ಜೀನ್ ಹೆನ್ರಿ ಫಾಬ್ರೆ ಫ್ರಾನ್ಸ್ ದೇಶದ ಬಹುದೊಡ್ಡ ಪರಿಸರವಾದಿ. ಆತ ಅನೇಕ ಪ್ರಯೋಗಗಳ ಮೂಲಕ ಪಶು, ಪಕ್ಷಿಗಳ ಜೀವನ ಚಕ್ರಗಳ ಬಗ್ಗೆ ಸಿದ್ಧಾಂತಗಳನ್ನು ಮಂಡಿಸಿದ್ದಾನೆ. ಅವನ ಒಂದು ಪ್ರಯೋಗ ನನ್ನ ಮನಸ್ಸನ್ನು ಸೆಳೆದಿದೆ. ಫಾಬ್ರೆ ಒಂದೆರಡು ವರ್ಷ ಕಂಬಳಿಹುಳಗಳ ಬಗ್ಗೆ ಸಂಶೋಧನೆ ಮಾಡಿದ. ಅವನೊಂದು ವಿಶೇಷವನ್ನು ಗಮನಿಸಿದ. ಅದೆಂದರೆ ಒಂದೆರಡು ಹುಳು ಸತ್ತರೆ ಪಟಪಟನೇ ನೂರಾರು ಹುಳಗಳು ಸತ್ತು ಹೋಗುತ್ತವೆ. ಹಾಗಾದರೆ ಅವುಗಳಿಗೆ ಸಾಂಕ್ರಾಮಿಕ ರೋಗವೇನಾದರೂ ಬಂದಿರಬಹುದೇ ಎಂದು ಪರೀಕ್ಷಿಸಿದ. ಹಾಗೆ ಇರಲಿಲ್ಲ. ಸತ್ತ ಬಹಳಷ್ಟು ಹುಳಗಳಿಗೆ ರೋಗ ಬಂದಿರಲಿಲ್ಲ. ಅವುಗಳ ಇನ್ನೊಂದು ಲಕ್ಷಣವನ್ನು ಆತ ನೋಡಿದ.
ಒಂದು ಹುಳು ಮುಂದೆ ಹೊರಟರೆ ಅದರ ಹಿಂಭಾಗಕ್ಕೆ ಹೊಂದಿಕೊಂಡೇ ಮತ್ತೊಂದು ಹುಳು ಹೊರಡುತ್ತದೆ. ಅದರ ಹಿಂದೆ ಮತ್ತೊಂದು. ಹೀಗೆ ಹುಳುಗಳ ಒಂದು ಸರಪಳಿಯೇ ಆಗಿ ಹೋಗುತ್ತದೆ. ಒಂದು ರೀತಿಯಲ್ಲಿ ಅವು ಒಂದಕ್ಕೊಂದು ಅಂಟಿಕೊಂಡೇ ನಡೆಯುತ್ತವೆ.
ಒಂದು ಸಲ ಫಾಬ್ರೆ, ಅಗಲವಾದ ಅಂಚುಳ್ಳ ಮಣ್ಣಿನ ಬಟ್ಟಲೊಂದನ್ನು ತೆಗೆದುಕೊಂಡ. ಬಟ್ಟಲಿನ ಮಧ್ಯದಲ್ಲಿ ಸಾಕಷ್ಟು ಸಕ್ಕರೆ ಮತ್ತು ಹುಳುವಿನ ಆಹಾರ ಹಾಕಿದ. ನಂತರ ಹತ್ತಾರು ಹುಳಗಳನ್ನು ಕೂಡಿಹಾಕಿ ಅವುಗಳನ್ನು ಬಟ್ಟಲಿನ ಅಂಚಿನ ಮೇಲಿಟ್ಟ. ಅವುಗಳನ್ನು ಒಂದರ ಹಿಂದೆ ಒಂದರಂತೆ ಇಡುತ್ತ ಬಂದ. ಇದೇ ಸರಪಳಿಯನ್ನು ಬೆಳೆಸುತ್ತ ಕೊನೆಯ ಹುಳು ಮೊದಲನೆಯದರ ಮುಂದೆಯೇ ಇರುವಂತೆ ನೋಡಿಕೊಂಡ. ಅಂದರೆ ಹುಳಗಳ ಚಕ್ರ ಬಟ್ಟಲಿನ ಅಂಚಿನ ಮೇಲೆ ಪೂರ್ತಿಯಾಗಿತ್ತು. ಮೊದಲನೆಯ ಹುಳು ಯಾವುದು, ಕೊನೆಯದಾವುದು ಹೇಳುವುದು ಸಾಧ್ಯವಿರಲಿಲ್ಲ. ಹುಳಗಳು ನಡೆಯುತ್ತಲೇ ಇದ್ದವು. ಈ ಕಂಬಳಿ ಹುಳಗಳು ಕಣ್ಣುಗಳನ್ನು ಪೂರ್ತಿಯಾಗಿ ತೆರೆಯುವುದಿಲ್ಲ. ಅರೆತೆರೆದ ಕಣ್ಣುಗಳಿಂದ ಮುಂದಿನ ಹುಳದ ಹಿಂಭಾಗವನ್ನೇ ನೋಡುತ್ತ ಮುಂದಿನ ಹುಳ ಹೇಗೆ ಹೋಗುತ್ತದೋ ಹಾಗೆಯೇ ಹಿಂದಿನದೂ ಅನುಸರಿಸುತ್ತ ಹೋಗುತ್ತದೆ.
ಮಣ್ಣಿನ ಬಟ್ಟಲಿನ ಅಂಚಿನಲ್ಲಿದ್ದ ಹುಳುಗಳು ನಡೆಯುತ್ತಲೇ ಹೋದವು. ಎಲ್ಲಿಯೂ ನಿಲ್ಲದೇ ಸತತವಾಗಿ ಏಳು ದಿನ ನಡೆದವು. ಕೊನೆಗೆ ಅವುಗಳ ನಡೆ ನಿಂತಿತು. ಒಂದು ಹುಳ ಠಪ್ಪನೇ ಉದುರಿ ಕೆಳಗೆ ಬಿದ್ದಿತು. ಅದು ಸತ್ತೇ ಹೋಗಿತ್ತು. ಮುಂದೆ ಹತ್ತು ನಿಮಿಷಗಳಲ್ಲಿ ಒಂದರ ಹಿಂದೆ ಒಂದರಂತೆ ಎಲ್ಲ ಹುಳಗಳೂ ಸತ್ತು ಹೋದವು. ಅವೆಲ್ಲ ಸತ್ತದ್ದು ಹೊಟ್ಟೆಗೆ ಆಹಾರವಿಲ್ಲದೇ, ನಿಶ್ಯಕ್ತಿಯಿಂದ, ಆಯಾಸದಿಂದ. ಅತ್ಯಂತ ವಿಚಿತ್ರವೆಂದರೆ ಅವುಗಳಿಗೆ ಅತ್ಯಂತ ಪ್ರಿಯವಾದ ಆಹಾರ ಪಕ್ಕದಲ್ಲೇ ಇತ್ತು. ಒಂದಾದರೂ ಹುಳ ತನ್ನ ಚಲನೆಯನ್ನು ನಿಲ್ಲಿಸಿ ಮಧ್ಯಕ್ಕೆ ಸಾಗಿ ಆಹಾರವನ್ನು ತಿಂದಿದ್ದರೆ ಬಹುಶಃ ಉಳಿದವುಗಳೂ ಅದನ್ನೇ ಹಿಂಬಾಲಿಸುತ್ತಿದ್ದವೇನೋ. ಆದರೆ, ಪ್ರತಿಯೊಂದು ಹುಳವೂ ತನ್ನ ಕಣ್ಣನ್ನು ತೆರೆದುಕೊಳ್ಳದೇ, ಆ ಕಡೆಗೆ ಈ ಕಡೆಗೆ ನೋಡದೇ, ಬರೀ ಮುಂದಿನ ಹುಳವನ್ನೇ ನೋಡುತ್ತ ಚಕ್ರಾಕಾರವಾಗಿ ಸುತ್ತಿ, ಸುಸ್ತಾಗಿ ಸತ್ತಿತ್ತು. ಅವಕ್ಕೆ ನೋಡುವ ಶಕ್ತಿ ಇರಲಿಲ್ಲವೆಂದಲ್ಲ, ಆದರೆ ನೋಡುವ ಮನಸ್ಸಿರಲಿಲ್ಲ. ಅವುಗಳಲ್ಲಿ ಒಂದಾದರೂ ಹುಳ ನಿರ್ಧಾರಿತವಾದ ನಡಾವಳಿಯನ್ನು ತೊರೆದು ವಿಭಿನ್ನವಾಗಿ ಚಿಂತಿಸುವ ಧೈರ್ಯ ಮಾಡಲಿಲ್ಲ. ಮಾಡಿದ್ದರೆ ಅದು ತನ್ನ ಪ್ರಾಣವನ್ನು ಮಾತ್ರವಲ್ಲ, ಉಳಿದ ಹುಳಗಳ ಪ್ರಾಣವನ್ನು ಉಳಿಸಬಹುದಿತ್ತು.
ನಮ್ಮಲ್ಲಿ ಅನೇಕರ ಬದುಕುಗಳೂ ಹಾಗೆಯೇ ನಡೆದುಹೋಗುತ್ತಿವೆ. ಸಂಪ್ರದಾಯಗಳ ನಿಜವಾದ ಅರ್ಥವನ್ನು ತಿಳಿಯದೆ ಅರೆಗಣ್ಣು ತೆರೆದುಕೊಂಡು ಉಳಿದವರು ಮಾಡಿದಂತೆಯೇ ಮಾಡುತ್ತ ಸುತ್ತಿ, ಸುತ್ತಿ ಆಯಸ್ಸು ಕಳೆದುಕೊಳ್ಳುತ್ತೇವೆ. ನಮ್ಮ ಮನಸ್ಸುಗಳೂ ಪ್ಯಾರಾಶೂಟ್ ಇದ್ದ ಹಾಗೆ. ಅವುಗಳು ತೆರೆದುಕೊಂಡಾಗಲೇ ನಮ್ಮನ್ನು ರಕ್ಷಿಸುತ್ತವೆ. ಹೊಸ ಚಿಂತನೆಗಳೆಡೆಗೆ, ಹೊಸ ದಿಕ್ಕುಗಳೆಡೆಗೆ ಮನಸ್ಸು ತೆರೆದುಕೊಂಡಾಗ ಆವಿಷ್ಕಾರಗಳು ಸಿದ್ಧಿಸುತ್ತವೆ, ಅವುಗಳಿಂದ ಪ್ರಪಂಚಕ್ಕೆ ಒಳಿತಾಗುತ್ತದೆ. ಕಂಬಳಿಹುಳುಗಳ ಹಾಗೆ ಸುತ್ತಿದ್ದು ಸಾಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.