ದೊಡ್ಡಬಳ್ಳಾಪುರ: ‘ಅಮೆರಿಕಾ ಮಾದರಿ ಅಭಿವೃದ್ಧಿ ಎನ್ನುವ ಭ್ರಮೆಯಲ್ಲಿ ಇಲ್ಲಿನ ನಗರಗಳು ರಾಕ್ಷಸ ನಗರಗಳಾಗಿ ಬೆಳೆಯುತ್ತಿವೆ. ಈ ಬಗೆಯ ಮನುಷ್ಯ ಪ್ರೀತಿ ಇಲ್ಲದ ಬೆಳವಣಿಗೆ ಅಪಾಯಕಾರಿ’ ಎಂದು ಹಿರಿಯ ಸಾಹಿತಿ ಡಾ.ಪಿ.ವಿ.ನಾರಾಯಣ್ ಅಭಿಪ್ರಾಯಪಟ್ಟರು.
ದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದಲ್ಲಿ ಬುಧವಾರ ನಡೆದ ಕಾಲೇಜಿನ ವಿವಿಧ ಚಟುವಟಿಕೆಗಳ ಉದ್ಘಾಟನಾ ಸಮಾರಂಭ -ಅವರು ಮಾತನಾಡಿದರು.
‘ಬದುಕನ್ನು ಪ್ರೀತಿಸುವ ಮತ್ತು ನೆಲದ ಸಂಸ್ಕೃತಿಯ ಅರಿವು ಹೊಂದಿರದ ಸಮಾಜ ಇಂದು ನಿರ್ಮಾಣವಾಗುತ್ತಿದೆ. ದೇಶದ ಆರ್ಥಿಕ ತಜ್ಞರು, ರಾಜಕಾರಣಿಗಳು ದೊಡ್ಡ ಭ್ರಮೆಯಲ್ಲಿದ್ದಾರೆ. ಯುವಶಕ್ತಿ ನಗರಗಳತ್ತ ಮುಖಮಾಡಿದೆ. ನೈಜ ದೇಶಾಭಿವೃದ್ಧಿ ಹಳ್ಳಿಗಳ ಮುನ್ನಡೆಯನ್ನು ಅವಲಂಬಿಸಿರುತ್ತದೆ. ವಿದ್ಯಾರ್ಥಿಗಳು ಹಳ್ಳಿಯ ಮಹತ್ವ ಅರಿಯಬೇಕು. ಅಲ್ಲಿ ಭವಿಷ್ಯತ್ತನ್ನು ಕಟ್ಟಿಕೊಳ್ಳುವ ಚಿಂತನೆ ಮಾಡಬೇಕು’ ಎಂದರು.
ಎಂಇಎಸ್ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ.ಜನಾರ್ಧನ್ ಮಾತನಾಡಿ, ‘ಓದಿನ ಜತೆ ವ್ಯಕ್ತಿತ್ವ ಬೆಳವಣಿಗೆಗೆ ಮಾನ್ಯತೆ ಕೊಡಬೇಕು. ಇಂದು ಮಾಧ್ಯಮಗಳ ಭರಾಟೆಯಲ್ಲಿ ಮನರಂಜನೆ ಪ್ರಧಾನವಾಗಿ ಮಾಹಿತಿ ಗೌಣವಾಗುತ್ತಿದೆ. ಆದರೆ, ಮನಸ್ಸನ್ನು ನಿಗ್ರಹಿಸುವ ಮೂಲಕ ಸಮಕಾಲೀನ ಬದಲಾವಣೆಗಳು ಮತ್ತು ಬೆಳವಣಿಗೆಗೆ ಪೂರಕವಾಗಿ ಕೌಶಲಗಳನ್ನು ಹೊಂದುವುದು ವಾಣಿಜ್ಯ ಮತ್ತು ನಿರ್ವಹಣಾ ವಿದ್ಯಾರ್ಥಿಗಳಿಗೆ ಮುಖ್ಯ’ ಎಂದರು.
ಬೆಂಗಳೂರಿನ ನಿವೃತ್ತ ಪ್ರಾಧ್ಯಾಪಕ ಪ್ರೊ.ಜಿ.ಬಸವರಾಜು ಮಾತನಾಡಿ, ‘ವಿವೇಕ ವಿದ್ಯಾವಂತರ ಅಸ್ತ್ರವಾಗಬೇಕು. ಅದನ್ನು ಬಳಸಿಕೊಳ್ಳುವ ಕೌಶಲವನ್ನು ಶಿಕ್ಷಣ ಒದಗಿಸಿಕೊಡಬೇಕು. ಯುವಜನತೆ ಬದುಕನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಚಿಂತನೆ, ಅನುಷ್ಠಾನ ಮತ್ತು ಅನುಭವಗಳು ವಿದ್ಯಾರ್ಥಿ ಬದುಕಿನ ನೈತಿಕ ಪ್ರಜ್ಞೆಯನ್ನು ಸದಾ ಜಾಗೃತಗೊಳಿಸುತ್ತವೆ’ ಎಂದರು.
ದೇವರಾಜ ಅರಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಜಿ.ಎಚ್.ನಾಗರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ನಿರ್ದೇಶಕ ಜೆ.ರಾಜೇಂದ್ರ, ಮಾಜಿ ನಿರ್ದೇಶಕ ಜೆ.ನಾಗೇಂದ್ರಸ್ವಾಮಿ, ಆರ್ಎಲ್ಜೆಐಟಿ ಪ್ರಾಂಶುಪಾಲ ಡಾ.ನಂದಕುಮಾರ್, ಮಾನವ ಸಂಪನ್ಮೂಲ ಅಧಿಕಾರಿ ಯತೀಶ್, ನ್ಯಾಕ್ ಸಂಯೋಜಕ ವೆಂಕಟರೆಡ್ಡಪ್ಪಚೆಟ್ಟಿ, ಪ್ರಾಂಶುಪಾಲ ಪ್ರೊ.ಎಚ್.ಎಸ್.ನಾರಪ್ಪ, ಉಪಪ್ರಾಂಶುಪಾಲ ಜೆ.ವಿ. ಚಂದ್ರಶೇಖರ್, ವಿಭಾಗ ಮುಖ್ಯಸ್ಥ ಕೆ. ದಕ್ಷಿಣಾಮೂರ್ತಿ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಕೆ.ಆರ್.ರವಿಕಿರಣ್, ಎನ್ಎಸ್ಎಸ್ ಅಧಿಕಾರಿ ಎಂ.ಚಿಕ್ಕಣ್ಣ, ಸ್ಥಾನಾಧಿಕಾರಿ ಪಿ.ಚೈತ್ರಾ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.