ಅಧಿಕಾರ ಎಂಬುದು ಒಂದು ಅವಕಾಶ. ಒಂದು ಸುಸಂಧಿ. ರಂಗಭೂಮಿಯ ನಟರಾಗಿ ಪ್ರಖ್ಯಾತರಾದ `ಮುಖ್ಯಮಂತ್ರಿ' ಚಂದ್ರು ಅವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಎರಡನೇ ಅವಧಿಗೆ ಕೆಲಸ ಮಾಡುವ ಭಾಗ್ಯ ಸಿಕ್ಕಿದೆ. ಆದರೆ, ಅವರು ಮತ್ತು ಪ್ರಾಧಿಕಾರದ ಇತರ ಸದಸ್ಯರು ಮೂಲ ಉದ್ದೇಶಗಳನ್ನೇ ಮರೆತಂತೆ ಕಾಣುತ್ತದೆ. ಇಲ್ಲವಾದರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ವಿವಿಧ ಅಕಾಡೆಮಿಗಳು ಮಾಡುವ ಕೆಲಸವನ್ನು ಪ್ರಾಧಿಕಾರವೂ ಮಾಡುತ್ತಿರಲಿಲ್ಲ.
ರಾಷ್ಟ್ರೀಯ ಜಲನೀತಿಯನ್ನು ರೂಪಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪ್ರಧಾನಿಗೆ ಮನವಿ ಕೊಡುವುದಂತೂ ಅತಿರೇಕ ಎನ್ನುವಂಥ ಕೆಲಸ. ನಿಜ, ಕನ್ನಡ ಎಂದರೆ ನಾಡು, ನುಡಿ, ನೀರು ಎಲ್ಲದಕ್ಕೂ ಸಂಬಂಧಪಟ್ಟುದು. ಆದರೆ, ಪ್ರಾಧಿಕಾರಕ್ಕೆ ಏನು ಕೆಲಸ ಮಾಡಬೇಕು ಎಂದು ಸರ್ಕಾರ ಗೊತ್ತುಪಡಿಸಿದೆಯಲ್ಲ? ಕರ್ನಾಟಕದ ಮುಖ್ಯಮಂತ್ರಿಗಳಿಗೆ, ಜಲಸಂಪನ್ಮೂಲ ಸಚಿವರಿಗೆ ಹೊಳೆಯದ್ದನ್ನು ಅಥವಾ ಅವರು ಮಾಡಲಾಗದ್ದನ್ನು ತಾನು ಮಾಡುತ್ತಿದ್ದೇನೆ ಎಂದು `ಮುಖ್ಯಮಂತ್ರಿ' ಚಂದ್ರು ಹೇಳಲು ಹೊರಟಿದ್ದಾರೆಯೇ? ಅವರಿಗೆ ಆ ಉದ್ದೇಶ ಇದೆಯೋ ಇಲ್ಲವೋ ಗೊತ್ತಿಲ್ಲ.
ಆದರೆ, ಅವರ ಕ್ರಿಯೆ ಅಂಥ ಒಂದು ಅರ್ಥವನ್ನು ಧ್ವನಿಸುತ್ತದೆ. ಅವರು ಮತ್ತೆ ಮತ್ತೆ ವಿದೇಶ ಪ್ರವಾಸ ಮಾಡುತ್ತಿರುವುದು, ಅಲ್ಲಿನ ಕನ್ನಡ ಸಂಘ ಸಂಸ್ಥೆಗಳಿಗೆ ಕೊಡುಗೈ ದಾನಶೂರತನ ತೋರಿಸುತ್ತಿರುವುದು ಇಂಥದೇ ಇನ್ನೊಂದು ಅತಿರೇಕದ ಕೆಲಸ. ಮನೆಗೆದ್ದು ಮಾರು ಗೆಲ್ಲಬೇಕು ಎಂಬ ಮಾತು ಇದೆ. `ಮುಖ್ಯಮಂತ್ರಿ' ಚಂದ್ರು ಇನ್ನೂ ತಮ್ಮ ಮನೆಯನ್ನೇ ಗೆದ್ದಿಲ್ಲ. ಮಾರು ಹೇಗೆ ಗೆಲ್ಲುತ್ತಾರೆ?