ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಆಂಟಿ, ದಯಮಾಡಿ ನನ್ನನ್ನು ರಕ್ಷಿಸಿ'

Last Updated 1 ಡಿಸೆಂಬರ್ 2012, 20:44 IST
ಅಕ್ಷರ ಗಾತ್ರ

ಹದಿಮೂರು ವರ್ಷದ ನಿತ್ಯಾ (ಹೆಸರು ಬದಲಾಯಿಸಲಾಗಿದೆ) ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಏಳನೇ ತರಗತಿ ವಿದ್ಯಾರ್ಥಿನಿ. ಓದುವುದರಲ್ಲಿ ಜಾಣೆಯಾಗಿದ್ದ ನಿತ್ಯಾ ಬಹುತೇಕ ವಿಷಯಗಳಲ್ಲಿ ತರಗತಿಗೆ ಮೊದಲಿಗಳಾಗಿದ್ದಳು. ಗಣಿತದಲ್ಲಂತೂ ಅವಳದು ಸದಾ ಮೇಲುಗೈ. ಗಣಿತದ ಶಿಕ್ಷಕಿ ಆಗಬೇಕು ಎನ್ನುವುದು ನಿತ್ಯಾಳ ಆಸೆಯೂ ಆಗಿತ್ತು.

ಬೆಂಗಳೂರಿನ ಉಪನಗರವೊಂದರಲ್ಲಿ ವಾಸಿಸುತ್ತಿದ್ದ ಪೋಷಕರಿಗೆ ನಿತ್ಯಾ ಸೇರಿದಂತೆ ಇಬ್ಬರು ಹೆಣ್ಣುಮಕ್ಕಳು. ನಿತ್ಯಾ ಪೋಷಕರು ತುಂಬಾ ಸಂಪ್ರದಾಯ ನಿಷ್ಠರು. ಗೃಹಿಣಿಯಾಗಿದ್ದ ತಾಯಿಯಂತೂ ಸಂಪ್ರದಾಯದಲ್ಲಿ ವಿಶೇಷವಾದ ಶ್ರದ್ಧೆ ಹೊಂದಿದ್ದರು. ನಿತ್ಯಾಳ ತಂದೆ ಸತ್ಯ (ಹೆಸರು ಬದಲಾಯಿಸಲಾಗಿದೆ) ತುಂಬಾ ಚೆನ್ನಾಗಿ ಹೆಂಡತಿ, ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು. ಅವರ ಹಿರಿಮಗಳು ಬಿ.ಕಾಂ. ಮೊದಲ ವರ್ಷದಲ್ಲಿ ಓದುತ್ತಿದ್ದಳು. ಅವರಿಗೆ ತಮ್ಮ ಎರಡು ಹೆಣ್ಣುಮಕ್ಕಳ ಶಿಕ್ಷಣ ಬಗ್ಗೆ ತುಂಬಾ ಮುತುವರ್ಜಿ ಇತ್ತು.

ಹದಿನೆಂಟು ವರ್ಷಗಳ ಹಿಂದೆ ನಿತ್ಯಾ ಹೆತ್ತವರಿಗೆ ಮದುವೆಯಾಗಿತ್ತು. ಸತ್ಯ ಅವರಿಗೆ ಸರಿಯಾದ ನೌಕರಿಯಾಗಲಿ, ವ್ಯಾಪಾರವಾಗಲೀ ಇರಲಿಲ್ಲ ಎಂಬುದನ್ನು ಬಿಟ್ಟರೆ ಆ ಕುಟುಂಬ ಸಂತೋಷವಾಗಿತ್ತು. ಸತ್ಯ ವರ್ಷಕ್ಕೆ 2-3 ನೌಕರಿ ಬದಲಿಸುತ್ತಿದ್ದರು. ಅವರು ಕೂಡ ಬಿ.ಕಾಂ. ಪದವೀಧರ. ಹತ್ತು ವರ್ಷಗಳಿಂದ ಸೋದರ ಮಾವನ ನೆರವು ಕುಟುಂಬಕ್ಕೆ ಸಿಗುತ್ತಿತ್ತು. ಪ್ರತೀ ತಿಂಗಳು ಹತ್ತು ಸಾವಿರ ರೂಪಾಯಿಗಳನ್ನು ಅವರು ನೀಡುತ್ತಿದ್ದರು.

ವ್ಯಾಪಾರ ಆರಂಭಿಸಲು ಸತ್ಯರಿಗೆ ಕೊಂಚ ಹಣವನ್ನೂ ನೀಡಿದ್ದರು. ಆದರೆ ಸತ್ಯ ಅವರ ಸೋಮಾರಿತನ ಮತ್ತು ಕಠಿಣ ಪರಿಶ್ರಮದ ಕೊರತೆಯಿಂದಾಗಿ ಯಾವುದೂ ಯಶಸ್ವಿಯಾಗುತ್ತಿರಲಿಲ್ಲ. ಆದರೆ ಆತ ತುಂಬಾ ಮಾನವೀಯ ಗುಣವುಳ್ಳ ವ್ಯಕ್ತಿ. ಕೆಟ್ಟ ಹವ್ಯಾಸಗಳಿರಲಿಲ್ಲ. ಹೆಂಡತಿ, ಮಕ್ಕಳೊಂದಿಗೆ ಆತ್ಮೀಯ ಒಡನಾಟ ಅವರಿಗಿತ್ತು.

ನಿಶ್ಚಿತ ಆದಾಯ ಇಲ್ಲದ ಆ ಸಂಸಾರ ಸಾಲದ ಹೊರೆಯಿಂದ ನಲುಗಿತ್ತು. ಸಾಲಗಾರರಿಂದ ತಪ್ಪಿಸಿಕೊಳ್ಳಲು ಉಪನಗರವನ್ನು ತೊರೆಯಲು ನಿತ್ಯಾ ಕುಟುಂಬ ನಿರ್ಧರಿಸಿತು. ಬೆಂಬಲವಾಗಿ ನಿಂತಿದ್ದ ಸೋದರ ಮಾವ ಬೇಸತ್ತು, ಒಂದು ತಿಂಗಳ ಹಿಂದೆ ಹಣ ನೀಡುವುದನ್ನು  ನಿಲ್ಲಿಸಿಬಿಟ್ಟಿದ್ದರು. ಮೂರು ವರ್ಷಗಳಿಂದ ಸೋದರ ಮಾವನ ಸಂಬಂಧವೊಂದನ್ನು ಹೊರತುಪಡಿಸಿ ಸಂಬಂಧಿಕರು ಮತ್ತು ಸ್ನೇಹಿತರ ಸಂಪರ್ಕ ಕಳೆದುಕೊಂಡಿದ್ದ ಈ ಕುಟುಂಬ ಪರಿಚಿತರಿಂದ ದೂರವೇ ಉಳಿದಿತ್ತು.

ವೈದ್ಯರಾಗಿ, ಅದರಲ್ಲೂ ವಿಶೇಷವಾಗಿ ಮಕ್ಕಳ ತಜ್ಞರಾದ ನಾವು ಸಾವಿನೆಡೆಗೆ ನೂಕುವ ರೋಗಗಳಿಂದ ಮಕ್ಕಳನ್ನು ಪಾರು ಮಾಡಲು ದಿನವಿಡೀ ಪಾಳಿಗಳಲ್ಲಿ ಹೋರಾಟ ನಡೆಸುತ್ತಿರುತ್ತೇವೆ. ಬಾಲ್ಯದ ಕಾಯಿಲೆಗಳು ಯಾವಾಗಲೂ ಮಧ್ಯವರ್ತಿ (ಬ್ಯಾಕ್ಟೀರಿಯಾ, ವೈರಸ್ ಇತ್ಯಾದಿ) ಮತ್ತು ಪರಿಸರವನ್ನು ಅವಲಂಬಿಸಿರುತ್ತದೆ. ಮಗುವಿನ ಪೋಷಕಾಂಶದ ಮಟ್ಟ ಕೂಡ ಪರಿಣಾಮ ಬೀರುತ್ತದೆ.

ಬಹುತೇಕ ಅವಿದ್ಯಾವಂತ ಪೋಷಕರ ಬಡ ಮಕ್ಕಳಿಗೆ ಮತ್ತು ಏಕರೂಪದ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳು ಮತ್ತು ಪೋಷಕರಿಗೆ ನಮ್ಮ ವಾಣಿವಿಲಾಸ ಆಸ್ಪತ್ರೆ ಪೌಷ್ಟಿಕಾಂಶಯುಕ್ತ ಊಟ ಒದಗಿಸುತ್ತದೆ. ಉತ್ತಮ ಪೌಷ್ಟಿಕಾಂಶ ಹೊಂದಿದ ಮಕ್ಕಳು ಕಾಯಿಲೆಗಳನ್ನು ಸಮರ್ಥವಾಗಿ ಎದುರಿಸಬಲ್ಲರು.

ಉತ್ತಮ ಪೌಷ್ಟಿಕಾಂಶ ಇರುವ, ಅದರ ಕುರಿತ ಜ್ಞಾನವುಳ್ಳ ಶಿಕ್ಷಿತ ಮಕ್ಕಳು ಮತ್ತು ಶಿಕ್ಷಿತ ಪೋಷಕರು ನಮಗೆ ಸಿಗುವುದು ವಿರಳ. ನಿತ್ಯಾ ಅಂಥ ಒಂದು ಮಗುವಾಗಿ `ಆಂಟಿ, ದಯವಿಟ್ಟು ನನ್ನನ್ನು ರಕ್ಷಿಸಿ' ಎಂಬ ಮನವಿ ಇಟ್ಟಿದ್ದಳು.

ತಮ್ಮದಲ್ಲದ ತಪ್ಪಿಗೆ ನರಳುವ ಆರೋಗ್ಯವಂತ ಮಕ್ಕಳನ್ನು ಕಂಡಾಗ ನನಗೆ ತುಂಬಾ ನೋವಾಗುತ್ತದೆ. ಅಂದು 2012ರ ಅಕ್ಟೋಬರ್ 21ರ ಬೆಳಿಗ್ಗೆ 2.30ರ ಸಮಯ. ಆ ತಂದೆ ಟೊಮ್ಯಾಟೋ ಜ್ಯೂಸ್‌ನಲ್ಲಿ ವಿಷವನ್ನು ಬೆರೆಸಿರುವುದಾಗಿ ಹೇಳಿ, `ಎಲ್ಲರೂ ಕುಡಿಯಬೇಕು' ಎಂದರು. ಕರ್ತವ್ಯಬದ್ಧರಾಗಿ ಮತ್ತು ವಿನಯವಂತರಾಗಿ ಯಾವ ಪ್ರಶ್ನೆಯನ್ನೂ ಕೇಳದೆ ಎಲ್ಲರೂ ಷರಬತ್ತನ್ನು ಕುಡಿದರು. ಯಾಕೆಂದರೆ, ಹೆಂಡತಿ ಗಂಡನ ಮಾತಿಗೆ ಎದುರಾಡುತ್ತಿರಲಿಲ್ಲ.

ಮಕ್ಕಳು ತಂದೆಯನ್ನು ಅಪಾರವಾಗಿ ಪ್ರೀತಿಸುತ್ತಿದ್ದರು ಮತ್ತು ತಮ್ಮ ಬದುಕಿನಲ್ಲಿ ಎಂದಿಗೂ ಅವರ ಮಾತನ್ನು ನಿರಾಕರಿಸುವ ಬಗ್ಗೆ ಯೋಚನೆಯನ್ನೂ ಮಾಡಿದವರಲ್ಲ. ನಿತ್ಯಾಗೆ ಓದಬೇಕೆಂಬ ಆಸೆ ಇತ್ತು. ಅವಳ ಅಕ್ಕನಿಗೂ ಓದುವಾಸೆ ಇತ್ತು. ಎಳೆಯ ವಯಸ್ಸಿನಲ್ಲಿಯೇ ಆ ಸೋದರಿಯರು ಕುಟುಂಬದ ಹಣಕಾಸಿನ ಸಂಕಷ್ಟದ ಬಗ್ಗೆ ತಿಳಿದುಕೊಂಡಿದ್ದರು ಮತ್ತು ಚೆನ್ನಾಗಿ ಓದಿ ಶೀಘ್ರ ಉದ್ಯೋಗಕ್ಕೆ ಸೇರುವ ಬಗ್ಗೆ ಯೋಚಿಸಿದ್ದರು. ಆದರೆ ತಂದೆಗೆ ಅಲ್ಲಿಯವರೆಗೂ ಕಾಯುವ ಮನಸ್ಸಿರಲಿಲ್ಲ.

ಷರಬತ್ತು ಕುಡಿದ ತಕ್ಷಣ ನಿತ್ಯಾ ಪ್ರಜ್ಞೆ ತಪ್ಪಿಬಿದ್ದಳು. ಆಕೆಗೆ ಎಚ್ಚರವಾದಾಗ ಪೋಷಕರು ನೆಲದ ಮೇಲೆ ಬಾಯಲ್ಲಿ ಜೊಲ್ಲು ಸುರಿಸುತ್ತಾ ಬಿದ್ದಿದ್ದರು. ಅವರ ದೇಹ ನಿಶ್ಚಲವಾಗಿತ್ತು. ಪಕ್ಕದಲ್ಲಿಯೇ ಇದ್ದ ನಿತ್ಯಾಳ ಅಕ್ಕನ ದೇಹ ಕೂಡ ಅವಳ ಮಾತಿಗೆ ಪ್ರತಿಕ್ರಿಯಿಸಲಿಲ್ಲ ಮತ್ತು ಉಸಿರಾಡಲು ಕಷ್ಟಪಡುತ್ತಿರುವಂತೆ ತೋರಿತು.

ನಿತ್ಯಾಗೆ ತೀವ್ರ ವಾಂತಿಯಾಯಿತು ಮತ್ತು ಅವಳ ದೇಹ ಸೆಟೆದುಕೊಂಡಂತಾಯಿತು. ಆದರೂ ಬಾಗಿಲ ತನಕ ದೇಹವನ್ನು ಎಳೆದುಕೊಂಡು ಹೋದಳು. ಬಾಗಿಲು ತೆರೆದು ನೆರೆಹೊರೆಯವರನ್ನು ಕೂಗಿದಳು. ಅನಂತಪುರದಲ್ಲಿ ಇರುವ ಸಂಬಂಧಿಕರಿಗೆ ಕರೆ ಮಾಡಿ `ದಯವಿಟ್ಟು ನಮ್ಮನ್ನು ಕಾಪಾಡಿ' ಎಂದು ಮೊರೆ ಇಟ್ಟಳು.

ಶಾಮ್‌ನ್ಾ 108 ದೂರವಾಣಿ ಸಂಖ್ಯೆಗೆ ಸಂಬಂಧಿಸಿದ ಶುಶ್ರೂಷಕ. ಅವರು ವಿಷಪ್ರಾಷನ ಪ್ರಕರಣಗಳನ್ನು ನಿರ್ವಹಿಸಲು ಉತ್ತಮ ತರಬೇತಿ ಪಡೆದಿದ್ದವರು. ವಿಷಕ್ಕೆ ಪ್ರತಿಯಾಗಿ ಯಾವ ಔಷಧ ಕೊಡಬೇಕು ಎಂಬುದನ್ನು ತಿಳಿದವರು. ಜೊತೆಗೆ ಮೊದಲು ಟ್ರೇಕಿಯಾಗೆ (ಶ್ವಾಸಕೋಶಕ್ಕೆ ಸಂಪರ್ಕ ಕಲ್ಪಿಸುವ ಕೊಳವೆ) ಕೃತಕ ಉಸಿರಾಟಕ್ಕಾಗಿ ಯಾವ ಕೊಳವೆ ಮೂಲಕ ಸಂಪರ್ಕ ಕಲ್ಪಿಸಬೇಕು ಎಂಬುದು ಅವರಿಗೆ ತಿಳಿದಿತ್ತು- ಅದೇ ಎಂಡೊಟ್ರೇಕಿಯಲ್ ಇಂಟುಬೇಷನ್.

ಕರೆ ಸ್ವೀಕರಿಸಿದ ಶಾಮ್‌ನ್ಾ ಮತ್ತು ಆಂಬುಲೆನ್ಸ್ ಚಾಲಕ ಶೇಖ್‌ಬಡೇನ್ ಆ ಹತಾಶ ಕುಟುಂಬ ನೆಲೆಸಿದ್ದ ಮನೆ ಕಡೆ ತೆರಳಿದರು. ಅವರಿಬ್ಬರೂ ತಂದೆತಾಯಿಯರ ಹೃದಯ ಬಡಿತ ಮತ್ತು ಶ್ವಾಸಕೋಶದ ಉಸಿರಾಟ ಬರುವಂತೆ ಮಾಡಲು ಕಾಡಿಯೋಪಲ್ಮನರಿ ರೆಸುಸ್ಕಿಟೇಶನ್ (ಸಿಪಿಆರ್) ವಿಧಾನವನ್ನು ಪ್ರಯತ್ನಿಸಿದರು. ಯಾವುದೇ ಸುಧಾರಣೆ ಕಾಣದೇ ಹೋದಾಗ ತಕ್ಷಣ ಹುಡುಗಿಯರತ್ತ ತಿರುಗಿದರು. ವಿಷಪ್ರಾಷನದ ಪ್ರಕರಣಗಳಲ್ಲಿ ಪ್ರತೀ ಕ್ಷಣವೂ ಅಮೂಲ್ಯ. ಪ್ರತಿಯೊಂದು ಸೆಕೆಂಡ್ ಕಳೆಯುವಾಗ ವಿಷ ದೇಹದ ಆಳಕ್ಕೆ ಸೇರುತ್ತಿರುತ್ತದೆ ಮತ್ತು ಕೊಲ್ಲುತ್ತದೆ.

ಶಾಮ್‌ನ್ಾ ಮತ್ತು ಶೇಖ್‌ಬುಡೇನ್ ಈ ದೃಢಕಾಯ ಹುಡುಗಿಯರನ್ನು ಆಂಬುಲೆನ್ಸ್‌ಗೆ ಸಾಗಿಸಲು ಬಹಳ ಶ್ರಮ ಪಟ್ಟರು. ಜೊತೆಯಲ್ಲಿಯೇ ವಿಷದ ಬಾಟಲನ್ನು ಹುಡುಕಾಡಿದರು. ಯಾಕೆಂದರೆ ಅದು ತತ್‌ಕ್ಷಣದಲ್ಲಿ ಸೂಕ್ತ ಔಷಧ ನೀಡಲು ವೈದ್ಯರಿಗೆ ನೆರವಾಗುತ್ತದೆ.

`ದಯವಿಟ್ಟು ನಮ್ಮನ್ನು ರಕ್ಷಿಸಿ' ಎಂದು ಮನವಿ ಮಾಡುತ್ತಿದ್ದ ಮತ್ತು, `ಅಂಕಲ್ ನೀವು ಯಾಕೆ ನಮ್ಮ ಅಪ್ಪ ಅಮ್ಮನನ್ನು ಅಲ್ಲೇ ಬಿಟ್ಟು ಬಂದಿರಿ' ಎಂದು ನಿತ್ಯಾ ಕೇಳುತ್ತಿದ್ದರೂ, ಆ ಇಬ್ಬರು ಹುಡುಗಿಯರನ್ನು ಶಾಮ್‌ನ್ಾ ಪ್ರಯಾಣದುದ್ದಕ್ಕೂ ನಿಭಾಯಿಸಿದರು.

ನಿತ್ಯಾ ಮಾಡುತ್ತಿದ್ದ ಮನವಿಗಳು ಶಾಮ್‌ನ್ಾ ಹೃದಯವನ್ನು ಕಲಕುತ್ತಿತ್ತು. ಅದೇ ಸಮಯದಲ್ಲಿ ಅಕ್ಕ ಸಾವಿನ ಜೊತೆ ಹೋರಾಡುತ್ತಿದ್ದಳು. ಅದನ್ನು ಗಮನಿಸಿದ ಶೇಖ್‌ಬುಡೇನ್ ಅತ್ಯಂತ ವೇಗವಾಗಿ ಗಾಡಿಯನ್ನು ಚಲಿಸುತ್ತಿದ್ದರು. ಆ ಮನೆಯಿಂದ ವಾಣಿವಿಲಾಸ ಆಸ್ಪತ್ರೆಯ ಪಿಐಸಿಯುವರೆಗಿನ ಪ್ರಯಾಣದುದ್ದಕ್ಕೂ ಈ ಮಹನೀಯರು ಮಾಡಿ ಮಕ್ಕಳನ್ನು ರಕ್ಷಿಸಲು ತಮ್ಮಿಂದ ಸಾಧ್ಯವಿದ್ದ ಎಲ್ಲ ಪ್ರಯತ್ನ ಮಾಡುತ್ತಿದ್ದರು.

ಆಸ್ಪತ್ರೆಗೆ ತಲುಪುವುದು ತಡವಾಗುತ್ತದೆ ಎನಿಸಿದಾಗ ಪ್ರಾಥಮಿಕ ಆರೋಗ್ಯ ಕೇಂದ್ರವೊಂದರ ಬಳಿ ವಾಹನ ನಿಲ್ಲಿಸಿದ ಶಾಮ್‌ನ್ಾ, ತಮಗೆ ಪರಿಚಯವಿದ್ದ ವಿಷಹಾರಿ ಔಷಧವನ್ನು ತಕ್ಷಣವೇ ನೀಡಿದರು. ಅದು ಪ್ರಾಣ ರಕ್ಷಿಸುವಲ್ಲಿನ ಅವರ ಬದ್ಧತೆಯ ಪ್ರತೀಕ.

108 ಸಿಬ್ಬಂದಿಯ ಅರ್ಪಣಾ ಮನೋಭಾವ ಕಂಡು ನಾನು ಸಂತುಷ್ಟಳಾಗ್ದ್ದಿದೇನೆ. ತುಂಬಾ ಹೀನಾಯಸ್ಥಿತಿ ತಲುಪಿದ್ದ ಆ ಹೆಣ್ಣುಮಕ್ಕಳ ಸ್ಥಿತಿ ಕಂಡು ಮೂರ‌್ನಾಲ್ಕು ಖಾಸಗಿ ಆಸ್ಪತ್ರೆಗಳಲ್ಲೂ ಅವರು ಸಹಾಯ ಕೇಳಲು ವಾಹನ ನಿಲ್ಲಿಸಿದ್ದರು. ಈ ಆಸ್ಪತ್ರೆಗಳು ಕೇಳಿದ ಪ್ರಶ್ನೆಗಳು- `ಇದು ವಿಷಪ್ರಾಷನದ ಪ್ರಕರಣ. ಪೊಲೀಸು ಕೇಸಾಗುತ್ತದೆ. ಇವರನ್ನು ಸೇರಿಸಿಕೊಂಡರೆ ಆಮೇಲೆ ಯಾರು ಇವರನ್ನು ನೋಡಿಕೊಳ್ಳುತ್ತಾರೆ? ಕುಟುಂಬದವರು ಇಲ್ಲದೇ ರೋಗಿಗಳನ್ನು ಸೇರಿಸಿಕೊಳ್ಳಲು ನಮ್ಮ ಆಸ್ಪತ್ರೆ ನಿಯಮದಲ್ಲಿ ಅವಕಾಶ ಇಲ್ಲ...'. ಆ ಇಬ್ಬರು ಸುಂದರ ಹೆಣ್ಣುಮಕ್ಕಳ ಮುಗ್ಧ ಜೀವ ಉಳಿಸಲು ಕಾನೂನಿನಲ್ಲೂ ತೊಡಕುಗಳಿದ್ದವು!

ಅಂತಿಮವಾಗಿ ಆ ಇಬ್ಬರು ಸೋದರಿಯರನ್ನು ಸಂಜೆ 4ರ ಸುಮಾರಿಗೆ ವಿಕ್ಟೋರಿಯಾ ಆಸ್ಪತ್ರೆಗೆ ತರಲಾಯಿತು. ವಿಷ ಸೇವನೆ ನಂತರದ ಚಿಕಿತ್ಸೆಗೆ ಇರುವ ಸಮಯ ಮೀರಿ ಹೋಗಿತ್ತು. ನಿತ್ಯಾಳ ಅಕ್ಕನ ದೇಹ ನಿಶ್ಚಲವಾಗಿತ್ತು.

ಶಾಮನ್ಾ ಅಕ್ಕನ ಮೃತದೇಹವನ್ನು ಅಲ್ಲಿಯೇ ಬಿಟ್ಟು ನಿತ್ಯಾಳನ್ನು ವಾಣಿವಿಲಾಸ ಆಸ್ಪತ್ರೆಯ ಪಿಐಸಿಯುಗೆ ತಂದರು. ಅವರಿಗೆ ಕನಿಷ್ಠ ಪಕ್ಷ ಈ ಮಗುವನ್ನಾದರೂ ಬದುಕಿಸಬೇಕು ಎಂಬ ಬಯಕೆಯಿತ್ತು. ಶಾಮ್‌ನ್ಾ ಸಮಯ ಪ್ರಜ್ಞೆ, ಕಾಳಜಿ ಮತ್ತು ಮಾನವೀಯತೆ ತುಂಬಿಕೊಂಡಿದ್ದ ವ್ಯಕ್ತಿ. ಚಿಕಿತ್ಸೆ ಆರಂಭವಾದ ನಂತರವಷ್ಟೇ ಅವರು ಸತ್ತಿದ್ದವರ ಕಡೆ ಹೋದರು. ಚಿಕಿತ್ಸೆ ನೀಡುವುದಕ್ಕೆ ಅವರದು ಮೊದಲ ಆದ್ಯತೆ. ಪ್ರಾಣ ರಕ್ಷಿಸಿದ ನಂತರ ಉಳಿದ ಕಾರ್ಯಗಳತ್ತ ಅವರ ಚಿತ್ತ. ಕರ್ತವ್ಯದಲ್ಲಿ ಇದ್ದ ಡಾ. ಅನಿತಾ ಅವರಿಗೆ 108ಕ್ಕೆ ಕರೆ ಬಂದಾಗಿನಿಂದ ಹಿಡಿದು ಮಗುವನ್ನು ಆಸ್ಪತ್ರೆಗೆ ಸಾಗಿಸಿದವರೆಗಿನ ಮಾಹಿತಿಯನ್ನು ಸಂಪೂರ್ಣವಾಗಿ ಅವರು ನೀಡಿದರು.

ಅಷ್ಟೇ ಅಲ್ಲದೇ ವಿಷದ ಬಾಟಲಿಯನ್ನು ಜೊತೆಗೆ ತಂದಿದ್ದರು. ಅದರಿಂದ ಶೀಘ್ರ ಕಾರ್ಯಪ್ರವೃತ್ತರಾದ ಡಾ. ಅನಿತಾ ಅವರು ಹುಡುಗಿಯ ಬಟ್ಟೆಗಳನ್ನು ಕಳಚಿಸಿ (ನಿತ್ಯಾಗೆ ಆಸ್ಪತ್ರೆ ಗೌನನ್ನು ನೀಡಿದೆವು) ಆಕೆಯನ್ನು ಪೂರ್ಣವಾಗಿ ಸ್ವಚ್ಛಗೊಳಿಸಿದರು. ವಿಷಪ್ರಾಷನ ಪ್ರಕರಣದಲ್ಲಿ ಇದು ಮೊದಲ ಹಂತ. ನಂತರ ವಿಷಕ್ಕೆ ಪ್ರತಿ ಔಷಧವನ್ನು ನೀಡಲು ಆರಂಭಿಸಲಾಯಿತು. ಔಷಧ ತನ್ನ ಕೆಲಸ ಆರಂಭಿಸಿದಾಕ್ಷಣ ವಿಷ ಸೇವಿಸಿದವರಲ್ಲಿ ಹಿಂಸಾತ್ಮಕ ನಡವಳಿಕೆ ಕಾಣಿಸಿಕೊಳ್ಳುವುದರಿಂದ ಅವರನ್ನು ಕಟ್ಟಿಹಾಕಲಾಗುತ್ತದೆ.

ಶಾಮ್‌ನ್ಾ ಮತ್ತು ಶೇಖ್‌ಬುಡೇನ್ ನಿಜವಾದ ಹೀರೋಗಳು. ಅವರಿಬ್ಬರೂ ಅದ್ಭುತ ಜೊತೆಗಾರರು. ಅವರು ತಮ್ಮ ಹಣವನ್ನು ತುರ್ತು ಚಿಕಿತ್ಸೆ, ದೂರವಾಣಿ ಕರೆಗಳಿಗೆ ಮತ್ತು ಎಂಎಲ್‌ಸಿಗಾಗಿ (ಮೆಡಿಕೋ ಲೀಗಲ್ ಪ್ರಕರಣ) ಖರ್ಚು ಮಾಡಿದರು. ನಿತ್ಯಾಳನ್ನು ನೋಡಿಕೊಳ್ಳಲು ಸಂಬಂಧಿಯೊಬ್ಬರು ಬರುವವರೆಗೂ ಅವರಿಬ್ಬರೂ ಅಲ್ಲಿಯೇ ಇದ್ದರು. ನಿತ್ಯಾಳ ಮನವಿ ನನ್ನ ಕಿವಿಗಳಲ್ಲಿ ಪದೇ ಪದೇ ಅನುರಣಿಸುತ್ತಿರುತ್ತದೆ. ಅವಳ ಪೋಷಕರು ಮತ್ತು ಅಕ್ಕನಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದ್ದ ನಮ್ಮನ್ನು, ಆಕೆ ಪದೇ ಪದೇ ಅವರ ಬಗ್ಗೆ ಕೇಳುತ್ತಲೇ ಇದ್ದಳು.

ತನ್ನ ಪೂರ್ಣ ಕತೆಯನ್ನು ನಿತ್ಯಾ ಹೇಳಿದಳು ಎಂದರೆ ನೀವು ನಂಬುತ್ತೀರಾ? ಆಕೆ ಶಾಮ್‌ನ್ಾ ಮತ್ತು ಶೇಖ್‌ಬುಡೇನ್‌ಗೆ ಋಣಿಯಾಗಿರುವುದಾಗಿ ಹೇಳಿದಳು. ಜೊತೆಗೆ, ತಾನು ಆಸ್ಪತ್ರೆಗೆ ಬಂದಾಗ ಕರ್ತವ್ಯದಲ್ಲಿ ಇದ್ದ, ಸೂಕ್ಷ್ಮಗ್ರಾಹಿಯಾದ, ಬದ್ಧತೆಯುಳ್ಳ ಸ್ನಾತಕೋತ್ತರ ಪದವೀಧರೆ ಡಾ. ಅನಿತಾ ಅವರಿಗೂ ಕೃತಜ್ಞತೆ ಸಲ್ಲಿಸಿದಳು. ಡಾ.ಅನಿತಾ ಇಡೀ ರಾತ್ರಿ ನಿತ್ಯಾಳ ಮಾತನ್ನು ಆಲಿಸುತ್ತಾ, ತಾವೂ ಮಾತನಾಡುತ್ತಾ ತಮ್ಮ ಇತರೆ ರೋಗಿಗಳನ್ನು ಗಮನಿಸುತ್ತಾ ನಿತ್ಯಾಳನ್ನು ನೋಡಿಕೊಂಡಿದ್ದರು.

2008ರ ನ.1ರಂದು 108 ಸಹಾಯವಾಣಿ ಕರ್ನಾಟಕದಲ್ಲಿ ಆರಂಭವಾಯಿತು. ಇದುವರೆಗೂ ಅದು ಸುಮಾರು 5.4 ಲಕ್ಷ ಜೀವಗಳನ್ನು ಉಳಿಸಿದೆ. ದಯಮಾಡಿ 108ರ ವಾಹನದ ಶಬ್ದ ಕೇಳಿದಾಕ್ಷಣ ದಾರಿ ಕೊಡಿ. ಆ ಆಂಬುಲೆನ್ಸ್‌ನಲ್ಲಿ ನಿತ್ಯಾ ಮತ್ತು ಅವಳ ಅಕ್ಕನಂಥವರು ಇರಬಹುದು.
ನಿತ್ಯಾಳ ಸುಂದರ ಬದುಕನ್ನು ರಕ್ಷಿಸುವಲ್ಲಿ ಶಾಮ್‌ನ್ಾ ಮತ್ತು ಶೇಖ್ ಬುಡೇನ್ ಮಾಡಿದ ಅಸಾಧಾರಣ ಮತ್ತು ಅದ್ಭುತ ಕೆಲಸವನ್ನು ಮೆಚ್ಚುವ ಆಂದೋಲನ ಮಾಡೋಣ.

ಒಂದು ಅನನ್ಯ ಸರ್ಕಾರಿ-ಖಾಸಗಿ ಸಹಭಾಗಿತ್ವ ಹೊಂದಿರುವ 108 ಸಂಖ್ಯೆಗೆ ಪ್ರೋತ್ಸಾಹಿಸಲು 97319 47368 ಸಂಖ್ಯೆಗೆ `108ಕ್ಕೆ ಧನ್ಯವಾದಗಳು' ಎಂಬ ಸಂದೇಶ ಕಳುಹಿಸಿ. ಅವರ ವಿಳಾಸ: 108 ಆಂಬುಲೆನ್ಸ್, ಜಿಎಂಎಸ್‌ಎ ಕಾಂಪೌಂಡ್, ಸರ್ಕಾರಿ ಯುನಾನಿ ಮೆಡಿಕಲ್ ಕಾಲೇಜು ಆವರಣದ ಎದುರು, ಎಸ್‌ಡಿಡಿಸಿ ಹೌಸಿಂಗ್ ಬೋರ್ಡ್ ಕಾಲೋನಿ, ಬಸವೇಶ್ವರನಗರ, ಬೆಂಗಳೂರು-560 079.

ನಿತ್ಯಾ ನಾವು ನಿನ್ನನ್ನು ರಕ್ಷಿಸಿದೆವು ಅಥವಾ ನಿನ್ನನ್ನು ನೀನೇ ಕಾಪಾಡಿಕೊಂಡೆಯಾ?
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT