೊರೆಯವರ ಕಷ್ಟಗಳಿಗೆ ಸ್ಪಂದಿಸುವ ಮನೋಭಾವ ಹೊಂದಿದ್ದರು ಎಂದು ಹೇಳಿದರು.
ಪ್ರೊ.ಮ. ರಾಮಕೃಷ್ಣ, ಸಾಹಿತಿ ಡಾ. ಲಿಂಗರಾಜಯ್ಯ ಬೆಳಕೆರೆ ಹಾಜರಿದ್ದರು. ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟ ಕುರಿತ ಹಿರಿಯ ಕವಿಗಳು ರಚಿಸಿದ ಕವನಗಳನ್ನು ವಾಚಿಸಲಾಯಿತು.