ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಏಷ್ಯಾ: ಜಾತ್ಯತೀತತೆಯ ನೋವಿನ ಕತೆ

Last Updated 16 ಜೂನ್ 2018, 9:16 IST
ಅಕ್ಷರ ಗಾತ್ರ

ಸಾರ್ಕ್ ಸದಸ್ಯ ರಾಷ್ಟ್ರಗಳಲ್ಲೆಲ್ಲ ವಿಸ್ತೀರ್ಣ, ಜನಸಂಖ್ಯೆ ಮತ್ತು ಒಟ್ಟಾರೆ ರಾಷ್ಟ್ರೀಯ ಉತ್ಪನ್ನದ ವಿಷಯದಲ್ಲಿ ಭಾರತವೇ ಮುಂಚೂಣಿ­ಯಲ್ಲಿದೆ. ಅಲ್ಲದೆ ಮಹತ್ವವಾದ ಗುಣಾತ್ಮಕ ಭಿನ್ನತೆಗೂ ಅದು ಹೆಸರಾಗಿದೆ. ತನ್ನನ್ನು  ಎಂದಿಗೂ ಯಾವುದೇ ಒಂದು ಧರ್ಮದ ಜೊತೆ ಸಂಪೂರ್ಣ­ವಾಗಿ ಗುರುತಿಸಿಕೊಳ್ಳದಿರುವ ದಕ್ಷಿಣ ಏಷ್ಯಾದ ಏಕೈಕ ರಾಷ್ಟ್ರ ಆಗಿರುವ ಕಾರಣಕ್ಕೇ ಇಂತಹ­ದ್ದೊಂದು ಸಾಧನೆ ಭಾರತಕ್ಕೆ ಸಾಧ್ಯವಾಗಿದೆ.

ಬೌದ್ಧ ಮತವು ಭೂತಾನ್‌ ಮತ್ತು ಶ್ರೀಲಂಕಾದ ಅಧಿಕೃತ ಧರ್ಮ. ಪಾಕಿಸ್ತಾನ ಒಂದು ಇಸ್ಲಾಂ ಗಣರಾಜ್ಯ. ಸುನ್ನಿ ಇಸ್ಲಾಂ ಧರ್ಮವನ್ನು ಮಾಲ್ಡೀವ್‌್ಸ ವಿಧಿವತ್ತಾಗಿ ಅಳವಡಿಸಿಕೊಂಡಿದೆ. 2008ರವರೆಗೂ ನೇಪಾಳ ಹಿಂದೂಗಳ ರಾಷ್ಟ್ರ­ವಾಗಿತ್ತು. 1971ರಲ್ಲಿ ಬಾಂಗ್ಲಾ ದೇಶ ಅಸ್ತಿತ್ವಕ್ಕೆ ಬಂದಾಗ ಜಾತ್ಯತೀತ ಗಣರಾಜ್ಯ ಎಂದೇ  ಹೆಸರಾ­ಗಿತ್ತು. ಆದರೆ 1980ರಲ್ಲಿ ಜನರಲ್‌ ಎರ್ಷಾದ್‌ ಅವರು ರಾಷ್ಟ್ರಾಧ್ಯಕ್ಷರಾದಾಗ ಇಸ್ಲಾಂಗೆ ವಿಶೇಷ ಸ್ಥಾನಮಾನ ಕಲ್ಪಿಸಿಕೊಡುವ ಸಲುವಾಗಿ ದೇಶದ ಸಂವಿಧಾನಕ್ಕೆ ತಿದ್ದುಪಡಿ ತರಲಾಯಿತು. ಇಂತಹ ಯಾವ ಉದಾಹರಣೆಯೂ ಇಲ್ಲದ ಭಾರತ ಮಾತ್ರ ಇಡೀ ದೇಶವನ್ನು ಪ್ರತಿನಿಧಿಸುವ ಯಾವುದೇ ಒಂದು ನಂಬಿಕೆಯೊಂದಿಗೆ (ಇದುವ­ರೆಗೆ) ತನ್ನನ್ನು ಗುರುತಿಸಿಕೊಂಡಿಲ್ಲ. ಆದರೆ ಇಂತಹ ನಮ್ಮ ಚಿಂತನೆ ಮತ್ತು ಪಾಲನೆಯ ನಡುವಿನ ಗೆರೆ ತೆಳುವಾಗುತ್ತಿರುವುದನ್ನು ನಾವು ಕಾಣುತ್ತೇವೆ.

ನಮ್ಮ ಜಾತ್ಯತೀತ ಸಂವಿಧಾನದ ನಡುವೆಯೂ ಧಾರ್ಮಿಕ ಬಹುಸಂಖ್ಯಾತ ವಾದವು ದೇಶದಲ್ಲಿ ಆಗಾಗ್ಗೆ ತನ್ನ ಕೆಟ್ಟ ಮುಖವನ್ನು ತೂರಿಸುತ್ತಲೇ ಇರುತ್ತದೆ. 1950ರ ಸಮಯದಲ್ಲಿ ನೆಲೆಸಿದ್ದ ಸಾಮಾಜಿಕ ಶಾಂತಿಗೆ ಮೊದಲು ಧಕ್ಕೆ ತಂದದ್ದು ಜಬಲ್‌ಪುರದಲ್ಲಿ ನಡೆದ ಪ್ರಮುಖ ಹಿಂದೂ-–ಮುಸ್ಲಿಂ ಗಲಭೆ. 1960 ಮತ್ತು 1970ರ ದಶಕ­ದಲ್ಲಿ ಉತ್ತರ ಪ್ರದೇಶ, ಬಿಹಾರ, ಗುಜರಾತ್‌ ಹಾಗೂ ಮಹಾರಾಷ್ಟ್ರಗಳಲ್ಲಿ ಅಂತರ ಧರ್ಮೀಯ ಕಾರಣಕ್ಕೆ ಸರಣಿ ಹಿಂಸಾಚಾರಗಳೇ ನಡೆದವು.

1984ರಲ್ಲಿ ಹಿಂದೂಗಳ ಗುಂಪು ದೆಹಲಿ ಮತ್ತು ಉತ್ತರ ಭಾರತದ ಇತರ ನಗರಗಳಲ್ಲಿ ಸಿಖ್ಖರ ಮಾರಣಹೋಮ ನಡೆಸಿತು. 1990ರಲ್ಲಿ ಇಸ್ಲಾಂ ಮೂಲಭೂತವಾದಿಗಳು ಕಾಶ್ಮೀರ ಕಣಿವೆ­ಯಲ್ಲಿದ್ದ ಅಧಿಕ ಸಂಖ್ಯೆಯ ಹಿಂದೂಗಳನ್ನು ಹೊರ­­ದಬ್ಬಿದರು. ಈ ಕೃತ್ಯಗಳಂತೂ ಭೀಕರ­ವಾಗಿ­ದ್ದವು. 1980 ಮತ್ತು 1990ರಲ್ಲಿ ನಡೆದ ರಾಮ­ಜನ್ಮ­ಭೂಮಿ ಚಳವಳಿ ಅಲ್ಲಿಗಿಂತಲೂ ಹೆಚ್ಚಿನ ಸಾವು­-–ನೋವುಗಳನ್ನು ತಂದೊಡ್ಡಿತು. ಇದು ದೇಶದ ಉತ್ತರ ಮತ್ತು ಪಶ್ಚಿಮ ಭಾಗದಲ್ಲಿ ಸರಣಿ ರಕ್ತಪಾತಗಳಿಗೆ ಎಡೆಮಾಡಿಕೊಟ್ಟಿತು. ಇಲ್ಲೆಲ್ಲ ಪ್ರಮುಖವಾಗಿ ಬಲಿಯಾದವರು ಸಾಮಾನ್ಯ ಮುಸ್ಲಿಮರು. 2002ರಲ್ಲಿ ಗುಜ­ರಾತ್‌­ನಲ್ಲಿ ಹಿಂದೂ ಉಗ್ರವಾದಿಗಳು ಸಾವಿರಕ್ಕೂ ಹೆಚ್ಚು ಮುಸ್ಲಿಮರನ್ನು ಕೊಂದು ಹಾಕಿದರಲ್ಲದೆ ಹಲವಾರು ಜನರನ್ನು ನಿರಾಶ್ರಿತರನ್ನಾಗಿಸಿದರು. ದೇಶದ ಬಹುತೇಕ ಭಾಗಗಳಲ್ಲಿ ಮುಸ್ಲಿಮರು ---ಗಾಸಿಗೊಳಗಾದರು ಮತ್ತು  ಅಭದ್ರತೆಯಿಂದ ಬದುಕ­ತೊಡಗಿದರು.ಇಂತಹ ಪರಿಸ್ಥಿತಿ ಸದ್ಯದಲ್ಲಿ ಬದಲಾಗುವ ಲಕ್ಷಣ ಸಹ ಕಾಣಿಸುತ್ತಿಲ್ಲ.

ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದಾ­ಗಲೆಲ್ಲ ಹೆಚ್ಚು ಪ್ರಭಾವಿಯಾಗುವ ರಾಷ್ಟ್ರೀಯ ಸ್ವಯಂಸೇವಕ ಸಂಘವು ಹಿಂದೂ ಪುರೋಹಿತ­ಶಾಹಿ ದೇಶ ಕಟ್ಟುವ ತನ್ನ ಇಂಗಿತಕ್ಕೆ ಬದ್ಧವಾ­ಗಿಯೇ ಇದೆ. ಆರ್‌ಎಸ್‌ಎಸ್‌ ಮುಖ್ಯಸ್ಥರು, ಬಿಜೆಪಿ ಸಂಸದರು ಹಾಗೂ ಸಚಿವರ ಇತ್ತೀ­ಚಿನ ಹೇಳಿಕೆಯಿಂದ ಪಕ್ಷದ ಬಹುಸಂಖ್ಯಾತ ವಾದದ ಆಂತರಿಕ ಸ್ವರೂಪ ಸ್ಪಷ್ಟವಾಗೇ ಗೋಚರಿಸುತ್ತದೆ. ಹಿಂದೂ ಬಲಪಂಥೀಯರ ಪ್ರಾಬಲ್ಯವು ಭಾರ­ತೀಯ ರಾಜಕೀಯದ ಸ್ವರೂಪ ಮತ್ತು ಸಾಮಾ­ಜಿಕ ಬದುಕನ್ನೇ ಬದಲಿಸಿದ್ದು, ಬಹು­ಸಾಂಸ್ಕೃತಿಕತೆ ಮತ್ತು ಸಹಿಷ್ಣುತೆಯಿಂದ ಅದನ್ನು ಇನ್ನಷ್ಟು ದೂರ ಕೊಂಡೊಯ್ಯುತ್ತಿರುವುದು ವೇದ್ಯವಾಗು­ತ್ತದೆ.

ತನ್ನ ಧಾರ್ಮಿಕ ಅಲ್ಪಸಂಖ್ಯಾತರನ್ನು ನಡೆಸಿ­ಕೊಳ್ಳುವ ವಿಷಯದಲ್ಲಿ ಭಾರತಕ್ಕೆ ಸಮ್ಮಿಶ್ರ ಪ್ರತಿ­ಕ್ರಿಯೆಯ ದಾಖಲೆ ಇದೆ. ಆದರೂ ಪಾಕಿಸ್ತಾನಕ್ಕೆ ಹೋಲಿಸಿದರೆ ಅದನ್ನು ಸಕಾರಾತ್ಮಕ ಎಂದೇ ಹೇಳ­ಬಹುದು. ನಮ್ಮಲ್ಲಿ ನಂಬಿಕೆ ಮತ್ತು ಪ್ರಭುತ್ವಕ್ಕೆ ಸಾಂವಿಧಾನಿಕ ಪ್ರತ್ಯೇಕತೆ ಇದ್ದರೆ, ಪಾಕಿಸ್ತಾನವು ಮುಸ್ಲಿಮರ ತಾಯ್ನೆಲವಾಗಿಯೇ ಅಸ್ತಿತ್ವಕ್ಕೆ ಬಂದ ರಾಷ್ಟ್ರ. ಮೊದಲ ಮೂರು ದಶಕಗಳಲ್ಲಿ ಪಾಕಿ­ಸ್ತಾ­ನದ ಧಾರ್ಮಿಕ ಸ್ವರೂಪ ಬಹುಶಃ ಸೌಮ್ಯ­ವಾದಿ­ಯಾಗಿಯೇ ಇತ್ತು. ಅಲ್ಪಸಂಖ್ಯಾತರಿಗೆ ತಮಗಿದ್ದ ಸಾಧಾರಣ ಸ್ಥಾನಮಾನದ ಅರಿವಿತ್ತು. ಆದಾಗ್ಯೂ ಅವರು ಹೆಚ್ಚು ಕಿರುಕುಳವನ್ನೇನೂ ಅನುಭವಿಸುತ್ತಿ­ರಲಿಲ್ಲ. ಆದರೆ ಜನರಲ್‌ ಜಿಯಾ ಉಲ್‌ ಹಕ್‌ ಅವರ ದೀರ್ಘ ಆಡಳಿತಾವಧಿಯಲ್ಲಿ (1977-– 88) ದೇಶವನ್ನು ಇಸ್ಲಾಮೀಕರಣಗೊಳಿಸುವ ಪ್ರಕ್ರಿಯೆ ತೀವ್ರವಾಯಿತು. ಷರಿಯಾ ಕಾನೂನು­ಗಳನ್ನು ಅಳವಡಿಸಿಕೊಳ್ಳಲಾಯಿತು. ಅಲ್ಪಸಂಖ್ಯಾ­ತರ ಬಾಯಿ ಮುಚ್ಚಿಸಲು ಧರ್ಮನಿಂದನೆಗೆ ಸಂಬಂಧಿ­ಸಿದಂತೆ ಕಠಿಣವಾದ ಕಾನೂನುಗಳು ಜಾರಿಗೆ ಬಂದವು. ಅಹಮದೀಯರಂತಹ ಪಂಗಡ­ಗಳನ್ನು ‘ಇಸ್ಲಾಂ ರಹಿತ’ ಎಂದು ಘೋಷಿಸಲಾ­ಯಿತು. ಕೊಲ್ಲಿ ರಾಷ್ಟ್ರಗಳ ಆರ್ಥಿಕ ನೆರವಿನಲ್ಲಿ ಎಲ್ಲೆಲ್ಲೂ ಮದ್ರಸಾಗಳು ತಲೆ ಎತ್ತತೊಡಗಿದವು. ಅವು ಇಸ್ಲಾಂನ ಕಠಿಣ ವಹಾಬಿ ಪಂಥದ ಉಪ­ದೇಶಗಳನ್ನು ಬೋಧಿಸತೊಡಗಿದವು.

ಸುನ್ನಿ ಉಗ್ರರು ಮೊದಲು ಹಿಂದೂಗಳು ಮತ್ತು ಕ್ರಿಶ್ಚಿಯನ್ನರನ್ನು ಗುರಿಯಾಗಿಸಿಕೊಂಡರು. ಅಲ್ಪಸಂಖ್ಯೆಯಲ್ಲಿದ್ದ ಈ ಸಮುದಾಯಗಳನ್ನು ಸುಲಭವಾಗಿ ದಮನ ಮಾಡಬಹುದಾಗಿತ್ತು. ಬಳಿಕ ಅವರು ದೇಶದ ಅತಿ ದೊಡ್ಡ ಷಿಯಾ ಸಮು­ದಾ­ಯದತ್ತ ಕಣ್ಣು ನೆಟ್ಟರು. ಈ ಸಮು­ದಾಯ ಒಂದು ಕಾಲದಲ್ಲಿ ದೇಶದ ವೃತ್ತಿಪರ ಮತ್ತು ರಾಜ­ಕೀಯ ನಾಯಕತ್ವದಲ್ಲಿ (ಸ್ವತಃ ಜಿನ್ನಾ ಅವರೇ ಷಿಯಾ ಪಂಗಡಕ್ಕೆ ಸೇರಿದವರು) ಗಣ­ನೀಯವಾದ ಪ್ರಭಾವ ಹೊಂದಿತ್ತು. ಇತ್ತೀಚಿನ ವರ್ಷಗಳಲ್ಲಿ ಷಿಯಾಗಳಿಗೆ ಸೇರಿದ ಮಂದಿರಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮೇಲೆ ನಿರಂತರವಾಗಿ ಅಮಾನುಷವಾದ ದಾಳಿಗಳು ನಡೆ­ದಿವೆ. ಕಾನೂನು ಅಥವಾ ನಡವಳಿಕೆಯಲ್ಲಿ ಹಿಂದೂ­ಗಳು ಮತ್ತು ಕ್ರಿಶ್ಚಿಯನ್ನರನ್ನು ಎರಡನೇ ದರ್ಜೆಯ ನಾಗರಿಕರಂತೆ ನಡೆಸಿಕೊಳ್ಳಬಾರದು ಎಂದು ನಂಬುವ ಮುಸ್ಲಿಂ ರಾಜಕಾರಣಿಗಳು ಮತ್ತು ಬುದ್ಧಿಜೀವಿಗಳೂ ಜಿಹಾದಿಗಳ ದಾಳಿಗೆ ಗುರಿಯಾಗಿದ್ದಾರೆ.

ದೇಶ ವಿಭಜನೆಗೊಂಡ ಕಾಲದಲ್ಲಿ ಪಶ್ಚಿಮ ಪಾಕಿ­ಸ್ತಾನಕ್ಕಿಂತ ಪೂರ್ವ ಪಾಕಿಸ್ತಾನದಲ್ಲಿ ಅಧಿಕ ಸಂಖ್ಯೆಯ ಹಿಂದೂಗಳು ನೆಲೆಸಿದ್ದರು. 1950ರ ಹೊತ್ತಿಗೆ ಹಿಂದೂಗಳು ಪಶ್ಚಿಮ ಬಂಗಾಳಕ್ಕೆ ವಲಸೆ ಬರುವುದು ಸಾಮಾನ್ಯ ಸಂಗತಿಯಾಯಿತು. 1963­ರಲ್ಲಿ ಶ್ರೀನಗರದ ಹಜರತ್‌ಬಾಲ್‌ ಮಸೀದಿ­­­ಯಿಂದ ಪ್ರವಾದಿಯ ಪವಿತ್ರ ಅವಶೇಷ ಕಳುವಾಯಿತು ಎನ್ನಲಾಗಿದ್ದು, ಆಗಿನಿಂದ ಪೂರ್ವ ಪಾಕಿಸ್ತಾನ­ದಲ್ಲಿ ಹಿಂದೂಗಳ ಮೇಲೆ ದಾಳಿಗಳು ಹೆಚ್ಚಾದವು. ಇದರಿಂದ ಭಾರತದ ಕಡೆಗಿನ ವಲಸೆ ಪ್ರಕ್ರಿಯೆ ಇನ್ನಷ್ಟು ತೀವ್ರವಾಯಿತು.
ಇಷ್ಟಾದರೂ 1971ರ ಬಾಂಗ್ಲಾ ಯುದ್ಧದ ಸಂದರ್ಭದಲ್ಲಿ ಲಕ್ಷಾಂತರ ಹಿಂದೂಗಳು ಅಲ್ಲೇ ಉಳಿದುಕೊಂಡರು. ಹಲವು ಹಿಂದೂ ಕಾರ್ಯ­ಕರ್ತರು ಬಾಂಗ್ಲಾ ದೇಶದ ಸ್ವಾತಂತ್ರ್ಯ ಚಳವಳಿ­ಯಲ್ಲಿ ಭಾಗವಹಿಸಿದ್ದರು. ಈ ಚಳವಳಿಯು ಧರ್ಮಕ್ಕಿಂತ ಹೆಚ್ಚಾಗಿ ಭಾಷೆಯ ಸುತ್ತ ಕೇಂದ್ರೀಕೃತವಾಗಿತ್ತು.

ಬಾಂಗ್ಲಾ ದೇಶ ಅಸ್ತಿತ್ವಕ್ಕೆ ಬಂದ ಸಂದರ್ಭದಲ್ಲಿ ತನ್ನ ಜಾತ್ಯತೀತತೆಯ ವಿಶಿಷ್ಟ ಗುಣಗಳಿಂದ ಬೀಗುತ್ತಿತ್ತು. ಬಂಗಾಳಿ ಹಿಂದೂವಾಗಿದ್ದ ರವೀಂದ್ರನಾಥ ಟ್ಯಾಗೋರರ ಗೀತೆ­ಯೊಂದನ್ನು ರಾಷ್ಟ್ರಗೀತೆಯನ್ನಾಗಿ ಅದು ಅಳ­ವಡಿಸಿಕೊಂಡಿತ್ತು. ಆದರೆ ಸ್ವಾತಂತ್ರ್ಯ ಸಿಕ್ಕ ನಾಲ್ಕು ದಶಕಗಳಲ್ಲಿ ಸಮಾಜವನ್ನು ಇಸ್ಲಾಮೀಕರಣ ಗೊಳಿ­ಸುವ ಪ್ರಯತ್ನ ನಿಧಾನವಾಗಿ ಸಾಗಿ ಬಂತು. ಆ ಪ್ರಯತ್ನ ಇನ್ನೂ ನಿಂತಿಲ್ಲವಾದರೂ  ಪಾಕಿ­ಸ್ತಾ­ನ­ದಷ್ಟು ಹಿಂಸಾತ್ಮಕ ಸ್ವರೂಪ ತಳೆದಿಲ್ಲ. ಆದರೆ ಚಕ್ಮಾ ಕಣಿವೆಯ ಬೌದ್ಧ ಧರ್ಮೀಯರು ಬಯ­ಲು­ಸೀಮೆಯಿಂದ ವಲಸೆ ಬಂದ ಮುಸ್ಲಿಮರಿಗೆ ತಮ್ಮ ಭೂಮಿಯನ್ನು ಹಸ್ತಾಂತರಿಸಿದ್ದಾರೆ. ಬಂಗಾಳಿ ಹಿಂದೂಗಳು ಭಾರತದತ್ತ ಮುಖ ಮಾಡುತ್ತಲೇ ಇದ್ದಾರೆ.

ಶ್ರೀಲಂಕಾದಲ್ಲಿ ಸಹ ಒಂದು ಕಾಲದಲ್ಲಿ ರಾಜಕೀಯ ವಿವಾದಗಳ ಮೂಲವು ನಂಬಿಕೆಗಿಂತ ಹೆಚ್ಚಾಗಿ ಭಾಷೆಯೇ ಆಗಿತ್ತು. ದಕ್ಷಿಣ ಭಾಗದಲ್ಲಿ ಹೆಚ್ಚಾಗಿದ್ದ ಸಿಂಹಳೀಯರು ಉತ್ತರ ಭಾಗದಲ್ಲಿ ಪ್ರಾಬಲ್ಯ ಹೊಂದಿದ್ದ ತಮಿಳು ಅಲ್ಪ­ಸಂಖ್ಯಾತರ ಆರ್ಥಿಕ ಪ್ರಗತಿ ಕಂಡು ವಿಚಲಿತರಾಗಿ­ದ್ದರು. ಇದರ ಪರಿಣಾಮವಾಗಿ ಅವರು ಸಿಂಹಳ­ವನ್ನು ರಾಷ್ಟ್ರದ ಏಕೈಕ ಭಾಷೆಯನ್ನಾಗಿ ಘೋಷಿಸಿ­ದರು. ಇದರಿಂದ ಕಾಲೇಜು ಪ್ರವೇಶ ಮತ್ತು ಸರ್ಕಾರಿ ಉದ್ಯೋಗಕ್ಕೆ ಈ ಭಾಷೆಯ ಜ್ಞಾನ ಕಡ್ಡಾ­ಯವಾಯಿತು. ಈ ಕಾರಣಕ್ಕಾಗಿ ಹುಟ್ಟಿ­ಕೊಂಡ ನಾಗರಿಕ ಯುದ್ಧ ಕೊನೆಗೊಳ್ಳಲು ನಾಲ್ಕು ದಶಕಗಳೇ ಬೇಕಾದವು.

1972ರಲ್ಲಿ ಸಿಂಹಳ ಮತ್ತು ತಮಿಳು ವಿವಾದ ತೀವ್ರಗೊಳ್ಳುತ್ತಿದ್ದಂತೆಯೇ ಬೌದ್ಧ ಮತವನ್ನು ರಾಷ್ಟ್ರಧರ್ಮವನ್ನಾಗಿ ಅಂಗೀಕರಿಸಲಾಯಿತು. ಇದ­ರಿಂದ ಬೌದ್ಧ ಧರ್ಮದವರಲ್ಲದ, ಹಿಂದೂ­ಗಳು, ಮುಸ್ಲಿಮರು ಮತ್ತು ಕ್ರೈಸ್ತರನ್ನು ಒಳ­ಗೊಂಡ ತಮಿಳರಿಗೆ ಭಾರಿ ಹಿನ್ನಡೆಯಾಯಿತು. ಈ ಮೂಲಕ ಭಾಷಾ ವಿವಾದಕ್ಕೆ ಧಾರ್ಮಿಕ ಬಹು­ಸಂಖ್ಯಾತವಾದವೂ ಸೇರಿಕೊಂಡಿತು. ಸಿಂಹಳೀ­ಯರ ಪ್ರಾಬಲ್ಯ ಇದ್ದ ಶ್ರೀಲಂಕಾದ ಸೇನೆಗೆ ಸಿಂಹ­ಳೀಯ ಬೌದ್ಧ ಬಿಕ್ಕುಗಳು ಹುರುಪು ತುಂಬುವ ನಾಯಕರಾದರು. 2009ರಲ್ಲಿ ಯುದ್ಧ ಕೊನೆ­ಗೊಂಡಾಗ ಬೌದ್ಧ ಮತದ ಧಾರ್ಮಿಕ ಮುಖಂಡರು ಆಗಿನ ಸರ್ವಾಧಿಕಾರಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರ ಜೊತೆ ಗುರುತಿಸಿ­ಕೊಂಡರು. ಈ ವರ್ಷದ ಆರಂಭದಲ್ಲಿ ಬೌದ್ಧ ಮತೀಯ ಉಗ್ರರ ಗುಂಪೊಂದು ಪೂರ್ವ ಶ್ರೀಲಂಕಾ­ದಲ್ಲಿ ಮುಸ್ಲಿಮರ ಮೇಲೆ ದಾಳಿ ನಡೆ­ಸಿತು.  ಬಹುಸಂಸ್ಕೃತಿಯ ಸಹಿಷ್ಣುಗಳಲ್ಲದ ತಮಿಳು ಈಳಂ ವಿಮೋಚನಾ ವ್ಯಾಘ್ರ ಪಡೆ (ಎಲ್‌ಟಿಟಿಇ) ಕಾರ್ಯಕರ್ತರಿಗೆ ಅಷ್ಟೇ ಸಾಕಾಯಿತು. ಅವರು ಸಹ ಜಾಫ್ನಾ, ಮನ್ನಾರ್‌, ಬಟ್ಟಿಕಲೋವ ಮತ್ತಿ­ತರ ಪಟ್ಟಣಗಳಲ್ಲಿ ಮುಸ್ಲಿಮರ ಮನೆಗಳು, ಮಸೀ­ದಿ­ಗಳನ್ನು ಧ್ವಂಸಗೊಳಿಸಿದರು. ತಮಿಳು ಕ್ರೈಸ್ತರ ಮೇಲೂ ದೌರ್ಜನ್ಯಗಳು ನಡೆದವು. ಈ ರೀತಿ ವ್ಯಾಘ್ರ ಪಡೆಯು ಸಿಂಹಳ ಮತ್ತು ತಮಿಳು ಭಾಷೆ­ಗಳ ನಡುವೆ ಇದ್ದ  ವಾಗ್ವಾದವನ್ನು ಬೌದ್ಧ ಮತೀ­ಯರು ಹಾಗೂ ಹಿಂದೂಗಳ ನಡುವಿನ ವಿವಾದವ­ನ್ನಾಗಿ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು.

ಭೂತಾನ್‌ ಶಾಂತಿ­ಯುತ ಮತ್ತು ಮನ­ಮೋಹಕ­ವಾದ ತಾಣಗಳಿಗೆ ಸುಪ್ರಸಿದ್ಧ. ಅಲ್ಲಿನ  -ವಿಹಾರ ಧಾಮಗಳು ಹಾಗೂ ಅರಣ್ಯಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಹಿಂದೆ  ಸ್ಥಳೀಯ ಪ್ರಭುತ್ವ ಎಸಗಿದ್ದ ಕೃತ್ಯಗಳ ಅರಿವಿರ­ಲಾ­ರದು. 1990ರಲ್ಲಿ ತನ್ನ ಬೌದ್ಧ ಧರ್ಮದ ವೈಶಿಷ್ಟ್ಯ ಕಾಯ್ದುಕೊಳ್ಳುವ ಸಲುವಾಗಿ, ಎಷ್ಟೋ ಕಾಲದಿಂದ ಗಡಿಗುಂಟ ನೆಲೆಸಿದ್ದ ಹಿಂದೂ ಕುಟುಂಬಗಳನ್ನು ಅದು ನೇಪಾಳಕ್ಕೆ ದಬ್ಬಿತ್ತು.
19 ಮತ್ತು 20ನೇ ಶತಮಾನದುದ್ದಕ್ಕೂ ನೇಪಾಳ ಒಂದು ಹಿಂದೂ ರಾಷ್ಟ್ರವಾಗಿತ್ತು. ಅಲ್ಲಿನ ಅರಸನನ್ನು ಭೂಮಿಯ ಮೇಲಿನ ವಿಷ್ಣು­ವಿನ ಪ್ರತಿನಿಧಿ ಎಂದೇ ಎಲ್ಲರೂ ಭಾವಿಸುತ್ತಿದ್ದರು. 2008ರಲ್ಲಿ ರಾಜಪ್ರಭುತ್ವ ರದ್ದಾದ ಬಳಿಕ ದೇಶ ಜಾತ್ಯತೀತ ಗಣರಾಜ್ಯವಾಗಿ ಬದಲಾಯಿತು. ಬಹುಶಃ ಕೋಮು ಹಿಂಸಾಚಾರದ ಲೆಕ್ಕದಲ್ಲಿ  ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲೆಲ್ಲ ನೇಪಾಳವೇ ಅತ್ಯಂತ ಕಡಿಮೆ ದಾಖಲೆ ಹೊಂದಿದೆ. ಮುಸ್ಲಿಮರ ಮೇಲೆ ದಾಳಿ ನಡೆದ ಉದಾಹರಣೆಗಳು ಇದ್ದರೂ ಅಲ್ಲಿ ಹೆಚ್ಚು ವಿವಾದ ಇರುವುದು ಧರ್ಮಕ್ಕೆ ಸಂಬಂಧಿಸಿದಂತೆ ಅಲ್ಲ; ಬದಲಾಗಿ, ಆರ್ಥಿಕ (ಭೂ­ಮಾಲೀಕರು ಮತ್ತು ಭೂ ರಹಿತರು) ಭೌಗೋಳಿಕ (---ಬಯಲುಸೀಮೆ ಮತ್ತು ಕಣಿವೆ) ಅಥವಾ ಸಾಮಾ­ಜಿಕ (ಬ್ರಾಹ್ಮಣರು ಮತ್ತು ಇತರ ಜಾತಿಗಳು) ಕಾರಣಗಳಿಗೆ ಸಂಬಂಧಿಸಿದಂತೆ.

ವಸಾಹತೋತ್ತರ ಚರಿತ್ರೆಯಲ್ಲಿ ಭಾರತ ಮತ್ತು ಶ್ರೀಲಂಕಾಗಳು ಮಾತ್ರ ದಕ್ಷಿಣ ಏಷ್ಯಾ­ದ­ಲ್ಲಿನ ಚುನಾಯಿತ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿ­ದ್ದವು. ಆದರೆ ಈಗ ಪಾಕಿಸ್ತಾನ, ಬಾಂಗ್ಲಾ ಮತ್ತು ನೇಪಾಳದಲ್ಲೂ ಇದೇ ವ್ಯವಸ್ಥೆ ಇದೆ. ರಾಜ­ಪ್ರಭುತ್ವ ಇರುವ ಭೂತಾನ್‌ನಲ್ಲೂ ಚುನಾವಣೆ ನಡೆದಿದೆ. ಇದೇ ಮೊದಲ ಬಾರಿಗೆ ಈ ಪ್ರದೇಶದ ಎಲ್ಲ ರಾಷ್ಟ್ರಗಳಲ್ಲೂ ಚುನಾಯಿತ ಸರ್ಕಾರಗಳಿವೆ.

ಇಷ್ಟಾದರೂ ದಕ್ಷಿಣ ಏಷ್ಯಾ ದೇಶಗಳಲ್ಲಿ ಜಾರಿಗೆ ಬಂದ ಚುನಾಯಿತ ಪ್ರಜಾಪ್ರಭುತ್ವಕ್ಕೆ  ಸಮಾನ ನಾಗರಿಕತ್ವ ಒದಗಿಸಲು ಮಾತ್ರ ಸಾಧ್ಯ­ವಾಗಿಲ್ಲ. ಬಡತನ ಮತ್ತು ಅಸಮಾನತೆ ವ್ಯಾಪಕ­ವಾಗಿದೆ. ಭಾಷೆಯ, ಅದರಲ್ಲೂ ನಂಬಿಕೆಯ ಆಧಾರದ ಮೇಲೆ ಸ್ಪಷ್ಟವಾಗಿ ಗೋಚರಿಸುತ್ತಿರುವ ತಾರತಮ್ಯ ಆತಂಕಕಾರಿಯಾಗಿದೆ. ಕೆಲವೊಮ್ಮೆ ಕಠಿಣ ಎನಿಸುವ ಮತ್ತೂ ಕೆಲವೊಮ್ಮೆ ಅಸಾಧ್ಯ ಎನಿ­ಸುವ ಸಂಗತಿ ಎಂದರೆ, ಪಾಕಿಸ್ತಾನದಲ್ಲಿ ಹಿಂದೂ, ಕ್ರೈಸ್ತ ಅಥವಾ ಷಿಯಾ ಆಗಿ ಹುಟ್ಟು­ವುದು, ಶ್ರೀಲಂಕಾದಲ್ಲಿ ಹಿಂದೂ ಅಥವಾ ಮುಸ್ಲಿಂ ಆಗಿರುವುದು, ಬಾಂಗ್ಲಾ ದೇಶದಲ್ಲಿ ಹಿಂದೂ ಅಥವಾ ಬೌದ್ಧ ಧರ್ಮೀಯ ಎನಿಸಿಕೊಳ್ಳುವುದು ಮತ್ತು ಭಾರತ ಅಥವಾ ನೇಪಾಳದಲ್ಲಿ ಮುಸ್ಲಿಂ ಆಗಿ ಜನ್ಮತಾಳುವುದು.

ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT