ಬೆಂಗಳೂರು: ‘ನಾವು ಸಂಶೋಧನೆ ನಡೆಸಲು ಮುಂದಾದ ದಿನಗಳಲ್ಲಿ ಸೌಲಭ್ಯ ಇರಲಿಲ್ಲ. ಆದರೆ, ಅತ್ಯುತ್ತಮ ಮಾರ್ಗದರ್ಶಕರಿದ್ದರು. ಈಗ ಸಂಶೋಧನಾ ವಿದ್ಯಾರ್ಥಿಗಳಿಗೆ ವೇತನ ಲಭಿಸುತ್ತಿದ್ದು, ಉತ್ತಮ ಸೌಲಭ್ಯಗಳಿವೆ. ವಿಪರ್ಯಾಸವೆಂದರೆ ಮಾರ್ಗದರ್ಶನ ಹಾಗೂ ಬೆಂಬಲ ನೀಡುವವರೇ ಇಲ್ಲ’ ಎಂದು ಹಿರಿಯ ವಿಜ್ಞಾನಿ ಪ್ರೊ.ಸಿ.ಎನ್.ಆರ್.ರಾವ್ ಅಭಿಪ್ರಾಯಪಟ್ಟರು.
ನಗರದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಪಿ.ಇ.ಎಸ್. ವಿಶ್ವವಿದ್ಯಾಲಯದ ‘ಸಂಶೋಧನಾ ಪ್ರತಿಷ್ಠಾನ’ಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಹಿಂದೆ ಸಂಶೋಧನೆಗೆ ಅಗತ್ಯವಿರುವ ವಸ್ತುಗಳನ್ನು ನಾವೇ ರೂಪಿಸಿಕೊಳ್ಳುತ್ತಿದ್ದೆವು. ಇದರಿಂದ ಹೊಸ ಆಲೋಚನೆ ಹುಟ್ಟುತ್ತಿತ್ತು. ದೊಡ್ಡ ಮಟ್ಟದಲ್ಲಿ ಸಂಶೋಧನೆ ನಡೆಸಲು ಪ್ರೇರಣೆಯಾಗುತ್ತಿತ್ತು. ಈಗ ಬಹುತೇಕ ವಸ್ತುಗಳು ಸಿದ್ಧವಾಗಿರುತ್ತವೆ. ಆದರೆ, ಬದ್ಧತೆಯ ಕೊರತೆಯಿದೆ’ ಎಂದರು.
‘ವಿಜ್ಞಾನ ಎಂಬುದು ವೈಯಕ್ತಿಕ ಆಸ್ತಿ ಅಲ್ಲ. ಒಬ್ಬರು ಸಂಶೋಧನೆ ನಡೆಸಿದರೆ ಅದೆಷ್ಟೋ ಮಂದಿಗೆ ಸಹಾಯವಾಗುತ್ತದೆ. ಹಾಗಾಗಿ ಸಂಶೋಧನೆಯಲ್ಲಿ ಗುಣಮಟ್ಟಕ್ಕೆ ಒತ್ತುಕೊಡಬೇಕು. ಸೂಕ್ತ ಬೆಂಬಲ ನೀಡಬೇಕು. ಈ ನಿಟ್ಟಿನಲ್ಲಿ ಪಿ.ಇ.ಎಸ್. ವಿಶ್ವವಿದ್ಯಾಲಯದ ಕಾರ್ಯ ಶ್ಲಾಘನೀಯ’ ಎಂದು ತಿಳಿಸಿದರು.
ಸಂಶೋಧನಾ ಪ್ರತಿಷ್ಠಾನ ಕುರಿತು... ಪ್ರತಿಷ್ಠಾನ ಕುರಿತು ಮಾಹಿತಿ ನೀಡಿದ ಪ್ರೊ.ಡಿ.ಜವಾಹರ್, ‘ಪ್ರತಿಷ್ಠಾನದ ಸಂಶೋಧನಾ ಚಟುವಟಿಕೆಗಳಿಗೆ ಪಿ.ಇ.ಎಸ್.ವಿಶ್ವವಿದ್ಯಾಲಯವು ರೂ 10 ಕೋಟಿ ನಿಧಿ ಮೀಸಲಿಟ್ಟಿದೆ. ಇದಕ್ಕೆ ವಿಶ್ವವಿದ್ಯಾಲಯದ ವಾರ್ಷಿಕ ಒಟ್ಟು ಆದಾಯದ ಶೇ 5ರಷ್ಟನ್ನು ಪ್ರತಿ ವರ್ಷ ಸೇರಿಸಲಾಗುವುದು. ಈ ಮೂಲಕ ನಿಧಿಯನ್ನು ರೂ 100 ಕೋಟಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ’ ಎಂದರು. |
ರಾಜ್ಯ ಆವಿಷ್ಕಾರ ಮಂಡಳಿ ಅಧ್ಯಕ್ಷ ಪ್ರೊ.ಎಚ್.ಪಿ.ಖಿಂಚ ಮಾತನಾಡಿ, ‘ಬದ್ಧತೆ ಹಾಗೂ ಶ್ರಮದಲ್ಲಿ ಸಿ.ಎನ್.ಆರ್.ರಾವ್ ಅವರನ್ನು ಮೀರಿ ನಿಲ್ಲಲು ನಮ್ಮಿಂದ ಈಗಲೂ ಸಾಧ್ಯವಿಲ್ಲ. ಸಂಶೋಧನಾ ಕ್ಷೇತ್ರದಲ್ಲಿನ ಅವರ ಅಗಾಧ ಸಾಧನೆಗಳೇ ಇಂದಿನ ವಿದ್ಯಾರ್ಥಿಗಳಿಗೆ ಸ್ಫೂರ್ತಿ’ ಎಂದರು.
ಪಿ.ಇ.ಎಸ್. ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ.ಎಂ.ಆರ್.ದೊರೆಸ್ವಾಮಿ, ‘ಸಂಶೋಧನಾ ಪ್ರತಿಷ್ಠಾನದ ಮೊದಲ ಮುಖ್ಯಸ್ಥರನ್ನು ‘ಪ್ರೊ.ಸಿ.ಎನ್.ಆರ್.ರಾವ್ ಚೇರ್ ಪ್ರೊಫೆಸರ್’ ಎಂದು ಕರೆಯಲಾಗುವುದು. ಸ್ನಾತಕೋತ್ತರ ಹಾಗೂ ಡಾಕ್ಟರೇಟ್ ಪದವೀಧರರಿಗೆ ಪ್ರೊ.ಸಿ.ಎನ್.ಆರ್.ರಾವ್ ಫೆಲೋಶಿಪ್ ನೀಡಲಾಗುವುದು. ಸಂಶೋಧನೆಗಾಗಿ ಪ್ರತಿ ವರ್ಷ ರೂ 1 ಕೋಟಿ ಕೊಡಲಾಗುವುದು’ ಎಂದು ಹೇಳಿದರು.
ಸಂಸ್ಥೆಯ ವತಿಯಿಂದ ವೈದ್ಯಕೀಯ ಕಾಲೇಜು, ಕಾನೂನು ಕಾಲೇಜು, ವಿನ್ಯಾಸ ಕೇಂದ್ರ ಸ್ಥಾಪಿಸಲು ಯೋಜನೆ ಹೊಂದಿರುವುದಾಗಿ ಹೇಳಿದ ಅವರು ಕೆಲ ವಿ.ವಿಗಳಲ್ಲಿ ನಡೆಯುತ್ತಿದೆ ಎನ್ನಲಾದ ಅವ್ಯವಹಾರಗಳ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಸಿ.ಎನ್.ಆರ್.ರಾವ್ ಅವರಿಗೆ ವಿಶ್ವವಿದ್ಯಾಲಯ ವತಿಯಿಂದ ‘ವಿಜ್ಞಾನ ವ್ಯಾಸ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಹ ಕುಲಾಧಿಪತಿ ಪ್ರೊ.ಡಿ.ಜವಾಹರ್, ಕುಲಪತಿ ಪ್ರೊ.ಕೆ.ಎನ್.ಬಿ.ಮೂರ್ತಿ, ಪಿ.ಇ.ಎಸ್ ಸಂಸ್ಥೆಗಳ ಸಿಒಒ ಪ್ರೊ.ಅಜಯ್ ಕುಮಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.