ಬೆಂಗಳೂರು: ‘ಆಧುನಿಕ ಬದುಕಿನ ಭರಾಟೆಯಲ್ಲಿ ಜನಪದ ಕಲೆಗಳು ನಶಿಸುತ್ತಿದ್ದು, ಅವುಗಳನ್ನು ಉಳಿಸಿ ಬೆಳೆಸಬೇಕಾದ ಅಗತ್ಯವಿದೆ’ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್ ಹೇಳಿದರು. ಬೆಂಗಳೂರು ವಕೀಲರ ಸಾಹಿತ್ಯ ಕೂಟವು ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಜಾನಪದ ಸಂಭ್ರಮ’ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಜನಪದ ಸಂಸ್ಕೃತಿಯು ಮನುಷ್ಯನ ಮಾನವೀಯ ಗುಣಗಳನ್ನು ಅರಳಿಸುವ ಶಕ್ತಿ ಹೊಂದಿದೆ. ರಾಜ್ಯದಲ್ಲಿ 147 ಜನಪದ ಕಲಾಪ್ರಕಾರಗಳು ಅಸ್ತಿತ್ವದಲ್ಲಿವೆ. ಮುಂದಿನ ದಿನಗಳಲ್ಲಿ ಕಲಾಪ್ರಕಾರಗಳ ಸಂಖ್ಯೆ ಇಳಿಕೆಯಾಗಲಿದೆ’ ಎಂದರು.
ನ್ಯಾಯಮೂರ್ತಿ ಹುಲವಾಡಿ ಜಿ.ರಮೇಶ್ ಮಾತನಾಡಿ, ‘ಪಾಶ್ಚಿಮಾತ್ಯ ಸಂಸ್ಕೃತಿ ಬಗ್ಗೆ ಹೆಚ್ಚು ಒಲವು ಹೊಂದಿರುವ ನಗರಗಳಲ್ಲಿ ಆಚರಣೆ ನೆಲಕಚ್ಚಿವೆ ಎಂದರು. ವಕೀಲರ ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ, ಬೆಂಗಳೂರು ವಕೀಲರ ಸಾಹಿತ್ಯ ಕೂಟದ ಅಧ್ಯಕ್ಷ ಸಿ.ಪ್ರಕಾಶ್ ಹಾಜರಿದ್ದರು.