ಹಬ್ಬಗಳ ಸಾಲಿನಂತೆ ವಿಜ್ಞಾನ ಲೋಕದಲ್ಲೂ ಸಂಭ್ರಮದ ಸುದ್ದಿಗಳು ಸಾಲಾಗಿ ಬರುತ್ತಿವೆ. ಬಾನಲ್ಲಿನ ಚಂದಮಾಮ ಹೊಂಬಣ್ಣದ ಹರಿವಾಣದಂತೆ ದಾಖಲೆ ಗಾತ್ರದಲ್ಲಿ ಬೆಳಗಿದ್ದಾನೆ. ಸೂರ್ಯನ ಪ್ರದಕ್ಷಿಣೆ ಹಾಕುತ್ತಿರುವ ಭೂಗ್ರಹ ಇದೀಗ ಪರ್ಸೀಡ್ ಧೂಮಕಣಗಳ ಮೂಲಕ ಹಾದು ಹೋಗಿದೆ. ಸ್ವಿಫ್ಟ್–-ಟಟ್ಲ್ ಹೆಸರಿನ ಧೂಮಕೇತುವೊಂದು ಹಿಂದೆಂದೋ ಉದುರಿಸಿ ಹೋದ ಈ ಕಣಗಳು ನಿಮಿಷಕ್ಕೆ ಸಾವಿರ ಸಂಖ್ಯೆಯಲ್ಲಿ ವಾಯುಮಂಡಲವನ್ನು ಹೊಕ್ಕು ಉರಿದು ಉದುರುವುದನ್ನು ನೋಡುವುದೇ ಚೆಂದ.
ಆದರೆ ಮಳೆಗಾಲದ ಮಬ್ಬು ಮೋಡಗಳಿಂದಾಗಿ ಈ ಎರಡೂ ವಿಶೇಷಗಳಿಂದ ಕನ್ನಡನಾಡಿನ ಬಹುತೇಕ ಜನರು ವಂಚಿತರಾಗಿದ್ದೇವೆ. ಅತ್ತ ‘ಚೂರಿ’ ಹೆಸರಿನ ಧೂಮಕೇತುವನ್ನು ಬೆನ್ನಟ್ಟಲೆಂದು ಏಳು ವರ್ಷಗಳ ಹಿಂದೆ ಇಲ್ಲಿಂದ ಹೊರಟಿದ್ದ ರೊಸೆಟ್ಟಾ ನೌಕೆ ಮುಹೂರ್ತಕ್ಕೆ ಸರಿಯಾಗಿ ತನ್ನ ಗುರಿ ತಲುಪಿ ಚೂರಿಯ ಸುತ್ತ ಗಸ್ತು ತಿರುಗುತ್ತ ಫೊಟೊಗ್ರಫಿ ಮಾಡುತ್ತಿದೆ. ಇನ್ನು ಮೂರು ವಾರಗಳ ನಂತರ ಧೂಮಕೇತುವಿನ ಬೆನ್ನ ಮೇಲೆ ಅದು ಪುಟ್ಟ ಫ್ರಿಜ್ ಗಾತ್ರದ ಡಬ್ಬಿಯನ್ನು ಇಳಿಸಲಿದೆ.
ಈಗೇನೋ ಒರಟು ಬಂಡೆಯಂತಿರುವ ಆ ಧೂಮಕೇತು ಕ್ರಮೇಣ ತನ್ನ ತಲೆತುಂಬ ಹಿಮದ ಜೂಲು ಕೂದಲನ್ನೂ ಉದ್ದ ಬಿಳೀ ಬಾಲವನ್ನೂ ಬೆಳೆಸಿಕೊಳ್ಳುವ ಸೋಜಿಗದ ದೃಶ್ಯಾವಳಿಗಳನ್ನು ಸಮೀಪದಿಂದ ನೋಡುವ ಅದೃಷ್ಟ ನಮ್ಮದಾಗಲಿದೆ. ಆ ಕೌತುಕಕ್ಕೆ ಕಾಯುತ್ತಿರುವಾಗಲೇ ನಮ್ಮ ಹೆಮ್ಮೆಯ ‘ಮಂಗಳಯಾನ’ ನೌಕೆ ಸೆಪ್ಟೆಂಬರ್ ೨೪ರಂದು ಮಂಗಳ ಗ್ರಹದ ಕಕ್ಷೆಯನ್ನು ಪ್ರವೇಶಿಸುವ ಕ್ಷಣಗಣನೆಯೂ ಆರಂಭವಾಗಿದೆ.
ಸದ್ಯ ಅವನ್ನೆಲ್ಲ ಬದಿಗಿಟ್ಟು ಈ ಎಬೋಲಾ ಎಂಬ ಕರಾಳ ಕಾಯಿಲೆಯ ಗತಿಸ್ಥಿತಿ ಏನೆಂದು ನೋಡೋಣ. ಸೋಂಕು ತಗುಲಿದವರಿಗೆ ಅಷ್ಟೇ ಅಲ್ಲ, ದೂರದ ಸುರಕ್ಷಿತ ನಾಡಿನಲ್ಲಿರುವ ನಮಗೂ ಅದು ನಡುಕ ಹುಟ್ಟಿಸುತ್ತಿದೆ. ಎಂಟು ತಿಂಗಳು ಹಿಂದೆ ಆಫ್ರಿಕದಲ್ಲಿ ಅದು ಮೆಲ್ಲಗೆ ಹೆಡೆಯೆತ್ತಿದ ವೈಖರಿಯನ್ನೇ ನೋಡಿ: (‘ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್’ ಎಂಬ ಪ್ರತಿಷ್ಠಿತ ವೈದ್ಯಕೀಯ ಪತ್ರಿಕೆಯ ವರದಿಯ ಸಾರಾಂಶ ಇದು):
೨೦೧೩ರ ಡಿಸೆಂಬರ್ ೬ರಂದು ಗಿನಿ ದೇಶದ ಮಿಲಿಯಾಂಡು ಎಂಬ ಹಳ್ಳಿಯಲ್ಲಿ ಎರಡು ವರ್ಷದ ಮಗು ಸತ್ತಿತು. ಮುಂದಿನ ಒಂದು ತಿಂಗಳಲ್ಲಿ ಆ ಮಗುವಿನ ಅಕ್ಕ, ತಾಯಿ, ಅಜ್ಜಿ ಸತ್ತರು. ಅವರ ಆರೈಕೆಗೆಂದು ಹೋಗಿದ್ದ ಸೂಲಗಿತ್ತಿ ಅಲ್ಲೇ ಸಮೀಪದ ಮೆಸೆಂಟಾ ಆಸ್ಪತ್ರೆಯಲ್ಲಿ ಸತ್ತಳು. ಆಕೆಯನ್ನು ಪರೀಕ್ಷಿಸಿದ ಆರೋಗ್ಯ ಕಾರ್ಯಕರ್ತನಿಗೆ ಫೆಬ್ರುವರಿ ೧೦ರಂದು ಸಾವು ಬಂತು. ಇವನಿಗೆ ಶುಶ್ರೂಷೆ ನೀಡಿದ ವೈದ್ಯರು ಫೆ. ೨೪ರಂದು ಸತ್ತರು. ಐದು ದಿನಗಳ ನಂತರ ಇದೇ ವೈದ್ಯರ ಸಮೀಪ ಸಂಬಂಧಿಯೊಬ್ಬ ಸಾವಪ್ಪಿದ. ಹತ್ತು ದಿನಗಳ ನಂತರ ವೈದ್ಯರ ಇಬ್ಬರು ತಮ್ಮಂದಿರು ಅಸು ನೀಗಿದರು...
ಅಲ್ಲಿಂದ ಆರಂಭವಾದ ಸಾವಿನ ಸರಮಾಲೆ ನೆಂಟರಿಂದ ನೆಂಟರಿಗೆ, ಆಸ್ಪತ್ರೆಯಿಂದ ಆಸ್ಪತ್ರೆಗೆ ದಾಟುತ್ತ, ಪಶ್ಚಿಮ ಆಫ್ರಿಕದ ನಾಲ್ಕು ದೇಶಗಳಲ್ಲಿ ರುಂಡಮಾಲೆಯಾಗಿ ಬೆಳೆಯುತ್ತ ಅದಕ್ಕೆ ಬಲಿಯಾದವರ ಸಂಖ್ಯೆ ನಿನ್ನೆ ಸಾವಿರ ದಾಟಿದೆ. ಸುಮಾರು ಒಂದೂವರೆ ಸಾವಿರ ಜನರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ಅನ್ನೋದು ಹೆಸರಿಗಷ್ಟೆ. ರೋಗಿಯನ್ನು ಯಾರೂ ಸಮೀಪಿಸುವ ಹಾಗಿಲ್ಲ. ಪಂಜರದ ಪ್ರಾಣಿಗಳ ಹಾಗೆ ದೂರದಿಂದಲೇ ಅವರನ್ನು ನೋಡಿಕೊಳ್ಳಬೇಕು.
ರೋಗಿಯ ಮಲಮೂತ್ರ ಶುಚಿ ಮಾಡುವವರೂ ಗಗನಯಾತ್ರಿಯ ಹಾಗೆ ನಖಶಿಖಾಂತ ಕವಚ ಧರಿಸಬೇಕು. ಮಾತ್ರೆಗೀತ್ರೆ ಕೊಟ್ಟು ಹೊರಕ್ಕೆ ಬಂದ ಕೂಡಲೆ ತಾನು ತೊಟ್ಟ ಕವಚವನ್ನು ಕಳಚಿ ತುರ್ತಾಗಿ ಹೂಳಬೇಕು ಇಲ್ಲವೆ ಸುಡಬೇಕು. ಡಾಕ್ಟರ್ಗಳಿಗಂತೂ ಈ ಕಾಯಿಲೆಗೆ ಔಷಧ ಏನೆಂಬುದೇ ಗೊತ್ತಿಲ್ಲ. ಅತಿಸಾರ, ರಕ್ತಭೇದಿಯಂಥ ಲಕ್ಷಣಗಳು ತೀರಾ ಜಾಸ್ತಿಯಾಗದ ಹಾಗೆ ನೋಡಿಕೊಂಡರೆ ರೋಗಿ ಉಳಿಯಬಹುದು. ಇಲ್ಲವಾದಲ್ಲಿ ಶೇಕಡ ೯೦ ರೋಗಿಗಳು ಸಾಯುತ್ತಾರೆ. ಆ ಸಾವಾದರೋ ದಾರುಣ ಯಾತನೆಯ ಸಾವು. ದೇಹದ ಸಕಲ ರಂಧ್ರಗಳಿಂದಲೂ ಬೆವರಿನ ಗ್ರಂಥಿಗಳಿಂದಲೂ ರಕ್ತದ್ರವ ಜಿನುಗುತ್ತದೆ.
ಸಹಜವಾಗಿ ಇಡೀ ಜಗತ್ತು ಕಂಗಾಲಾಗಿದೆ. ಆದರೆ ಹಾಗೆ ಕಂಗಾಲಾಗಬೇಕಾಗಿಲ್ಲ. ಏಕೆಂದರೆ ಇದು ಗಾಳಿಯಿಂದ ಹಬ್ಬುವ ಕಾಯಿಲೆ ಅಲ್ಲ. ರೋಗಿಯ ಜೀವದ್ರವ -ಅಂದರೆ ರಕ್ತ, ಬೆವರು, ಜೊಲ್ಲು, ಮಲಮೂತ್ರ, ವೀರ್ಯ, ಕಣ್ಣೀರು ಇಂಥದ್ದೇನಾದರೂ ನಮ್ಮ ಮೈಗೆ ಸೋಂಕಿದರೆ ಮಾತ್ರ ಎಬೋಲಾ ವೈರಾಣು ನಮ್ಮತ್ತ ದಾಟುತ್ತದೆ. ಹಾಗಾಗಿ ನೆಂಟರಿಂದ ನೆಂಟರಿಗೆ, ಆಸ್ಪತ್ರೆಯಿಂದ ಆಸ್ಪತ್ರೆಗೆ ಹರಡುತ್ತಿದೆ ವಿನಾ ಸಾರ್ಸ್ನ ಹಾಗೆ ಜನಜಾತ್ರೆಯಿದ್ದಲ್ಲಿ ಎಲ್ಲರಿಗೂ ಹಬ್ಬುವುದಿಲ್ಲ.
ಸೊಳ್ಳೆಗಳಿಂದ, ಕೊಳಕು ನಾಯಿ-, ಹಂದಿ,- ಇಲಿಗಳಿಂದ ಅಥವಾ ಕೋಳಿ ಹುಂಜಗಳಿಂದ ಈ ರೋಗ ಬರುವುದಿಲ್ಲ. ಬಸ್, ಟೆಂಪೊ, ರೈಲು, ಹಡಗು, ವಿಮಾನಗಳಲ್ಲೂ ಒಬ್ಬರಿಂದ ಹತ್ತು ಜನರಿಗೆ ಹಬ್ಬುವ ಸಂಭವ ತೀರ ಕಡಿಮೆ. ಎಂಜಲು ಹಚ್ಚಿ ಹಚ್ಚಿ ಟಿಕೆಟ್ ಕೊಡುವ ಕಂಡಕ್ಟರ್ಗೇ ಎಬೋಲಾ ಜ್ವರ ಬಂದಿದ್ದರೆ ಆ ಮಾತು ಬೇರೆ. ಟಿಕೆಟ್ ಒದ್ದೆ ಇದ್ದಷ್ಟು ಹೊತ್ತು ಮಾತ್ರ ಅಪಾಯಕಾರಿ. ಈ ರೋಗದ ವಿಲಕ್ಷಣತೆ ಏನೆಂದರೆ ಆಸ್ಪತ್ರೆಗಳೇ ಇದರ ಟ್ರಾವೆಲ್ ಏಜೆಂಟ್ಗಳಾಗುತ್ತವೆ. ಡಾಕ್ಟರ್ಗಳೇ ರೋಗಿಗಳಾಗುತ್ತಾರೆ. ರೋಗಿಗಳೇ ಡಾಕ್ಟರ್ ಆಗಿ ತಮಗೆ ತಾವೇ ಶುಶ್ರೂಷೆ ಮಾಡಿಕೊಳ್ಳಬೇಕಾದ ಸ್ಥಿತಿ ಬರುತ್ತದೆ.
ಧೂಮಕೇತುಗಳಿಗೂ ಎಬೋಲಾ ವೈರಾಣುವಿಗೂ ಎಷ್ಟೊಂದು ಹೋಲಿಕೆ ಇದೆ ನೋಡಿ. ಸೌರಮಂಡಲದ ಅಂಚಿನ ಕ್ಯೂಪರ್ ಪಟ್ಟಿಯ ಕತ್ತಲ ಕೂಪದಲ್ಲಿ ಕೋಟಿಗಟ್ಟಲೆ ಚಿಕ್ಕ ದೊಡ್ಡ ಬಂಡೆಗಳ ನಡುವೆ ತಣ್ಣಗೆ ರೌಂಡ್ ಹೊಡೆಯುತ್ತಿದ್ದ ಬಂಡೆಯೊಂದು ತನಗೆ ಯಾರೋ ಖೊಕ್ ಕೊಟ್ಟಂತೆ ಪುಳಕ್ಕನೆ ಎದ್ದು ಬಂದು ಧೂಮಕೇತುವಾಗಿ ಎಂಟೂ ಗ್ರಹಗಳ ಕಕ್ಷೆಯೊಳಕ್ಕೆ ಹೊಕ್ಕು ಹೊರಟು ಸೂರ್ಯನಿಗೆ ಒಂದು ಪ್ರದಕ್ಷಿಣೆ ಹಾಕಿ ಮರಳಿ ಸ್ವಸ್ಥಾನಕ್ಕೆ ಹೋಗಿ ಕೂರುತ್ತದೆ. ಎಬೋಲಾನೂ ಹಾಗೇ.
ಕತ್ತಲ ಖಂಡ ಎನಿಸಿದ ಆಫ್ರಿಕಾದ ಪಶ್ಚಿಮ ಅಂಚಿನ ಕಾಂಗೊ (ಝಾಯಿರ್) ದೇಶದ ಮಳೆಕಾಡಿನಲ್ಲಿ ಬಾವಲಿಯಂಥ ಯಾವುದೋ ಪ್ರಾಣಿಯ ದೇಹದಲ್ಲಿ ನಂಜಾಣು ಅವಿತಿರುತ್ತದೆ. ಹಾಗೆಂದು ಆ ಬಾವಲಿಗಳಿಗೆ ಎಂದೂ ಜ್ವರ ಬರುವುದಿಲ್ಲ. ಅವು ಕೇವಲ ವೈರಾಣುಗಳ ಬ್ಯಾಂಕಿನಂತಿರುತ್ತವೆ. ಎಲ್ಲೋ ಹತ್ತು ಹನ್ನೆರಡು ವರ್ಷಗಳಿಗೆ ಒಮ್ಮೆ ಅದು ಇನ್ಯಾವುದೋ ಪ್ರಾಣಿಗೆ ಕಚ್ಚುತ್ತದೊ, ಮೃತ್ಯು ಚುಂಬನ ಕೊಟ್ಟು ಹೋಗುತ್ತದೊ ಗೊತ್ತಿಲ್ಲ. ಕ್ರಮೇಣ ವೈರಾಣುಗಳು ಇತರ ಪ್ರಾಣಿಗಳಿಗೆ ಹಬ್ಬುತ್ತವೆ. ದಟ್ಟ ಅರಣ್ಯಗಳಲ್ಲಿ ವಾಸಿಸುವ ಗೊರಿಲ್ಲಾ, ಚಿಂಪಾಂಜಿ, ಮುಳ್ಳುಹಂದಿ, ಜಿಂಕೆಯಂಥ ಪ್ರಾಣಿಗಳ ಮಧ್ಯೆ ಎಬೋಲಾ ಪಸರಿಸುತ್ತದೆ.
ಅಂಥ ವನ್ಯಜೀವಿಯನ್ನು ಮನುಷ್ಯರು ಮುಟ್ಟಿದಾಗ ಅಥವಾ ಸತ್ತಿದ್ದನ್ನು ಹೊತ್ತು ಸಾಗಿಸುವಾಗ ಇದು ಮನುಷ್ಯಲೋಕಕ್ಕೆ ಪ್ರವೇಶ ಪಡೆಯುತ್ತದೆ. ೧೯೭೬ರಲ್ಲಿ ಎಬೋಲಾ ನದಿಯ ದಂಡೆಯಲ್ಲಿ ಇದು ಪ್ರಕಟವಾಗಿತ್ತು. ನಂತರ ೧೯೯೫ರ ಸುಮಾರಿಗೆ ಮತ್ತೊಮ್ಮೆ ಅಲ್ಲೇ ಸುತ್ತಮುತ್ತ ಹಾವಳಿ ಎಬ್ಬಿಸಿ ೨೦೦೭ರಲ್ಲಿ ಮತ್ತೆ ಉಗಾಂಡಾದಲ್ಲಿ ಪ್ರತ್ಯಕ್ಷವಾಗಿತ್ತು. ಇದೀಗ ಅಲ್ಲೇ ಮೂರು ರಾಷ್ಟ್ರಗಳ ಗಡಿಯಲ್ಲಿ ಪ್ರಕಟವಾಗಿ ನಾಲ್ಕು ದೇಶಗಳಿಗೆ ಹಬ್ಬಿದೆ. ಭಯ-–ದಿಗಿಲನ್ನು ಜಗತ್ತಿಗೆಲ್ಲ ಹಬ್ಬಿಸಿದೆ.
ಮೊನ್ನೆ ನೈಜೀರಿಯಾದಿಂದ ವಿಮಾನದ ಮೂಲಕ ಬೆಂಗಳೂರಿಗೆ ಬಂದಿಳಿದ ಮೂವರು ಪ್ರಯಾಣಿಕರಿಗೆ ತುಸು ಜ್ವರ ಇದೆಯೆಂಬುದು ಗೊತ್ತಾಗಿ ದಿಗಿಲು ಬಿದ್ದ ಸಿಬ್ಬಂದಿ ತ್ವರಿತ ಕಾರ್ಯಾಚರಣೆ ನಡೆಸಿ ಅವರನ್ನೆಲ್ಲ ಆಸ್ಪತ್ರೆಗೆ ಸಾಗಿಸಿ ತನಿಖೆ ಪನಿಖೆ ನಡೆಸಿ ಬಿಡುಗಡೆ ಮಾಡಿದ್ದೂ ಆಯಿತು. ಅವರಿಗೆ ತಗುಲಿದ್ದು ‘ಎಬೋಲಾ ಅಲ್ಲ’ ಅಂತ ಸಂಜಯ ಗಾಂಧಿ ಆಸ್ಪತ್ರೆಯಲ್ಲಿ ಅಷ್ಟು ಬೇಗ ಹೇಗೆ ಕಂಡುಹಿಡಿದರೋ ಎಲ್ಲ ನಿಗೂಢ.
ಎಬೋಲಾಕ್ಕೆ ಔಷಧವನ್ನು ಉತ್ಪಾದಿಸಿದ ಪರಿಯೂ ನಿಗೂಢವಾಗಿದೆ. ಆಫ್ರಿಕದ ಈ ಬಡದೇಶಗಳಿಂದ ಅಪಾರ ಪ್ರಮಾಣದಲ್ಲಿ ಖನಿಜ, ತೈಲ, ಮರಮುಟ್ಟುಗಳನ್ನು ಸಾಗಿಸಿಕೊಳ್ಳುವ ಧನಿಕ ರಾಷ್ಟ್ರಗಳು ಅಲ್ಲಿನ ಬಡಜನರ ಆರೋಗ್ಯ ರಕ್ಷಣೆಗಾಗಿ ಎಂದೂ ಏನನ್ನೂ ಮಾಡಿರಲಿಲ್ಲ. ಎಬೋಲಾದ ದಾರುಣ ಲಕ್ಷಣಗಳು ೩೦ ವರ್ಷಗಳ ಹಿಂದೆಯೇ ಗೊತ್ತಾಗಿದ್ದರೂ ಅದಕ್ಕೆ ಔಷಧ ಕಂಡುಹಿಡಿಯಬೇಕೆಂಬ ತುರ್ತು ಅವಕ್ಕೆ ಹಾಗಿರಲಿ, ಅವುಗಳ ಮುಷ್ಟಿಯಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆಗೂ ಇರಲಿಲ್ಲ.
ಈಗ ನೋಡಿದರೆ ಒಂದು ದಿಕ್ಕಿನಲ್ಲಿ ದಿಗಿಲು ಹಬ್ಬಿಸುವ ಕೆಲಸ ಹಾಗೂ ಇನ್ನೊಂದು ನಿಟ್ಟಿನಲ್ಲಿ ಔಷಧ ರೂಪಿಸುವ ಕೆಲಸ ಎರಡೂ ತುರ್ತಾಗಿ ಸಾಗಿವೆ. ಅಮೆರಿಕದ ವಿಜ್ಞಾನಿಗಳದ್ದೇ ಝೀಮ್ಯಾಪ್ ಹೆಸರಿನ ಕಂಪನಿಯೊಂದು ಔಷಧವನ್ನು ತಯಾರಿಸಿದೆ. ಮನುಷ್ಯರ ಮೇಲೆ ಅದನ್ನು ಪ್ರಯೋಗಿಸುವ ಮೊದಲು ಅನುಸರಿಸಬೇಕಾದ ಕಟ್ಟಳೆಗಳನ್ನೆಲ್ಲ ಬದಿಗೊತ್ತಿ, ನೇರವಾಗಿ ರೋಗಿಗಳ ಮೇಲೆ ಪ್ರಯೋಗಿಸಲು ವಿಶ್ವ ಆರೋಗ್ಯ ಸಂಸ್ಥೆ ಅವಸರದಲ್ಲಿ ನಿರ್ಧರಿಸಿದೆ. ಆದರೆ ಆ ಔಷಧವನ್ನು ಸದ್ಯಕ್ಕೆ ಅಮೆರಿಕ, ಯೂರೋಪ್ನಿಂದ ಆಫ್ರಿಕಕ್ಕೆ ಹೋಗಿದ್ದ ಬಿಳಿ ಜನರಿಗೆ ಮಾತ್ರ ಕೊಡಲಾಗುತ್ತಿದೆ.
‘ಔಷಧ ತಯಾರಿಸಲು ಬೇಕಾದ ಪ್ರತಿವಿಷವನ್ನು ಆಫ್ರಿಕದ ಕರಿ ಯುವಕನೊಬ್ಬನಿಂದ ಪಡೆದಿದ್ದೀರಿ, ಆದರೆ ಕರಿಯರಿಗೆ ಏಕೆ ಔಷಧ ಕೊಡುತ್ತಿಲ್ಲ?’ ಎಂದು ಆಫ್ರಿಕದ ಜನರು ಕೇಳುತ್ತಿದ್ದಾರೆ. ಔಷಧವನ್ನು ತಂಬಾಕು ಸಸ್ಯದಲ್ಲಿ ಬೆಳೆಸಲಾಗುತ್ತಿದ್ದು ಅದರ ಉತ್ಪಾದನೆ ತೀರ ನಿಧಾನವಾಗಿದೆ ಎಂಬ ನಂಬಲರ್ಹ ಕಾರಣವನ್ನೇನೊ ಕಂಪನಿ ಕೊಡುತ್ತಿದೆ. ಏನೊ ಗೊತ್ತಿಲ್ಲ. ಎಬೋಲಾ ರೋಗಿಯ ಕಣ್ಣೀರಿನಲ್ಲೂ ನಂಜಾಣುಗಳಿರುವ ಹಾಗೆ ರೋಗಿಗಳ ಬಗ್ಗೆ ಅನುಕಂಪ ತೋರುವವರ ಕಣ್ಣೀರಿನಲ್ಲೂ ಸ್ವಾರ್ಥದ ನಂಜಾಣುಗಳಿದ್ದಾವು.
ಎಲ್ಲೋ ಕಾಡಿನಲ್ಲಿ ಅವಿತಿದ್ದ ರೋಗಾಣು ಈಚಿನ ವರ್ಷಗಳಲ್ಲಿ ದೂರ ದೂರ ಹಬ್ಬುತ್ತ ಹೆಚ್ಚು ಹೆಚ್ಚು ಜನರನ್ನು ಬಲಿ ಹಾಕುತ್ತಿದೆ ಹೇಗೆ? ಕ್ಯಾಸನೂರು ಜ್ವರ, ಪ್ಲೇಗ್, ಚಿಕೂನ್ಗುನ್ಯಗಳ ಹಾಗೆ ಇದೂ ಮಿಲಿಟರಿ ಲ್ಯಾಬಿನಲ್ಲಿ ಜೀವಾಣು ಅಸ್ತ್ರವಾಗಿ ರೂಪುಗೊಂಡು ಈಗ ನಿಯಂತ್ರಣ ತಪ್ಪಿ ವಿಸ್ತರಿಸುತ್ತಿದೆಯೆ? ಅಂಥ ಸಾಧ್ಯತೆಗಳು ಕಡಿಮೆ ಎಂದೇ ಹೇಳಬೇಕು. ಏಕೆಂದರೆ ಎಬೋಲಾವನ್ನು ಹಬ್ಬಿಸುವುದೂ ಸುಲಭವಲ್ಲ; ನಿಯಂತ್ರಣದಲ್ಲಿ ಇಡುವುದೂ ದುಬಾರಿಯ ಸಂಗತಿ.
ಸಂಪರ್ಕ ಸಾಧನಗಳಿಂದಾಗಿ ಇಡೀ ವಿಶ್ವವೇ ಒಂದು ಹಳ್ಳಿಯಾಗಿದೆ ಎನ್ನುವಾಗ ಹಳ್ಳಿಯ ಸೋಂಕು ವಿಶ್ವಕ್ಕೆ ಹಬ್ಬದೇ ಇದ್ದೀತೆ? ಒಮ್ಮೆ ಎಬೋಲಾ ಹಬ್ಬಿದರೆ ಸರಿಯಾದ ಸಮಯದಲ್ಲಿ ಸರಳ ಶುಶ್ರೂಷೆ ಸಿಕ್ಕರೂ ರೋಗಿ ಬಚಾವಾಗುತ್ತಾನೆ. ಹಿಂದುಳಿದ ದೇಶಗಳ ಹಳ್ಳಿಗಳಲ್ಲಿ ಅದೂ ಸಿಗುವುದಿಲ್ಲ. ನಗರಗಳ ಆಸ್ಪತ್ರೆಗಳೆಲ್ಲ ಹೈಟೆಕ್ಗಳಾಗಿ ಕೈಗೆಟುಕದಂತಾಗುತ್ತಿವೆ.
ಹಾಗೆಂದು ಸರ್ಕಾರಗಳು ಕೈಕಟ್ಟಿ ಕೂರುವುದಿಲ್ಲ. ಭಾರತದಲ್ಲಂತೂ ಪ್ರತಿದಿನದ ೯೫೦ ಕ್ಷಯರೋಗಿಗಳ ಸಾವಿನ ಸದ್ದಿಗಿಂತ ಎಬೋಲಾ ಗದ್ದಲ ಜೋರಾಗುವಂತಿದೆ. ಹಿಂದೆ ಹಂದಿಜ್ವರದ ದಿಗಿಲು ಮುಗಿಲು ಮುಟ್ಟಿದಾಗ ದೂರದಿಂದಲೇ ಜ್ವರವನ್ನು ಗುರುತಿಸಬಲ್ಲ ದುಬಾರಿ ಯಂತ್ರಗಳನ್ನು ಕರ್ನಾಟಕ ಸರ್ಕಾರ ಖರೀದಿಸಿತ್ತು. ಆ ಯಂತ್ರಗಳೆಲ್ಲ ಈಗ ಯಾವ ಸ್ಥಿತಿಯಲ್ಲಿವೆಯೊ? ಇದೀಗ ಅಂಥ ಇನ್ನಷ್ಟು ಯಂತ್ರಗಳನ್ನು ಮಾರುವ ಏಜೆನ್ಸಿಯೊಂದರ ಬಗ್ಗೆ ಹೀಗೆ ಕತೆ ಕಟ್ಟಬಹುದು: ನೈಜೀರಿಯಾದಿಂದ ಹೊರಟ ಕೆಲವು ಪ್ರಯಾಣಿಕರು ಈ ಏಜೆನ್ಸಿಯಿಂದ ಹಣ ಪಡೆದು, ತಮಗೆ ಸಣ್ಣ ಜ್ವರ ಇದೆಯೆಂದು ವಿಮಾನದಲ್ಲಿ ಘೋಷಿಸಬೇಕು.
ಎದ್ವೋ ಬಿದ್ವೋ ಎಂಬ ತರಾತುರಿಯಲ್ಲಿ ಅತ್ಯುಗ್ರ ಭದ್ರತೆಯಲ್ಲಿ ಅವರನ್ನು ಆಸ್ಪತ್ರೆಗೆ ಸೇರಿಸಿ ಮಾಧ್ಯಮಗಳ ಮೂಲಕ ಸಮಾಜಕ್ಕೆ ನಡುಕ ಹುಟ್ಟಿಸಬೇಕು. ಸರ್ಕಾರ ಅದೆಷ್ಟೊ ಕೋಟಿ ಹಣ ಸುರಿದು ಹೊಸ ಸಲಕರಣೆ, ಕೈಗವಸು, ಮೈಗವಚ, ಕನ್ನಡಕ, ಶಿರಸ್ತ್ರಾಣಗಳ ಕಂತೆ ಕಂತೆಯನ್ನು ಖರೀದಿಸಿ ಇಡಬೇಕು. ಬಳಸಿದ ತಕ್ಷಣ ಅವುಗಳನ್ನು ಸುಡಲೆಂದು ಇಲೆಕ್ಟ್ರಿಕ್ ಸುಡುಗೂಡುಗಳನ್ನೂ ಖರೀದಿಸಬೇಕು.
ಅಂತೂ ಎಬೋಲಾ ಹಬ್ಬ ಬಂದಿದೆ. ಭಯದ ಮಾರುಕಟ್ಟೆಯಲ್ಲಿ ಈಗ ಸಂತೆಯ ಸಮಯ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.