ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಿಗರಿಗೆ ಬೇಡವಾದನೇ ಬುದ್ಧ?

Last Updated 14 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ಬುದ್ಧ ಕನ್ನಡ ನಾಡಿಗೆ ಬಂದು ಹೋದ ದಾಖಲೆಗಳು ಈವರೆಗೆ ದೊರೆತಿಲ್ಲ. ಬುದ್ಧನ ಎಲ್ಲೆಯರಿಯದ ಸುತ್ತಾಟದಲ್ಲಿ ದಕ್ಷಿಣ ದಲ್ಲಿ ಎಷ್ಟು ದೂರ ಬಂದಿರಬಹುದೆಂದು ಊಹಿ ಸಲು ಸರಿಯಾದ ಪುರಾವೆಗಳಿಲ್ಲ. ಆದರೆ ಬೌದ್ಧ ಚಿಂತನೆ ಹರಿದು ಬಂದ ಮಾರ್ಗ ಮಾತ್ರ ಸ್ಪಷ್ಟವಾದುದು.

ಕನ್ನಡ ನಾಡನ್ನು ಆಳಿರಬಹುದಾದ ಮೊದಲ ರಾಜರು ಯಾರು? ಕನ್ನಡ ಭಾಷೆ ಎಷ್ಟು ಪ್ರಾಚೀನವಾದುದು? ಕನ್ನಡ ಲಿಪಿ ಯಾವಾಗ ಆರಂಭವಾಯಿತು? ಕನ್ನಡ ನಾಡು ನುಡಿಯ ಬಗೆಗೆ ತಿಳಿಯ ಬಯಸುವವರಿಗೆಲ್ಲ ಇಂತಹ ಹತ್ತಾರು ಪ್ರಶ್ನೆಗಳು ಬಂದು ಹೋಗುತ್ತವೆ. ಇದಕ್ಕೆಲ್ಲಾ ಉತ್ತರಿಸಬಲ್ಲ ಜಾಗ ಸನ್ನತಿ.

ಗುಲ್ಬರ್ಗದಿಂದ ೩೨ ಕಿ.ಮೀ. ದೂರದಲ್ಲಿ ಭೀಮಾ ನದಿ ತೀರದಲ್ಲಿ ಇರುವ ಹಳ್ಳಿ ಸನ್ನತಿ. ಅದರ ಸಮೀಪದಲ್ಲಿ ಭೀಮಾ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಲಾಗುತ್ತಿದೆ.  ನದೀ ತಟದಲ್ಲೇ ಕಾಣುವುದು ಚಂದ್ರಲಾಂಬಾ ಪರಮೇಶ್ವರಿ ದೇವ ಸ್ಥಾನ. ದೇವಾಲಯದ ಸಮೀಪದಲ್ಲಿ ಮಾರುವ, ದೇವಾಲಯದ ಪುಸ್ತಕಗಳು ಚಂದ್ರಭಾಗಾ ದೇವಿಯ ಕಥೆಯನ್ನು ಹೇಳುತ್ತವೆ.

ನದಿಯ ಆಚೆ ದಡಕ್ಕೆ ಅನತಿ ದೂರದಲ್ಲಿ ಕಾಣುವುದು ಬಿಳಿಯ ಗೋಳಾಕಾರದ ಸ್ತೂಪವನ್ನು ಹೋಲುವ ಕಟ್ಟಡ. ಅದು ಪ್ರಾಕ್ತನ ವಸ್ತುಗಳ ಪ್ರದರ್ಶನ ಕ್ಕೆಂದು ಸಿದ್ಧವಾಗುತ್ತಿರುವ ಮ್ಯೂಸಿಯಂ ಕಟ್ಟಡ. ದಾಟಿ ಮುಂದೆ ಹೋದರೆ ಅದು ಕಾನಗಾನಹಳ್ಳಿ. ಅಲ್ಲಿ ಕಾಣುವುದು ಕಳಚಿಬಿದ್ದ ಪುರಾತನವಾದ ಮಹಾ ಸ್ತೂಪದ ಅವಶೇಷ.  ಯಾರ ಕಾಲದ್ದು. ಇನ್ನೂ ಯಾಕೆ ಹೀಗೆ ಕಳಚಿ ಬಿದ್ದಿದೆ?

ಇದರ ಸುತ್ತ ಸಂಶೋಧನೆಗಾಗಿ ಬೇಲಿ ಹಾಕಿ ಹದಿನೈದು ವರ್ಷಗಳೇ ಕಳೆದು ಹೋಗಿವೆ. ಅಮೂಲ್ಯವಾದ ಆ ಶಿಲ್ಪಗಳನ್ನು ಕಾಯಲು ನಿಯೋಜನೆಗೊಂಡಿರುವ ಸೆಕ್ಯುರಿಟಿ ಗಾರ್ಡ್‌ ಗಳು, ಸಾರ್ವಜನಿಕರನ್ನು ಸುಲಭವಾಗಿ ಒಳಕ್ಕೆ ಬಿಡುವುದಿಲ್ಲ. ವಿಶೇಷ ಅನುಮತಿಯೊಂದಿಗೆ ಹೋದರೆ ಮಾತ್ರ ಫೋಟೊ ತೆಗೆದುಕೊಳ್ಳಬ ಹುದು. ಈ ಎಲ್ಲಾ ಪ್ರಶ್ನೆ ಉತ್ತರಗಳ ನಂತರ ‘ನಾವು ಯಾವಾಗ ನಮ್ಮ ಊರಿನ ಚರಿತ್ರೆ ತಿಳಿಯಲು ಸಾಧ್ಯ’ ಎಂಬುದು ಸ್ಥಳೀಯ ಯುವಕರ ಪ್ರಶ್ನೆ.

ಸುಮಾರು ಎರಡು ಸಾವಿರದ ಮುನ್ನೂರು ವರ್ಷಗಳ ಹಿಂದೆ ಈ ಕನ್ನಡನಾಡು ಮೌರ್ಯರ ಆಳ್ವಿಕೆಗೆ ಒಳಪಟ್ಟಿತ್ತು. ದೇವನಾಂಪ್ರಿಯ ಪ್ರಿಯ ದರ್ಶಿ ಅಶೋಕನ ರಾಜ್ಯದ ದಕ್ಷಿಣದ ರಾಜಧಾನಿ ಸುವರ್ಣಗಿರಿಯಾಗಿತ್ತೆಂದು ಅವನ ಶಾಸನಗಳು ಹೇಳುತ್ತವೆ. ಅಲ್ಲಿಗೆ ಧರ್ಮ ಮಹಾಮಾತ್ರರನ್ನು ನೇಮಕ ಮಾಡಿದ್ದನು. ಆ ಸುವರ್ಣಗಿರಿಯೇ ಸನ್ನತಿ ಇರಬಹುದೆಂದು ಹಲವು ವಿದ್ವಾಂಸರ ವಾದ.

ಆ ವಾದಕ್ಕಿಳಿಯುವುದು ನನ್ನ ಉದ್ದೇಶವಲ್ಲ. ಅಶೋಕ, ಶಾಸನಗಳನ್ನು ಕೆತ್ತಿಸಿದ್ದರೂ ಅತ್ಯಂತ ಹೆಚ್ಚಿನ ಸಂಖ್ಯೆಯ ಶಾಸನಗಳು ಲಭಿಸಿರುವುದು ಕನ್ನಡ ನಾಡಿನಲ್ಲಿ ಎನ್ನುವುದು ಕುತೂಹಲದ ಸಂಗತಿ. ಈವರೆಗೆ ಸಿಕ್ಕ ಹದಿನಾರು ಶಾಸನಗಳು ಬಹುಶಃ ಅವನ ರಾಜ್ಯದ ಗಡಿಯನ್ನು ಸೂಚಿಸು ತ್ತವೆ. ಅವು ಅವನ ರಾಜ್ಯದ ವ್ಯಾಪಾರದ ಮಾರ್ಗಗಳೂ ಆಗಿರಬೇಕು. ಪ್ರಾಣಿ ದಯೆ, ಹಿರಿಯರಿಗೆ ಗೌರವ, ಅಹಿಂಸೆಯನ್ನು ಪಾಲಿಸು ವಂತೆ ಹೇಳುವ ಈ ಶಾಸನಗಳು ಅಂತರಂಗದಲ್ಲಿ ಬುದ್ಧ ನೀತಿಯನ್ನು ಸಾರುತ್ತವೆ. ಉತ್ತರದ ಪಾಟಲೀಪುತ್ರದಿಂದ ಆಳುವ (ಇಂದಿನ ಬಿಹಾರ) ಮೌರ್ಯಾಶೋಕ ಕನ್ನಡ ನಾಡಿನ ಬಗೆಗೆ ಇಷ್ಟೊಂದು ಕಾಳಜಿಯನ್ನು ತೋರಿರಬೇಕಾದರೆ, ಇಲ್ಲಿನ ನೈಸರ್ಗಿಕ ಸಂಪತ್ತು ಪ್ರಮುಖ ಆಕರ್ಷಣೆಯಾಗಿದ್ದಿರಬೇಕು.

ಪಶ್ಚಿಮ ಘಟ್ಟಗಳಲ್ಲಿ ಬೆಳೆಯುವ ಕರಿ ಮೆಣಸು ಆ ಕಾಲಕ್ಕೇ ಗ್ರೀಕ್ ದೇಶಕ್ಕೆ ರಫ್ತಾಗುತ್ತಿತ್ತು. ಆದ್ದರಿಂದಲೇ ಅವನ್ನು ‘ಯವನ ಪ್ರಿಯ’ ಎಂದು ಕರೆಯಲಾಗುತ್ತಿತ್ತು. ಅಲೆಕ್ಸಾಂಡರ್‌ನ ದಾಳಿ ನಂತರ ಭಾರತ ಮತ್ತು ಗ್ರೀಸ್‌ನ ನಡುವೆ ಉತ್ತಮ ಸಂಪರ್ಕ ಏರ್ಪಡಲು ಸಾಧ್ಯವಾಗಿತ್ತು.

ಇಲ್ಲಿ ಸಿಗುವ ಚಿನ್ನವೂ ಉತ್ತರದ ಜನರನ್ನು ದಕ್ಷಿಣಕ್ಕೆ ಕರೆ ತಂದಿರಬೇಕು. ಪಶ್ಚಿಮ ಘಟ್ಟದಲ್ಲಿ ದೊರೆಯುವ ಶ್ರೀಗಂಧ, ದಂತ... ವ್ಯಾಪಾರಗಾರ ರನ್ನು ಹಿಮಾಲಯದ ತಪ್ಪಲಿನಿಂದ ಕನ್ನಡ ನಾಡಿಗೆ ಸೆಳೆದಿದ್ದರೆ ಆಶ್ಚರ್ಯಪಡಬೇಕಾಗಿಲ್ಲ. ಹೀಗೆ ಬಂದ ವ್ಯಾಪಾರಗಾರರು ತಮ್ಮ ಜೊತೆ ಬೌದ್ಧ ಧರ್ಮವನ್ನು ಕನ್ನಡ ನಾಡಿನಲ್ಲಿ ಪರಿಚ ಯಿಸಿದರು. ಮತ್ತೊಂದು ಕಡೆಯಿಂದ ರಾಜಾಶ್ರಯದಲ್ಲಿ ಅಧಿಕೃತವಾಗಿ ಬೌದ್ಧ ಧರ್ಮ ಈ ನಾಡನ್ನು ಪ್ರವೇಶಿಸಿತು.

ಭೀಮಾ ನದಿ ತೀರದಲ್ಲಿರುವುದು ಅಶೋಕನ ಕಾಲದ ಬೌದ್ಧ ಸ್ತೂಪ. ಅದರ ಮೇಲ್ ಹೊದಿ ಕೆಯ ಶಿಲಾ ಫಲಕಗಳ ಮೇಲೆ ಬುದ್ಧನ ಬದು ಕನ್ನು ಕುರಿತಾದ ಶಿಲ್ಪಗಳು, ಸುಂದರವಾದ ಕಪ್ಪು ಶಿಲೆಯ ಕೆತ್ತನೆ ಇದೆ. ಈ ಸ್ತೂಪದ ನಿರ್ಮಾಣ ಅಶೋಕನ ಕಾಲದಲ್ಲಿ ಆರಂಭಗೊಂಡು ಶಾತವಾಹನರ ಕಾಲಕ್ಕೂ ಮುಂದುವರೆದಿರುವು ದರಿಂದ  ಹೀನಯಾನ ಹಾಗೂ ಮಹಾಯಾನ ಬೌದ್ಧ ಪಂಥಗಳೆರಡರ ಲಕ್ಷಣಗಳೂ ಇಲ್ಲಿ ಕಾಣು ತ್ತದೆ.

ಈ ಸ್ತೂಪದ ವಿಶೇಷವೆಂದರೆ ಅಶೋಕನ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಹೀನಯಾನ ಬೌದ್ಧ ಪಂಥದಲ್ಲಿ ಬುದ್ಧನನ್ನು ಸಂಕೇತಗಳ ರೂಪದಲ್ಲಿ ಮಾತ್ರ ಪೂಜಿಸುತ್ತಿದ್ದರು. ಛತ್ರಿ, ಪಾದಗಳು, ತೆರೆದ ಸಿಂಹಾಸನ, ಬೋಧಿವೃಕ್ಷ ಇತ್ಯಾದಿ. ಮಹಾಯಾನ  ಬೌದ್ಧಪಂಥ ಬುದ್ಧನನ್ನೇ ದೇವರಾಗಿ ಸ್ವೀಕರಿಸಿ ಶಿಲ್ಪವಾಗಿಸಿತು.

ಅತ್ಯಂತ ಸುಂದರವಾದ ಬುದ್ಧನ ಶಿಲ್ಪಗಳು ಈ ಕಾಲದಲ್ಲಿ ಮೂಡಿ ಬಂದವು. ಅಮರಾವತಿಯ ಸ್ತೂಪವನ್ನು ಹೋಲುವ ಈ ಮಹಾಸ್ತೂಪದಲ್ಲೂ ಸುಂದರ ಬುದ್ಧನ ಶಿಲ್ಪಗಳಿವೆ. ಶಿಲ್ಪಗಳ ಮೇಲೆ ಅದರ ಹೆಸರು ಉಲ್ಲೇಖಗೊಂಡಿರುವುದರಿಂದ ಆ ಒಟ್ಟು ಶಾಸನಗಳ ಸಂಖ್ಯೆ ಎಂಬತ್ತಕ್ಕೂ ಹೆಚ್ಚೇ ಆಗಿರು ತ್ತದೆ. ಇಲ್ಲಿರುವ ಆಳೆತ್ತರದ ಅಶೋಕ ಮತ್ತು ಅವನ ರಾಣಿಯ ಶಿಲ್ಪ ಈ ಸ್ತೂಪಕ್ಕೆ ಚಾರಿತ್ರಿಕ ಮಹತ್ವವನ್ನು ತಂದು ಕೊಟ್ಟಿದೆ. ಅದರ ಮೇಲ್ಭಾ ಗದಲ್ಲಿ ‘ರಾಜ ಅಸೋಕೊ’ ಎಂದು ನಮೂದಿಸಿದೆ.

ಅಶೋಕನ ‘ದಮ್ಮ’ ಪ್ರಚಾರಕ್ಕಾಗಿ ಕೆತ್ತಿದ ಶಾಸನಗಳು ಈ ನಾಡಿಗೆ ಲಿಪಿಯನ್ನು ಪರಿಚಯಿಸಿ ದವು. ಕನ್ನಡದ ಲಿಪಿಯ ಮೂಲ ಅಶೋಕನ ‘ಬ್ರಾಹ್ಮಿ’ ಲಿಪಿಯೇ ಆಗಿರುವುದರಿಂದ ಕನ್ನಡದ ಲಿಪಿಯ ಪ್ರಾಚೀನತೆಯು ಎರಡು ಸಾವಿರದ ಮುನ್ನೂರು ವರ್ಷಗಳಷ್ಟು ಹಿಂದಕ್ಕೆ ಹೋಗು ತ್ತದೆ. ಕಾನಗಾನಹಳ್ಳಿಯ ಸುತ್ತಮುತ್ತಲೂ ನಡೆಯ ಬೇಕಾಗಿರುವ ಪ್ರಾಕ್ತನ ಸಂಶೋಧನೆ ಈ ಎಲ್ಲದರ ಮೇಲೆ ಬೆಳಕು ಚೆಲ್ಲಬಲ್ಲದು.

ಸುಮಾರು ಕ್ರಿಸ್ತಪೂರ್ವ ಮೂರನೆಯ ಶತ ಮಾನದಲ್ಲಿ ಅಧಿಕೃತವಾಗಿ ಪ್ರವೇಶಿಸಿದ ಬೌದ್ಧ ಧರ್ಮ ಹತ್ತು ಶತಮಾನಗಳ ಕಾಲ ಹರಡಿದ್ದ ದಟ್ಟ ಪುರಾವೆಗಳು ಸಿಗುತ್ತವೆ. ಅಂಕೋಲ, ಮೂಡುಬಿದರೆ, ಧರ್ಮಸ್ಥಳ, ಉಡುಪಿ, ಬನ ವಾಸಿ, ಜೋಗ, ಬಳ್ಳಿಗಾವೆ ಇವೆಲ್ಲಾ ಪ್ರಮುಖ ಬೌದ್ಧ ಕೇಂದ್ರಗಳಾಗಿದ್ದವು. ಪಶ್ಚಿಮ ಘಟ್ಟದಿಂದ ನಡೆಯುತ್ತಿದ್ದ ವ್ಯಾಪಾರವು ಈ ಕೇಂದ್ರಗಳ ಬೆಳವಣಿಗೆಗೆ ಕಾರಣವಾಗಿತ್ತು.

ನಿಧಾನವಾಗಿ ಈ ಕೇಂದ್ರಗಳು ಜೈನರಿಂದಲೂ ಆ ನಂತರ ಶೈವರ ಆಕ್ರಮಣಕ್ಕೂ ಒಳಗಾಗಿವೆ. ಅದನ್ನು ಸೂಚಿಸುವ ಶಾಸನಾಧಾರಗಳೂ, ಪ್ರಾಕ್ತನ ಆಧಾರಗಳೂ ನಮಗಿಂದು ದೊರೆಯು ತ್ತವೆ. ಸಾವಿರ ವರ್ಷಗಳ ಹಿಂದೆ ಶೈವ ಪಂಥ ಹರಡಿದಾಗ ಬೌದ್ಧರು ಕ್ಷೀಣಿಸತೊಡಗಿದರು.

ಬೌದ್ಧ ಧರ್ಮದ ಹಿನ್ನೆಲೆಯಲ್ಲಿ ಹೆಚ್ಚು ಆರಾಧನೆಗೆ ಒಳಗಾಗಿದ್ದ ಭಗವತಿ, ರಾಜ ರಾಜೇಶ್ವರಿ ದೇವತೆಗಳೂ ನಿಧಾನವಾಗಿ ವೈದಿಕ ಹಿಡಿತಕ್ಕೆ ಒಳಪಟ್ಟಿವೆ. ಅಂತಹ ಒಂದು ದೇವಾ ಲಯ ಸನ್ನತಿಯಲ್ಲಿರುವ ಚಂದ್ರಲಾಂಬಾ ಪರಮೇಶ್ವರಿ. ದೇವಾಲಯದ ಆವರಣದಲ್ಲೇ ಕಾಳಿಗುಡಿಯೊಂದಿದೆ. ಅಶೋಕನ ಶಾಸನವನ್ನೇ ಪಾಣಿಪೀಠವಾಗಿ ಅದರ ಮೇಲೆ ದೇವಿಯನ್ನು ಸ್ಥಾಪಿಸಲಾಗಿದೆ. ಇಂತಹ ಸಾಹಸ ಸುಮಾರು ಸಾವಿರ ವರ್ಷದ ಹಿಂದೆಯೇ ನಡೆದಿದೆ.

ಕರ್ನಾಟಕದಲ್ಲಿ ಮೊದಲಿಗೆ ಪಟ್ಟಣಗಳು ಬೆಳವಣಿಗೆಯಾಗಿದ್ದರೆ, ಅದರ ಹೆಗ್ಗಳಿಕೆಯೂ ಈ ಕಾಲಕ್ಕೆ ಸೇರುತ್ತದೆ. ಇಟ್ಟಿಗೆಯಲ್ಲಿ ಕಟ್ಟಿದ ಮನೆ ಗಳು, ಅಂತಸ್ತಿನ ಕಟ್ಟಡ, ಕಣಜಗಳು ಈ ಕೇಂದ್ರಗಳಲ್ಲಿ ದೊರೆಯುತ್ತವೆ. ಅಶೋಕನ ಆಡಳಿತಕ್ಕೆ ಒಳಪಟ್ಟ ಜಾಗಗಳಲ್ಲೇ ಮುಂದು ವರೆದ ಶಾತವಾಹನರು ರೋಮ್‌ ಸಾಮ್ರಾಜ್ಯ ದೊಂದಿಗೆ ವ್ಯಾಪಾರದ ಸಂಪರ್ಕವನ್ನು ಹೊಂದಿ ದ್ದರು. ಹಾಗಾಗಿ ರೋಮನ್ನರ ಮಡಕೆಯ ಚೂರುಗಳು, ನಾಣ್ಯಗಳು ಯಥೇಚ್ಛವಾಗಿ ದೊರೆ ಯುತ್ತವೆ. ಕನ್ನಡ ನಾಡಿಗೆ ನಾಗರಿಕತೆಯನ್ನು ತಂದ ಬೌದ್ಧಧರ್ಮ ತನ್ನ ಅಸ್ತಿತ್ವ ಕಳೆದು ಕೊಂಡುದು ಮಾತ್ರ ಆಶ್ಚರ್ಯವನ್ನುಂಟು ಮಾಡುತ್ತದೆ.

ಕನ್ನಡದ ಆರಂಭದ ಕೃತಿಗಳು ಬೌದ್ಧ ಹಿನ್ನೆಲೆ ಯಲ್ಲೇ ಬಂದಿರಬೇಕು. ಅಂತಹ ಒಂದು ಕೃತಿಯೂ ಉಳಿಯದಂತೆ ನಾಶವಾಗಿರುವುದನ್ನು ಗಮನಿಸಿದರೆ, ವ್ಯವಸ್ಥಿತವಾಗಿಯೇ ಅದನ್ನು ಕೊನೆಗೊಳಿಸಿದಂತೆ ಕಾಣುತ್ತದೆ. ಶಾತವಾಹನರ ನಂತರ ಬಂದ ರಾಜಮನೆತನಗಳು ಬೌದ್ಧರನ್ನು ಉದಾರವಾಗಿ ಕಂಡರೂ, ಜೈನ ಹಾಗೂ ವೈದಿಕ ಗುರುಗಳ ಮಾರ್ಗದರ್ಶನ ಪಡೆಯತೊಡಗಿ ದರು. ಮತ್ತೆ ಬೌದ್ಧ ಧರ್ಮದ ಚಿಂತನೆಗೆ ಆಸ್ಪದವೇ ಸಿಕ್ಕಿದಂತೆ ಕಾಣುವುದಿಲ್ಲ.

ಏಳನೆಯ ಶತಮಾನದಲ್ಲೂ ಬೌದ್ಧರು ವ್ಯಾಪಾರದಲ್ಲಿ ಒಂದಷ್ಟು ಪ್ರಾಬಲ್ಯವನ್ನು ಹೊಂದಿದ್ದರು. ಐಯ್ಯಾವೊಳೆ ಐನೂರ್ವರಲ್ಲಿ (ವ್ಯಾಪಾರಿ ಶ್ರೇಣಿ) ಶೈವ ಬ್ರಾಹ್ಮಣರು, ಜೈನರು, ಬಣಜಿಗರು ಅಲ್ಲದೇ ಬೌದ್ಧರು ಇದ್ದರು.

ಜನಪದರಲ್ಲಿ ತತ್ವ ಸಿದ್ಧಾಂತಗಳ ಹಂತದ ಬುದ್ಧನ ಮಾರ್ಗಕ್ಕಿಂತ ಆಚರಣೆಯ ಹಂತದ ವೈದಿಕ ಮಾರ್ಗ ಹೆಚ್ಚೆಚ್ಚು ವಿಸ್ತರಿಸುತ್ತಾ ಹೋಯಿತು. ಜನಪದ ದೈವಗಳು ಬಹು ಸುಲಭ ವಾಗಿ ಶೈವೀಕರಣಗೊಂಡವು. ಅವರು ಪೂಜಿಸುತ್ತಿದ್ದ ಕಲ್ಲುಗಳನ್ನು ಉದ್ಭವ ಲಿಂಗಗಳೆಂದು ಕರೆದರು.

ಇಂದು ಚಾರಿತ್ರಿಕ ಮಹತ್ವವುಳ್ಳ ಬೌದ್ಧ ಕೇಂದ್ರಗಳು ಸಂಶೋಧನೆಯ ದೃಷ್ಟಿಯಿಂದಲೂ ಹಿಂದೆ ಬಿದ್ದಿರುವುದನ್ನು ಗಮನಿಸಿದರೆ ಬುದ್ಧ, ಸಂಶೋಧಕರಿಗೂ ಬೇಡವಾಗಿದ್ದಾನೆಯೇ ಎಂದು ಕೇಳಿಕೊಳ್ಳಬೇಕಾಗಿದೆ. ಸನ್ನತಿ ಅತ್ಯಂತ ಪ್ರಾಚೀನ ಬೌದ್ಧ ಸ್ತೂಪವಿದ್ದ ಸ್ಥಳವೆಂದು ಚರಿತ್ರಾಕಾರರ ಗಮನಕ್ಕೆ ಬಂದು ಮೂರು ದಶಕಗಳೇ ಕಳೆದು ಹೋಗಿವೆ. ‘ಆರ್ಕಿಯಲಾ ಜಿಕಲ್ ಸರ್ವೆ ಆಫ್ ಇಂಡಿಯಾ’, ಸಂಶೋ ಧನೆಯ ಜವಾಬ್ದಾರಿಯನ್ನು ಹೊತ್ತು ದಶಕವೇ ಕಳೆದಿದೆ.

ಅದರ ವರದಿಗಾಗಿ ಕಾಯಲೇಬೇಕಲ್ಲ. ಸನ್ನತಿ ಅಭಿವೃದ್ಧಿ ಪ್ರಾಧಿಕಾರವೂ ಸ್ಥಾಪನೆ ಯಾಗಿದೆ. ಆ ಪ್ರದೇಶದ ಸುತ್ತ ಮುತ್ತ ಬೌದ್ಧ ಕೇಂದ್ರಗಳನ್ನು ಉಳಿಸುವ ಜವಾಬ್ದಾರಿ ಅದ ರದ್ದು. ಆ ಕಾರ್ಯವನ್ನು ನಿಭಾಯಿಸಲು ಎಂದು ಮುಂದಾಗುವುದೋ. - ಎಲ್ಲಕ್ಕೂ ಸರ್ಕಾರದ ಒತ್ತಾಸೆ ಬೇಕಲ್ಲವೇ?

ದೊಡ್ಡಬಳ್ಳಾಪುರ ಸಮೀಪದ ರಾಜಘಟ್ಟ ಊರಿನ ನೆಲದಡಿಯಲ್ಲಿ ಸೇರಿ ಹೋದ ಕಟ್ಟಡದ ಮೇಲೆ ರೈತರು ಉಳುಮೆ ಮಾಡುತ್ತಿದ್ದಾರೆ. ಇದು ಸುಮಾರು ಎರಡು ಸಾವಿರ ವರ್ಷಗಳಷ್ಟು ಹಳೆಯದಾದ ಚಾರಿತ್ರಿಕ ನಿವೇಶನ. ಚಾರಿತ್ರಿಕ ಮಹತ್ವಕ್ಕೆ ಧಾರ್ಮಿಕ ಉದ್ದೇಶವನ್ನು ಬೆರೆಸಿ ಗೋಜಲಾಗಿಸುವ ನಮ್ಮ ನಡೆಯಿಂದಾಗಿ ಈ ಬೌದ್ಧ ಕೇಂದ್ರಗಳು ಇನ್ನೂ ಅನಾಥವಾಗಿವೆ. ಕಡೆಗೆ ಅಶೋಕನ ಶಾಸನಗಳು ಜನರ ಗಮನ ಸೆಳೆಯದೇ ಹೋಗುತ್ತವೆ. ಸನ್ನತಿಯ ಕೇಂದ್ರ ಗಮನಕ್ಕೆ ಬಂದಾಗಿನಿಂದ ಈವರೆಗೆ ಅಲ್ಲಿನ ಶಿಲ್ಪಗಳು ಹಲವು ಕಡೆ ಹಂಚಿ ಹೋಗಿವೆ.

ಅಲ್ಲಿ ಸಿಕ್ಕ ಮಡಕೆ ಚೂರುಗಳು, ಆಭರಣ ಗಳು, ನಾಣ್ಯಗಳು ಹಾಗೂ ಶಿಲ್ಪಗಳನ್ನು ಮೈಸೂರು, ಬೆಂಗಳೂರು, ಧಾರವಾಡ, ಹೈದ ರಾಬಾದ್ ಹೀಗೆ ಹಲವಾರು ಮ್ಯೂಸಿಯಂಗಳಿಗೆ  ತೆಗೆದುಕೊಂಡು ಹೋಗಲಾಗಿದೆ. ಅದರ ಮೂಲ ಜಾಗಕ್ಕೆ ವಸ್ತುಗಳು ಇಲ್ಲದಂತಾಗುತ್ತವೆ. ಶಿಲ್ಪ ಗಳು ಅಪಹರಣಗೊಂಡಿದ್ದರೆ, ಅದೆಲ್ಲಾ ಭಾರತ ಚರಿತ್ರೆಯ ದುರ್ದೆಸೆಯೆಂದು ಕೈ ಚೆಲ್ಲುತ್ತೇವೆ.

ಗುಲ್ಬರ್ಗದ ಹಿನ್ನೆಲೆಯಿಂದ ಬಂದ ರಾಜ ಕೀಯ ಧುರೀಣರು, ಪುರಾತನವಾದ ಚಾರಿತ್ರಿಕ ಮಹತ್ವವುಳ್ಳ ಬೌದ್ಧ ನಿವೇಶನಕ್ಕೆ ಮಹತ್ವ ನೀಡುವ ಬದಲು ಹೊಸದಾದ, ಭವ್ಯವಾದ ಸ್ತೂಪವನ್ನು ಗುಲ್ಬರ್ಗದಲ್ಲಿ ಕಟ್ಟಿ ಆ ಮೂಲಕ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಈ ವಿಚಾರದಲ್ಲಿ ತಲೆ ಹಾಕಿದರೆ ಕಾಳಿಗುಡಿ ಅಥವಾ ಚಂದ್ರಲಾಂಬಾ ಪರಮೇಶ್ವರಿ ದೇವಾಲಯಗಳು ಎಲ್ಲಿ ವಿವಾದವನ್ನು ಹುಟ್ಟು ಹಾಕುತ್ತವೋ ಎಂಬ ಕಾರಣಕ್ಕೆ ಎಚ್ಚರಿಕೆಯನ್ನು ವಹಿಸುತ್ತಾರೆ. ಅತಿಯೆನಿಸಿದರೂ ಅದು ವಾಸ್ತವ. 

ಇಂದು ಹೆಚ್ಚಿನ ಸಂಖ್ಯೆಯಲ್ಲಿ ದಲಿತರು ಬೌದ್ಧ ಧರ್ಮವನ್ನು ಸ್ವೀಕರಿಸಿ ನವಬೌದ್ಧರಾಗಿದ್ದಾರೆ. ಅಂಬೇಡ್ಕರ್ ಬೌದ್ಧ ಧರ್ಮವನ್ನು ಸ್ವೀಕರಿಸಿದಾಗ ಮಹಾರಾಷ್ಟ್ರದ ಹಲವು ಬೌದ್ಧ ಕೇಂದ್ರಗಳ ಮೇಲೆ ಆಕ್ರಮಣಗಳೂ ನಡೆದವು. ಇಂತಹ ಹಲವು ನೆಪಗಳಿಂದಾಗಿ ಬೌದ್ಧ ಕೇಂದ್ರಗಳ ರಕ್ಷ ಣೆಯ ವಿಷಯದಲ್ಲಿ ದಲಿತ ನಾಯಕರು ಸೌಜನ್ಯ ದಿಂದ ಹಿಂದಕ್ಕೆ ಸರಿಯುತ್ತಾರೆ.

ಪ್ರವಾಸೋದ್ಯ ಮದ ಹಿನ್ನೆಲೆಯಿಂದಲೂ ಇವುಗಳ ಕಡೆ ಗಮನ ಹರಿಸಿಲ್ಲ. ಈ ನಾಡಿನ ಮೊದಲ ಶಾಸನಗಳು, ಮೊದಲ ನಗರ ಕೇಂದ್ರಗಳು, ಮೊದಲ ವ್ಯಾಪಾರ ಕೇಂದ್ರಗಳು ಅಷ್ಟೇ ಅಲ್ಲ ಮೊದಲ ರಾಜಕೀಯ ಕೇಂದ್ರಗಳೆಂಬ ಕಾರಣಕ್ಕಾಗಿಯೂ ಇವುಗಳತ್ತ ಗಮನ ಹರಿಸಬೇಕಾಗಿದೆ. ಭೌತಿಕ ವಾದ ಈ ಪುರಾವೆಗಳನ್ನು ಗೌರವಿಸುವುದು ಒಂದೆಡೆಯಾದರೆ ಅದರ ಜ್ಞಾನ ಪರಂಪರೆ ಯನ್ನು ಗಮನಿಸುವುದು ಇನ್ನೂ ಆಳವಾದ ಅಧ್ಯಯನವನ್ನು ಬೇಡುತ್ತದೆ.

ಕನ್ನಡನಾಡಿನಲ್ಲಿ ಹರಿಯುವ ಹಲವು ವಿಚಾರ ಧಾರೆಗಳಲ್ಲಿ ಬೌದ್ಧ ವಿಚಾರಧಾರೆ ಸೇರಿ ಹೋಗಿದೆ. ಸಿದ್ಧ, ಆರೂಢ, ಅವಧೂತ, ನಾಥ ಪರಂಪರೆಗಳಲ್ಲಿ ಬೌದ್ಧ ಪರಂಪರೆ ಅಂತರ್ಗತ ವಾಗಿ ಹರಿಯುತ್ತದೆ. ಮೇಲ್ನೋಟಕ್ಕೆ ಕನ್ನಡಿಗರಿಗೆ ಬುದ್ಧ ಬೇಡವಾದಂತೆ ಕಂಡರೂ ಕನ್ನಡದ ವಿಚಾರವಂತಿಕೆಗೆ ಅಡಿಪಾಯ ಹಾಕಿದ್ದು ಬುದ್ಧನ ಚಿಂತನೆಯಲ್ಲವೇ?
ನಿಮ್ಮ ಅನಿಸಿಕೆ ತಿಳಿಸಿ:    editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT